ರಾಜಕೀಯ ಬೆಳವಣಿಗೆ ಬಗ್ಗೆ ಸಿಎಂ ಕುಮಾರಸ್ವಾಮಿ ಮೊದಲ ಪ್ರತಿಕ್ರಿಯೆ
ಬೆಂಗಳೂರು, ಜುಲೈ 08: ಅಮೆರಿಕ ಪ್ರವಾಸ ಮುಗಿಸಿಕೊಂಡು ಬೆಂಗಳೂರಿಗೆ ಬಂದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸುಧಾರಿಸಿಕೊಳ್ಳುವ ಮೊದಲೇ ರಾಜಕೀಯ ಅಸ್ಥಿರತೆ ಬಗ್ಗೆ ಗಮನ ಹರಿಸಬೇಕಾದ ಪರಿಸ್ಥಿತಿ ಎದುರಿಸಿದ್ದಾರೆ.
ಕರ್ನಾಟಕದಲ್ಲಿ ಶಾಸಕರ ಸರಣಿ ರಾಜೀನಾಮೆಯಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ನಿಭಾಯಿಸಿಕೊಂಡು ಸರ್ಕಾರವನ್ನು ಉಳಿಸಿಕೊಳ್ಳುವ ಸಾಧ್ಯತೆಗಳ ಮೊದಲ ಪ್ರತಿಕ್ರಿಯೆ ನೀಡಿದ್ದು, ನನಗೆ ಯಾವ ಭಯವೂ ಇಲ್ಲ, ಯಾರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ, ಮೈತ್ರಿ ಸರ್ಕಾರದ ಜವಾಬ್ದಾರು ನಿಭಾಯಿಸುತ್ತಿದ್ದೇನೆ ಎಂದು ಪಿಟಿಐ ಜೊತೆ ಹೇಳಿದ್ದಾರೆ.
10 ದಿನಗಳ ಯುಎಸ್ ಪ್ರವಾಸ ಮುಗಿಸಿಕೊಂಡು ಭಾನುವಾರ ತಡ ರಾತ್ರಿ ಬಂದ ಕುಮಾರಸ್ವಾಮಿ ಅವರು ಯಾರಿಗೂ ಪ್ರತಿಕ್ರಿಯೆ ನೀಡಿರಲಿಲ್ಲ. 13 ಶಾಸಕರ ರಾಜೀನಾಮೆ ನಂತರ ಸರ್ಕಾರದ ಭವಿಷ್ಯವೇನು? ಎಂದು ಪ್ರಶ್ನಿಸಲು ಎಲ್ಲರೂ ಸಜ್ಜಾಗಿ ಕಾದಿದ್ದರು. ಆದರೆ, ರೈತರ ಜತೆ ಸಭೆ ಮುಗಿದ ನಂತರ ಈ ಬಗ್ಗೆ ಮಾತನಾಡಿದ ಸಿಎಂ, ರಾಜಕೀಯ ಬೆಳವಣಿಗೆ ಬಗ್ಗೆ ಮಾತನಾಡಲಾರೆ, ಬಿಜೆಪಿ ಏನು ಮಾಡುತ್ತಿದೆ, ಇತರರು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ, ಮೈತ್ರಿ ಧರ್ಮ ಪಾಲಿಸುತ್ತಿದ್ದೇನೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ನಿಲ್ಲದ್ದಂತೆ ನೋಡಿಕೊಳ್ಳಬೇಕು, ಮೈತ್ರಿ ಜವಾಬ್ದಾರಿಯನ್ನು ನಿಭಾಯಿಸುವುದು ಮುಖ್ಯ, ರಾಜಕೀಯ ಬೆಳವಣಿಗೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.
ಅಲ್ಪಮತಕ್ಕೆ ಕುಸಿತದ ಮೈತ್ರಿ ಸರ್ಕಾರ: ಕಾಂಗ್ರೆಸ್ ಹಾಗೂ ಜೆಡಿಎಸ್ ನ 13 ಶಾಸಕರ ರಾಜೀನಾಮೆ ನಂತರ ಮೈತ್ರಿ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಎಲ್ಲಾ 22 ಸಚಿವರ ಸರಣಿ ರಾಜೀನಾಮೆ ನಂತರ ಸರ್ಕಾರ ಉಳಿಯುವುದೋ ಅಥವಾ ಸರ್ಕಾರ ಪತನವಾಗುವುದೋ ಎಂಬ ಆತಂಕ ಮನೆ ಮಾಡಿದೆ. ಮೈತ್ರಿ ಸರ್ಕಾರವನ್ನು ರಕ್ಷಣೆ ಮಾಡಲು 'ಕಾಮರಾಜ ಮಾರ್ಗ' ಅನುಸರಿಸಿ ಎಲ್ಲಾ ಸಚಿವರು ರಾಜೀನಾಮೆ ಪಡೆದು, ಅತೃಪ್ತರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಮತ್ತೊಮ್ಮೆ ಸಂಪುಟ ವಿಸ್ತರಣೆಗೆ ಕುಮಾರಸ್ವಾಮಿ ಮುಂದಾಗಿದ್ದಾರೆ.
ಜುಲೈ 08ರಂದು ಸರಣಿ ರಾಜೀನಾಮೆ ಬಳಿಕ
ಒಟ್ಟು ಸದಸ್ಯ ಬಲ : 210
ಕಾಂಗ್ರೆಸ್ + ಜೆಡಿಎಸ್ : 104
ಮ್ಯಾಜಿಕ್ ನಂಬರ್ : 106
ಬಿಜೆಪಿ : 105+1(ಪಕ್ಷೇತರ)
ಬಿಎಸ್ ಪಿ: 1
ಕಾಂಗ್ರೆಸ್ : 69
ಜೆಡಿಎಸ್ : 34
ಪಕ್ಷೇತರ : 1(ಪಿಟಿಐ)












Click it and Unblock the Notifications