ರೋಷನ್ ಬೇಗ್ ವಿರುದ್ಧ ಹೈಕಮಾಂಡಿಗೆ ದೂರು ಸಲ್ಲಿಸಿದ ಕೆಪಿಸಿಸಿ
Recommended Video
ಬೆಂಗಳೂರು, ಜೂನ್ 10: ಜೆಡಿಎಸ್ -ಕಾಂಗ್ರೆಸ್ ಸರ್ಕಾರದ ಮೈತ್ರಿ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯತಂತ್ರಗಳ ವೈಫಲ್ಯಗಳ ಬಗ್ಗೆ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಅವರು ನೀಡಿದ್ದ ಹೇಳಿಕೆಗಳು ದುಬಾರಿಯಾಗಿ ಪರಿಣಾಮಿಸುವ ಸಾಧ್ಯತೆಯಿದೆ. ಬಂಡಾಯ ಎದ್ದಿರುವ ರೋಷನ್ ಬೇಗ್ ವಿರುದ್ಧ ಎಐಸಿಸಿಗೆ ವರದಿಯನ್ನು ಸಲ್ಲಿಸಿರುವುದಾಗಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪ್ರಚಾರ ವೈಖರಿ, ಎಕ್ಸಿಟ್ ಪೋಲ್, ಎನ್ಡಿಎ ಅಧಿಕಾರಕ್ಕೇರುವ ಸಾಧ್ಯತೆ ಕುರಿತಂತೆ ಮಾಜಿ ಸಚಿವ, ಶಾಸಕ ರೋಷನ್ ಬೇಗ್ ಅವರು ಗರಂ ಆಗಿದ್ದರು. ಇದೇ ಮೂಡ್ ನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ದ ವಾಗ್ದಾಳಿ ನಡೆಸಿದ್ದರು. ಹೀಗಾಗಿ, ರೋಷನ್ ಬೇಗ್ ವಿರುದ್ಧ ಕ್ರಮಕ್ಕೆ ಆಗ್ರಹ ಕೇಳಿ ಬಂದಿತ್ತು.
ಚುನಾವಣೆ ಫಲಿತಾಂಶದ ನಂತರ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರನ್ನು ರೋಷನ್ ಬೇಗ್ ಹೊಗಳಲು ಆರಂಭಿಸಿದ್ದರು. ಇದರಿಂದ ಕಾಂಗ್ರೆಸ್ ತೀವ್ರ ಮುಜುಗರ ಅನುಭವಿಸಿತ್ತು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಕಾರಣ ನೀಡಿ ಶಾಸಕ ರೋಷನ್ ಬೇಗ್ಗೆ ಕೆಪಿಸಿಸಿ ನೋಟಿಸ್ ಜಾರಿ ಮಾಡಿತ್ತು. ಆದರೆ, ನೋಟಿಸ್ ಗೆ ಕ್ಯಾರೆ ಎನ್ನದೆ, ಟ್ವಿಟ್ಟರ್ ಮೂಲಕ ಸರಣಿ ಪ್ರತ್ಯುತ್ತರ ನೀಡಿದ್ದರು.

ಈ ಎಲ್ಲಾ ಬೆಳವಣಿಗಳನ್ನು ದಾಖಲಿಸಿಕೊಂಡು, ದೂರು ಸಲ್ಲಿಸಲಾಗಿದೆ. ಎಐಸಿಸಿ ಸದಸ್ಯರಾಗಿದ್ದು ಕೂಡಾ ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಬೇಗ್ ನಡೆದುಕೊಂಡಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರನ್ನು ವೈಯಕ್ತಿಕವಾಗಿ ನಿಂದಿಸಿದ್ದಾರೆ. ಇದೆಲ್ಲವನ್ನು ಹೈಕಮಾಂಡ್ ಮುಂದಿಡಲಾಗಿದೆ ಎಂದು ದಿನೇಶ್ ಹೇಳಿದ್ದಾರೆ.
ವೇಣುಗೋಪಾಲ್ ರನ್ನು ಬಫೂನ್, ದಿನೇಶ್ ಗುಂಡೂರಾವ್ ಅವರನ್ನು ಅಪ್ರಬುದ್ಧ, ಸಿದ್ದರಾಮಯ್ಯ ಅವರನ್ನು ಒರಟ ಎಂದೆಲ್ಲ ಬೇಗ್ ನಿಂದಿಸಿದ್ದರು.
ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ: ರಾಮಲಿಂಗಾ ರೆಡ್ಡಿ, ಅಮರೇಗೌಡ ಬಯ್ಯಾಪುರ, ವಿ ಮುನಿಯಪ್ಪ ಸೇರಿದಂತೆ ಹಲವಾರು ಮಂದಿ ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ. ರಾಮಲಿಂಗಾರೆಡ್ಡಿ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆ ಎಂದು ದಿನೇಶ್ ಹೇಳಿದರು.












Click it and Unblock the Notifications