ಉ. ಕರ್ನಾಟಕ, ಕರಾವಳಿಗೆ ಎಚ್ಡಿಕೆ ಕೊಟ್ಟಿದ್ದೇನು? ಅಭಿಮಾನಿಗಳು ಮುಂದಿಟ್ಟ ಪಟ್ಟಿ ಇದು
Recommended Video

ಬೆಂಗಳೂರು, ಜುಲೈ 6: ಕುಮಾರಸ್ವಾಮಿ ಅವರು ಗುರುವಾರ ಮಂಡಿಸಿದ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ಅನ್ನು ಅವರ ವಿರೋಧಿಗಳು ತೀವ್ರವಾಗಿ ಟೀಕಿಸುತ್ತಿದ್ದಾರೆ.
ಈ ಬಜೆಟ್ ಮಂಡ್ಯ, ರಾಮನಗರ ಮತ್ತು ಹಾಸನಕ್ಕೆ ಸೀಮಿತವಾಗಿವೆ. ಉಳಿದ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಲಾಗುತ್ತಿದೆ. ತಮ್ಮ ಭಾಗವನ್ನು ಕುಮಾರಸ್ವಾಮಿ ಅವರು ಲೆಕ್ಕಕ್ಕೇ ತೆಗೆದುಕೊಂಡಿಲ್ಲ ಎಂದು ಕರಾವಳಿ, ಮಲೆನಾಡು ಮತ್ತು ಉತ್ತರ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಜನರು ದೂರುತ್ತಿದ್ದಾರೆ.
ಆದರೆ, ಕುಮಾರಸ್ವಾಮಿ ಅವರು ಈ ಭಾಗಗಳಿಗೂ ಅನ್ಯಾಯ ಮಾಡಿಲ್ಲ ಎನ್ನುತ್ತಿದ್ದಾರೆ ಅವರ ಅಭಿಮಾನಿಗಳು. ಬಜೆಟ್ನಲ್ಲಿ ಉತ್ತರ ಕರ್ನಾಟಕಕ್ಕೆ ಬಂಪರ್ ಕೊಡುಗೆ ಕೊಡಲಾಗಿದೆ.
ಕರಾವಳಿ ಕರ್ನಾಟಕಕ್ಕೂ ಏನನ್ನೂ ನೀಡಿಲ್ಲ ಎನ್ನುವುದು ಸಹ ಮೂರ್ಖತನ ಪರಮಾವಧಿ, ಅಲ್ಲಿಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಅವರ ಅಭಿಮಾನಿಗಳು ಪಟ್ಟಿ ನೀಡಿದ್ದಾರೆ.
ಫೇಸ್ಬುಕ್, ಟ್ವಿಟ್ಟರ್ಗಳಲ್ಲಿ ಆಗುತ್ತಿರುವ ಚರ್ಚೆಗೆ ಪ್ರತಿಕ್ರಿಯೆ ನೀಡುತ್ತಿರುವ ಜೆಡಿಎಸ್ ಅನುಯಾಯಿಗಳು ನೀಡಿರುವ ಪಟ್ಟಿ ಇಲ್ಲಿದೆ.

ನೀರಾವರಿ ಯೋಜನೆ
ಗದಗ ಕೊಪ್ಪಳದಲ್ಲಿ ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗುವುದು.
ಮೆಣಸಿನ ಕಾಯಿ, ಗೋಡಂಬಿ, ಕಾಳು ಮೆಣಸು, ಜೀರಿಗೆ, ಕೊತ್ತಂಬರಿ ಮತ್ತು ಮೆಂತೆಯ ದೀರ್ಘಕಾಲ ಸಂರಕ್ಷಣೆಗೆ ನಿರ್ವಾತ ತಂತ್ರಜ್ಞಾನ ಘಟಕವನ್ನು ಈ ಭಾಗದಲ್ಲಿ ಸ್ಥಾಪಿಸಲಾಗುವುದು.

ಕೃಷಿ ವಿಶ್ವವಿದ್ಯಾಲಯ
ಧಾರವಾಡ ಕೃಷಿ ವಿಶ್ವ ವಿದ್ಯಾಲಯಕ್ಕೆ 3 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕಾರವಾರ, ಯಾದಗಿರಿ, ಹಾವೇರಿ ಜಿಲ್ಲೆಗಳಲ್ಲಿ ಇಸ್ರೇಲ್ ಮಾದರಿ ನೀರಾವರಿ ಯೋಜನೆಗೆ 150 ಕೋಟಿ ರೂಪಾಯಿ ಮೀಸಲು ಇರಿಸಲಾಗುವುದು.
ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯಕ್ಕೆ 3 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಗೆ ನೀರಾವರಿ ಕಲ್ಪಿಸಲು 100 ಕೋಟಿ ರೂಪಾಯಿ ಅನುದಾನ ನೀಡಲಾಗುವುದು. ಕೊಪ್ಪಳದಲ್ಲಿ ಆಟಿಕೆ ತಯಾರಿಕ ಘಟಕ ಆರಂಭಿಸಲಾಗುವುದು.

ಆಸ್ಪತ್ರೆ ಸೌಲಭ್ಯಗಳು
ಧಾರವಾಡ, ಕಲಬುರಗಿಯಲ್ಲಿ 2.25 ಕೋಟಿ ರೂ. ವೆಚ್ಚದಲ್ಲಿ ಘನೀಕೃತ ವೀರ್ಯ ನಳಿಕೆಗಳ ವಿತರಣಾ ಕೇಂದ್ರ ಸ್ಥಾಪನೆ ಮಾಡಲಾಗುವುದು.
ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಮತ್ತು ಅಂಕಾಲಜಿಗೆ ಸಂಬಂಧಿಸಿದ ಆರೋಗ್ಯ ಸೇವೆಗಳ ಘಟಕ ಮತ್ತು ಟ್ರಾಮಾ ಘಟಕ ಆರಂಭಿಸಲಾಗುವುದು. ಗದಗ, ಕೊಪ್ಪಳದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ.
ಬೆಳಗಾವಿ ಮತ್ತು ಕಲಬುರಗಿ ಹೃದ್ರೋಗ ಮತ್ತು ಕ್ಯಾನ್ಸರ್ ತೃತೀಯ ಹಂತದ ಆರೋಗ್ಯ ಸೇವೆಗಳನ್ನು ಒದಗಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ

ಸೋಲಾರ್ ಜಿಲ್ಲೆ ಅಭಿವೃದ್ಧಿ
ವಸ್ತ್ರೋಧ್ಯಮ ಪ್ರೋತ್ಸಾಹ ಧನ ಯೋಜನೆ ಅಡಿ ಬಳ್ಳಾರಿಯಲ್ಲಿ ಉಡುಪು ತಯಾರಿಕಾ ಘಟಕ ಸ್ಥಾಪನೆಗೆ ನೆರವು ನೀಡಲಾಗುವುದು. ಕಲಬುರಗಿ ಜಿಲ್ಲೆಯನ್ನು ಸೋಲಾರ್ ಜಿಲ್ಲೆಯಾಗಿ ಅಭಿವೃದ್ಧಿಪಡಿಸಲಾಗುವುದು.
ಕಲಬುರಗಿ ನಗರದಲ್ಲಿ ಖಾಸಗಿ ತರಬೇತಿ ಕೇಂದ್ರಗಳ ಸಹಯೋಗದೊಂದಿಗೆ ಎಸ್ಸಿ ಎಸ್ಟಿ ಪದವೀಧರರಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ನೆರವು ನೀಡಲಾಗುವುದು.

ಕರಾವಳಿಗೂ ಇದೆ ಕೊಡುಗೆ
ಕರಾವಳಿಯಲ್ಲಿಯೂ ರೈತರಿದ್ದಾರೆ. ಅವರ ಸಾಲ ಕೂಡ ಮನ್ನಾ ಆಗಲಿದೆ. ಅಡಿಕೆ,ತೆಂಗು ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ. ಮೀನುಗಾರರಿಗೆ ವಸತಿ ಸೌಲಭ್ಯದ ಜೊತೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿದೆ.
ದೇವಸ್ಥಾನಗಳು ಹೆಚ್ಚಾಗಿರುವ ಕರಾವಳಿಯ ಮಠ ಮಂದಿರಗಳಿಗೆ ವಿಶೇಷ ಅನುದಾನ ಘೋಷಣೆ ಮಾಡಿದ್ದಾರೆ. ಇದಲ್ಲದೆ, ಸದಾ ಹಿಂದುತ್ವದ ಜಪ ಮಾಡುವ ಕರಾವಳಿಗರಿಗೆ ಶಂಕರಾಚಾರ್ಯರ ಜಯಂತಿಯನ್ನು ಮಾಡುವುದರ ಮೂಲಕ ಹಿಂದುತ್ವವನ್ನು ಎತ್ತಿ ಹಿಡಿದಿದ್ದಾರೆ.

ಇನ್ನೂ ಏನ್ ಬೇಕು?
ಏನೂ ನೀಡಿಲ್ಲ ಎಂದು ಆರೋಪಿಸುವವರಿಗೆ ಇಷ್ಟೆಲ್ಲಾ ಘೋಷಣೆ ಮಾಡಿರುವುದು ತಿಳಿಯುತ್ತಿಲ್ಲವೇ? ಇನ್ನೂ ಏನ್ ಬೇಕು ಸ್ವಾಮಿ? ಸಣ್ಣ ಪುಟ್ಟ ಅಭಿವೃದ್ಧಿ ಕಾರ್ಯಗಳು ನಡೆದೇ ನಡೆಯುತ್ತವೆ ಅಲ್ಲವೇ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.
ಚುನಾವಣಾ ಪೂರ್ವದಲ್ಲಿ ಅಭಿವೃದ್ಧಿ ಜಪ ಮಾಡಿ ಅಂದರೆ, ಧರ್ಮಗಳ ಬಗ್ಗೆ ಮಾತನಾಡುತ್ತೀರಿ. ಈಗ ಅಭಿವೃದ್ಧಿ ಬಗ್ಗೆ ಮಾತನಾಡುವ ನೈತಿಕತೆ ನಿಮಗೆ ನಿಜವಾಗಿಯೂ ಇದೆಯೇ ಎಂದು ಕೇಳಿದ್ದಾರೆ.
ಭಕ್ತರ ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿಯೇ ಕಾಣುತ್ತದೆ ಎಂದು ಬಿಜೆಪಿ ಅಭಿಮಾನಿಗಳ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.












Click it and Unblock the Notifications