ಅಕ್ಕಿಯನ್ನು ಹೊಂದಿಸಲು "ಕೈ"ಲಾಗದ ಮುಖ್ಯಮಂತ್ರಿ; ಬಾಕಿ 5 ಕೆಜಿ ಅಕ್ಕಿಯ ಕಥೆ ಏನು?: ಬಿಜೆಪಿ
ಬೆಂಗಳೂರು, ಜೂನ್ 30: ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ವಾಕ್ಸಮರ ಮುಂದುವರೆದಿದ್ದು, ಅಕ್ಕಿಯನ್ನು ಹೊಂದಿಸಲು "ಕೈ"ಲಾಗದ ಮುಖ್ಯಮಂತ್ರಿಗಳು, ಎಂದಿನಂತೆ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿ, "ಕೈ" ತೊಳೆದುಕೊಳ್ಳುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ನರೇಂದ್ರ ಮೋದಿ ರವರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ತಿಂಗಳು ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿರುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು ಸಿದ್ದರಾಮಯ್ಯ ರವರ ಎ ಟಿ ಎಂ ಕ್ಕೆ ಇಷ್ಟು ದಿನ ಬೇಕಾಯಿತು. ಸ್ವಾಮಿ ಸ್ವಯಂಘೋಷಿತ ಆರ್ಥಿಕ ತಜ್ಞ, ಸಿದ್ದರಾಮಯ್ಯ ರವರೇ, ರಾಜ್ಯದ ಎಲ್ಲಾ ಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡುತ್ತೇವೆಂದು, ನೀವುಗಳೇ ಹೋದಲ್ಲಿ, ಬಂದಲ್ಲಿ ಭಾಷಣ ಮಾಡುತ್ತಿದ್ದಿರಿ ಎಂದು ಬಿಜೆಪಿ ಟೀಕಿಸಿದೆ.

ಈಗಾಗಲೇ ಕೇಂದ್ರ ಸರ್ಕಾರದ ವತಿಯಿಂದ 5 ಕೆಜಿ ದೊರೆಯುತ್ತಿದೆ ಎಂದರೇ, ನಿಮ್ಮ ಮಾತಿನ ಪ್ರಕಾರ, ರಾಜ್ಯದ ಜನತೆಗೆ ಕೇಂದ್ರ ಸರ್ಕಾರದ 5 ಹಾಗೂ ರಾಜ್ಯ ಸರ್ಕಾರದ ವತಿಯಿಂದ 10, ಒಟ್ಟು 15 ಕೆಜಿ ಅಕ್ಕಿ ದೊರೆಯಬೇಕು. ಆದರೇ ಈಗ ರಾಜ್ಯ ಸರ್ಕಾರದ ವತಿಯಿಂದ ಕೇವಲ 5 ಕೆಜಿ ಅಕ್ಕಿಯ ಬದಲಿಗೆ, ಪ್ರತಿ ಕೆಜಿಗೆ 34 ರೂಪಾಯಿ ನೀಡುವುದಾಗಿ ಘೋಷಿಸಿದ್ದೀರಿ. ಹಾಗಾದರೆ ಬಾಕಿ 5 ಕೆಜಿ ಅಕ್ಕಿಯ ಕಥೆ ಏನು? ಎಂದು ರಾಜ್ಯ ಬಿಜೆಪಿ ಪ್ರಶ್ನಿಸಿದೆ.
5 ಕೆಜಿಯ ಬಾಬ್ತು + 5ಕೆಜಿ ಕೇಂದ್ರ ನೀಡುವ ಉಚಿತ ಅಕ್ಕಿ = 15 ಕೆಜಿ ಎಂದು ಜನರಿಗೆ ವಂಚಿಸುತ್ತಿದ್ದಿರಿ. ಜನರನ್ನು ನಂಬಿಸಿ ಮೋಸ ಮಾಡುವುದು, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದೀರಿ. ನಿಮ್ಮ ಅಸಮರ್ಥ ಹಾಗೂ ಉಡಾಫೆ ಶೈಲಿಯ ಆಡಳಿತಕ್ಕೆ ಎಲ್ಲಿಯೂ ಸಹ ಅಕ್ಕಿ ದೊರೆತಿಲ್ಲ. ಈ ಕಾರಣಕ್ಕಾಗಿ ಜನತೆಗೆ ಅಕ್ಕಿ ಬದಲು ಹಣ ನೀಡಿ ಎಂದಾಗ, ಹಣವನ್ನು ತಿನ್ನುವುದಕ್ಕೆ ಆಗುತ್ತಾ ಎಂದು ಉದ್ಧಟತನ ಪ್ರದರ್ಶಿಸಿದ್ದಿರಿ, ಈಗ ಕೆಜಿಗೆ 34 ರೂಪಾಯಿ ಎಂದು ಯುಟರ್ನ್ ಹೊಡೆದಿದ್ದೀರಿ ಎಂದು ಬಿಜೆಪಿ ಹೇಳಿದೆ.
ಅಕ್ಕಿಯನ್ನು ಹೊಂದಿಸಲು "ಕೈ"ಲಾಗದ ಮುಖ್ಯಮಂತ್ರಿಗಳು, ಎಂದಿನಂತೆ ತಮ್ಮ ತಪ್ಪನ್ನು ಬೇರೆಯವರ ಮೇಲೆ ಹಾಕಿ, "ಕೈ" ತೊಳೆದುಕೊಳ್ಳುತ್ತಿದ್ದಾರೆ.@narendramodi ರವರ ಸರ್ಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಪ್ರತಿ ತಿಂಗಳು ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡುತ್ತಿರುವ ಸತ್ಯವನ್ನು ಬಹಿರಂಗವಾಗಿ ಒಪ್ಪಿಕೊಳ್ಳಲು…
— BJP Karnataka (@BJP4Karnataka) June 30, 2023
ಕೇಂದ್ರದ ಸಬ್ಸಿಡಿ ಇಲ್ಲದೇ, ತಾವು ನಿಗದಿಪಡಿಸಿರುವ ಮೊತ್ತಕ್ಕೆ ಊಟಕ್ಕೆ ಯೋಗ್ಯವಾದ ಅಕ್ಕಿ ಕರ್ನಾಟಕದ ಯಾವ ಗಿರಣಿಯಲ್ಲಿ ಸಿಗುತ್ತದೆ ಎಂಬ ಮಾಹಿತಿಯನ್ನೂ ಸ್ವಲ್ಪ ಜನತೆಗೆ ತಿಳಿಸಿ. ಇಲ್ಲವಾದಲ್ಲಿ ಮಾರುಕಟ್ಟೆಯಲ್ಲಿ ಯಾವ ದರದಲ್ಲಿ ಯೋಗ್ಯ ಅಕ್ಕಿ ದೊರೆಯುತ್ತದೆಯೋ, ಅದೇ ದರವನ್ನು ನೀವು ಜನತೆಗೆ ನೀಡಬೇಕು. 13 ಬಜೆಟ್ ಮಂಡಿಸಿದ್ದೇನೆ, ಆಡಳಿತದಲ್ಲಿ ಅಪಾರವಾದ ಅನುಭವವಿದೆ ಎಂದು ಬಡಾಯಿ ಕೊಚ್ಚಿಕೊಳ್ಳುವ ನಿಮಗೆ, ಎಫ್ಸಿಐಯನ್ನು ಸರ್ಕಾರ ಏಕೆ ಸ್ಥಾಪಿಸಿದೆ, ಅದರ ಧ್ಯೇಯೋದ್ದೇಶಗಳೇನು ಎಂಬುದು ತಿಳಿದಿಲ್ಲವಾದದ್ದು ಅತ್ಯಂತ ದುರದೃಷ್ಟಕರ.
ನಿಮ್ಮ ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರ ಸರ್ಕಾರವನ್ನು ವಿನಾಕಾರಣ ದೂಷಿಸುವ ನಿಮ್ಮ ಬುದ್ಧಿಗೆ, ಮುಂದಿನ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.











Click it and Unblock the Notifications