ಕಾಂಗ್ರೆಸ್ ಹೆಸರಲ್ಲಿ ಎಣ್ಣೆ ಬ್ರ್ಯಾಂಡ್ ರಿವೀಲ್ ಮಾಡಿದ ಕಮಲ! ರೇಟ್ ಎಷ್ಟು ಗೊತ್ತಾ?
ರಾಜ್ಯ ಬಿಜೆಪಿಯು ಕಾಂಗ್ರೆಸ್ ವಿರುದ್ಧ ವಿಭಿನ್ನವಾಗಿ ವಾಗ್ದಾಳಿ ನಡೆಸಿದೆ. ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಆರೋಪ ಮಾಡುತ್ತಿದ್ದು, ಇದರ ಕುರಿತು ಎಣ್ಣೆ ಬಾಟಲಿಗಳಿಗೆ ಕಾಂಗ್ರೆಸ್ ಹೆಸರಿಟ್ಟು ಲೇವಡಿ ಮಾಡಿದೆ. ಈ ಫೋಟೋ ಅನ್ನು ತನ್ನ ಎಕ್ಸ್ ಖಾತೆಯಲ್ಲಿ ಬಿಜೆಪಿ ಹಂಚಿಕೊಂಡಿದೆ.
ಎಣ್ಣೆ ಬಾಟಲಿಗಳಿಗೆ ಕಾಂಗ್ರೆಸ್ ಚಾಯ್ಸ್ ಎಂದು ಬಿಜೆಪಿ ಹೆಸರುಕೊಟ್ಟಿದೆ. ಕಾಂಗ್ರೆಸ್ ಗುರುತನ್ನ ತಲೆಕೆಳಕಾಗಿ ಮುದ್ರಿಸಿ, 70 ವರ್ಷಗಳಿಂದ ಲೂಟಿ ಮಾಡಿದ್ದು, 100% ಭ್ರಷ್ಟಾಚಾರ ಎಂದು ಸಾಲುಗಳನ್ನು ಬರೆದಿದೆ. ಮತ್ತೊಂದು ಬಾಟಲಿ ಮೇಲೆ ಎಂಆರ್ಪಿ 875 ರೂ. ಹಾಗೂ ತಿಮ್ಮಾಪುರ ದರ 350 ರೂ. ಸೇರಿ ಒಟ್ಟು 1225 ರೂಪಾಯಿ ಎಂದು ಲೇವಡಿ ಮಾಡಿದೆ.

ಮಾರುಕಟ್ಟೆಯಲ್ಲಿ ಹೊಚ್ಚ ಹೊಸದಾಗಿ ಬಂದಿರುವ ಕಾಂಗ್ರೆಸ್ ಚಾಯ್ಸ್ !! ಎಂ.ಆರ್.ಪಿ ಜೊತೆ ಅಬಕಾರಿ ಸಚಿವರ ಎಂ.ಆರ್.ಪಿ ಸಹ ಬಾಟಲಿಯಲ್ಲಿಯೇ ಮುದ್ರಿತವಾಗಿರುವುದು ವಿಶೇಷ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯ ಮಾಡಿದೆ.
ಭ್ರಷ್ಟ ಕಾಂಗ್ರೆಸ್ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರೆ ತಿರುಗಿ ಬಿದ್ದಿರುವುದು ಸ್ವಾಗತಾರ್ಹ. ಮಂಡ್ಯದಲ್ಲಿ ಬಾರ್ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದ ಕಾಂಗ್ರೆಸ್ ಕಾರ್ಯಕರ್ತನಿಗೆ ಲೈಸೆನ್ಸ್ ನೀಡಲು ಅಬಕಾರಿ ಡಿಸಿ ಕೇಳಿದ ಲಂಚ ಬರೋಬ್ಬರಿ ₹40 ಲಕ್ಷ!! ಸಿಎಂ ಸಿದ್ದರಾಮಯ್ಯ ಅವರೆ, ಭ್ರಷ್ಟ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ನಡೆಸುತ್ತಿರುವ ಈ ಅಬಕಾರಿ ಲಂಚದ ರಾಕೆಟ್ ಅನ್ನು ನಿಮ್ಮ ಕಾರ್ಯಕರ್ತರೇ ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾರೆ. ಕೂಡಲೇ ಭ್ರಷ್ಟ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸಂಪುಟದಿಂದ ವಜಾ ಮಾಡಿ ಎಂದು ಬಿಜೆಪಿ ಆಗ್ರಹಿಸಿದೆ.

ಅಬಕಾರಿ ಇಲಾಖೆಯಲ್ಲಿ ನಡೆದಿರುವ ₹700 ಕೋಟಿ ಕಮೀಷನ್ ಪ್ರಕರಣಕ್ಕೆ ಬೇಕಾದಷ್ಟು ಸಾಕ್ಷಿಗಳಿವೆ. ನನ್ನದು ತೆರೆದ ಪುಸ್ತಕ ಎನ್ನುವ ಸಿಎಂ ಸಿದ್ದರಾಮಯ್ಯ ಅವರು ಇಷ್ಟೊಂದು ಸಾಕ್ಷಿಗಳಿದ್ದರೂ ಏಕೆ ಮೌನವಾಗಿದ್ದಾರೆ. ಸಿದ್ದರಾಮಯ್ಯ ಇನ್ನೂ ಏಕೆ ರಾಜೀನಾಮೆ ನೀಡಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕೂಡ ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರು ರಾಜ್ಯದ ಅಬಕಾರಿ ಇಲಾಖೆಯಲ್ಲಾಗಿರುವ ರೂ. 700 ಕೋಟಿ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆದಿದ್ದರು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರವೇ ನಡೆದಿಲ್ಲ, ಭ್ರಷ್ಟಾಚಾರ ನಡೆದಿದ್ದೇ ಆದರೆ ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು.
ಮಾರುಕಟ್ಟೆಯಲ್ಲಿ ಹೊಚ್ಚ ಹೊಸದಾಗಿ ಬಂದಿರುವ ಕಾಂಗ್ರೆಸ್ ಚಾಯ್ಸ್ !!
— BJP Karnataka (@BJP4Karnataka) November 30, 2024
ಎಂ.ಆರ್.ಪಿ ಜೊತೆ ಅಬಕಾರಿ ಸಚಿವರ ಎಂ.ಆರ್.ಪಿ ಸಹ ಬಾಟಲಿಯಲ್ಲಿಯೇ ಮುದ್ರಿತವಾಗಿರುವುದು ವಿಶೇಷ!!#CongressFailsKarnataka #LiquorScam pic.twitter.com/FQvqvKB3Mj
ಈಗ ಅದೇ ಸಿದ್ದರಾಮಯ್ಯ ಮದ್ಯ ಮಾರಾಟಗಾರರ ಬಂದ್ ಕರೆಗೆ ಬೆಚ್ಚಿಬಿದ್ದು, ಮದ್ಯ ಮಾರಾಟಗಾರರ ಸಂಘದ ಜೊತೆ ಮಾತುಕತೆ ನಡೆಸಿ ಸಂಘದ ಬೇಡಿಕೆಗಳನ್ನು ಈಡೇರಿಸಲು ಮುಂದಾಗಿದ್ದಾರೆ ಎಂದು ತಿರುಗೇಟು ನೀಡಿತ್ತು.
ಅಬಕಾರಿ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತಡೆಯಬೇಕೆನ್ನುವುದು ಮದ್ಯ ಮಾರಾಟಗಾರರ ಸಂಘದ ಪ್ರಮುಖ ಬೇಡಿಕೆಯಾಗಿತ್ತು. ಸಿದ್ದರಾಮಯ್ಯ ಅವರು ಮದ್ಯ ಮಾರಾಟಗಾರರ ಸಂಘದ ಬೇಡಿಕೆಯನ್ನು ಈಡೇರಿಸಲು ಸಮ್ಮತಿ ಸೂಚಿಸುವ ಮೂಲಕ ಕಾಂಗ್ರೆಸ್ ಕೃಪಾಪೋಷಿತ ಭ್ರಷ್ಟಾಚಾರವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಪ್ರಧಾನಿ ಅವರ ಹೇಳಿಕೆಗೆ ಸಾಕ್ಷ್ಯ ಕೇಳಿದ್ದ ಸಿದ್ದರಾಮಯ್ಯ ಅವರೇ, ಇದಕ್ಕಿಂತ ದೊಡ್ಡ ಸಾಕ್ಷ್ಯ ಇನ್ನೇನು ಬೇಕು? ಎಂದು ಕೇಳಿತ್ತು.












Click it and Unblock the Notifications