ಲೋಕಸಭೆ ಚುನಾವಣೆ ಟಿಕೆಟ್ ವಿತರಿಸಲು ಬಿಜೆಪಿ ಆಂತರಿಕ ಸಮೀಕ್ಷೆ
ಬೆಂಗಳೂರು, ಆಗಸ್ಟ್ 10: ಲೋಕಸಭೆ ಚುನಾವಣೆಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಒಂದಾಗಿ ಬಿಜೆಪಿ ವಿರುದ್ಧ ತೊಡೆ ತಟ್ಟಿರುವುದು ಸಹಜವಾಗಿಯೆ ಬಿಜೆಪಿ ಪಾಳಯದಲ್ಲಿ ಆತಂಕದ ಗೆರೆಗಳನ್ನು ಮೂಡಿಸಿದೆ.
ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ವಿಶ್ವಾಸದಲ್ಲಿದ್ದರೂ ಸಹಿತ ಲೋಕಸಭೆ ಚುನಾವಣೆಯಲ್ಲಿ ಎದುರಾಳಿಗಳ ಸ್ನೇಹ ಬಿಜೆಪಿಯಲ್ಲಿ ಅಭದ್ರತೆ ಉಂಟು ಮಾಡಿರುವುದು ದಿಟ. ಹಾಗಾಗಿ ರಾಜ್ಯ ಬಿಜೆಪಿಯು ಜಾಗೃತೆಯಾಗಿ ಚುನಾವಣೆ ಎದುರಿಸಲು ಒಳತಂತ್ರಗಳನ್ನು ಹೆಣೆಯುತ್ತಿದೆ.
ಮೊನ್ನೆಯಷ್ಟೆ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮೂರು ತಂಡಗಳಾಗಿ ರಾಜ್ಯ ಪ್ರವಾಸ ಮಾಡುವ ನಿರ್ಧಾರ ತಳೆಯಲಾಗಿತ್ತು. ಜೊತೆಗೆ ಈಗ ಲೋಕಸಭೆ ಟಿಕೆಟ್ ವಿತರಿಸುವ ಮುನ್ನಾ ಆಂತರಿಕ ಸಮೀಕ್ಷೆಯನ್ನು ಸಹ ಮಾಡಲಾಗುತ್ತಿದೆ.

ಯಡಿಯೂರಪ್ಪ ಮುಂದಾಳತ್ವದಲ್ಲಿ ಸಮೀಕ್ಷೆ
ಪಕ್ಷದ ಮೂಲಕ ಯಡಿಯೂರಪ್ಪ ಅವರ ಮುಂದಾಳತ್ವದಲ್ಲಿ ನಡೆಯುವ ಈ ಸಮೀಕ್ಷೆ ಕ್ಷೇತ್ರಗಳಿಗೆ ತೆರಳಿ ಟಿಕೆಟ್ ಆಕಾಂಕ್ಷಿತರ ಬಗ್ಗೆ ಜನರ ನಿಲವು ತಿಳಿದುಕೊಂಡು ಆ ನಂತರ ಅವರಿಗೆ ಟಿಕೆಟ್ ನೀಡುವುದೋ ಅಥವಾ ಬೇಡವೋ ನಿರ್ಣಯಿಸಲಾಗುತ್ತದೆ.

ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ತಂತ್ರ
ಕಳೆದ ವಿಧಾನಸಭೆ ಚುನಾವಣೆಯಲ್ಲಿಯೂ ಇದೇ ತಂತ್ರ ಅನುಸರಿಸಲಾಗಿತ್ತು. ಅಲ್ಲಿ ಪಕ್ಷದ ವತಿಯಿಂದ ಒಂದು ಮತ್ತು ಯಡಿಯೂರಪ್ಪ ಅವರು ವೈಯಕ್ತಿಕವಾಗಿ ಒಂದು ಸಮೀಕ್ಷೆ ಮಾಡಿ ಟಿಕೆಟ್ ನೀಡಲಾಗಿತ್ತು. ಈ ತಂತ್ರ ಯಶಸ್ವಿಯೂ ಆಯಿತು.

ಎಲ್ಲಾ ರಾಜ್ಯಗಳಲ್ಲೂ ಬಿಜೆಪಿಯಿಂದ ಸಮೀಕ್ಷೆ
ಕೇವಲ ರಾಜ್ಯ ಬಿಜೆಪಿ ಮಾತ್ರವಲ್ಲ ಅಮಿತ್ ಶಾ ಸೂಚನೆಯಂತೆ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ಲೋಕಸಭೆ ಟಿಕೆಟ್ ವಿತರಿಸಲು ಆಂತರಿಕ ಸಮೀಕ್ಷೆ ಮಾಡುತ್ತಿದ್ದು, ಅರ್ಹ ಅಭ್ಯರ್ಥಿಗಳಿಗೆ ಮಾತ್ರವೇ ಟಿಕೆಟ್ ನೀಡಲಾಗುವುದು.

ಕೆಲವು ಹಾಲಿ ಸಂಸದರಿಗೆ ಟಿಕೆಟ್ ತಪ್ಪುವ ಸಾಧ್ಯತೆ
ಕೆಲಸ ಮಾಡದ ಸಂಸದರು, ಪಕ್ಷಕ್ಕೆ ಮುಜುಗರ ಉಂಟುಮಾಡುವ ಹೇಳಿಕೆಗಳನ್ನು ನೀಡಿದ ಸಂಸದರು ಟಿಕೆಟ್ ವಂಚಿತರಾಗುವ ಸಾಧ್ಯೆಯೂ ಈ ಬಾರಿ ಇದೆ ಎನ್ನಲಾಗಿದೆ. ಪಕ್ಷದ ಧ್ಯೇಯವನ್ನು ಟೀಕಿಸಿದವರು ಈ ಬಾರಿ ಅವಕಾಶ ವಂಚಿತರಾಗುವ ಸಾಧ್ಯತೆ ಇದೆ.












Click it and Unblock the Notifications