ಕಾರ್ಕಳದಲ್ಲಿ ಜ.21ರಿಂದ ಬಾಹುಬಲಿಗೆ ಮಹಾಮಸ್ತಕಾಭಿಷೇಕ
ಉಡುಪಿ, ಜ. 12 : ದೇಶಾದ್ಯಂತ ಇರುವ ಜೈನ ಧರ್ಮೀಯರು ಕಾರ್ಕಳದತ್ತ ನೋಡುತ್ತಿದ್ದಾರೆ. ಜ.21ರಿಂದ ಇಲ್ಲಿನ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ನಡೆಯಲಿದೆ. ಮಸ್ತಕಾಭಿಷೇಕದ ಸಿದ್ಧತೆಗಳು ಭರದಿಂದ ಸಾಗಿದ್ದು, ಹಲವಾರು ಜೈನ ಮುನಿಗಳು ಕಾರ್ಕಳಕ್ಕೆ ಆಗಮಿಸುತ್ತಿದ್ದಾರೆ.
12 ವರ್ಷಗಳ ನಂತರ ಕಾರ್ಕಳ ಬಾಹುಬಲಿಗೆ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯಲಿದೆ. ಜ.21ರಿಂದ 31ರವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹತ್ತು ದಿನಗಳ ಕಾರ್ಯಕ್ರಮದಲ್ಲಿ ಜೈನರ ಭಕ್ತಿ, ಸಂಭ್ರಮ ಪರಾಕಾಷ್ಠೆಗೇರಲಿದೆ. [ಕಾರ್ಕಳದ ಚಿತ್ರಗಳನ್ನು ನೋಡಿ]

ಮಹಾಮಸ್ತಕಾಭಿಷೇಕದ ಯಶಸ್ಸಿಗಾಗಿ ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಕಾರ್ಕಳದ ಶ್ರೀಲಲಿತ ಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಸ್ವಾಮೀಜಿ, ಧರ್ಮಸ್ಥಳದ ಧರ್ಮಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ಉತ್ಸವ ಸಮಿತಿಗಿದೆ. [ಕಾರ್ಕಳದ ಇತಿಹಾಸ ಓದಿ]
ಹತ್ತು ದಿನಗಳ ಉತ್ಸವದಲ್ಲಿ ಪ್ರತಿ ದಿನ ಸಂಜೆ 7 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ಬಾಹುಬಲಿಯ ಮೂರ್ತಿಗೆ ವೈವಿಧ್ಯಮಯ ದ್ರವ್ಯಗಳಿಂದ ಅಭಿಷೇಕ ನಡೆಯಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ರಾಜ್ಯಪಾಲ ವಜೂಭಾಯಿ ವಾಲಾ ಅವರು ಮಹೋತ್ಸವವನ್ನು ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು, ಕೇಂದ್ರ ಸಚಿವರು, ವಿವಿಧ ಧಾರ್ಮಿಕ ಮುಖಂಡರು ಹತ್ತು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಉಡುಪಿ ಜಿಲ್ಲೆಯ ಕಾರ್ಕಳದಲ್ಲಿರುವ ಬಾಹುಬಲಿಯ ಮೂರ್ತಿ 42 ಅಡಿ ಎತ್ತರವಿದೆ. ಪ್ರತಿ 12 ವರ್ಷಗಳಿಗೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಈ ಸಂದರ್ಭದಲ್ಲಿ ಸಾವಿರಾರು ಜೈನ ಧರ್ಮೀಯರು ಕಾರ್ಕಳಕ್ಕೆ ಆಗಮಿಸುತ್ತಾರೆ.












Click it and Unblock the Notifications