Get Updates
Get notified of breaking news, exclusive insights, and must-see stories!

ಕನ್ನಡ ರಾಜ್ಯೋತ್ಸವ: ಎಂಇಎಸ್ ಪುಂಡರಿಂದ ಬೆಳಗಾವಿಯಲ್ಲಿ ಕರಾಳ ದಿನ- ಬೆಂಬಲ ನೀಡಿದ ಮಹಾರಾಷ್ಟ್ರ ಸಿಎಂ ಶಿಂಧೆ

ಬೆಂಗಳೂರು, ಅಕ್ಟೋಬರ್‌ 30: ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಆದರೆ, ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್) ಬೆಳಗಾವಿಯಲ್ಲಿ 'ಕರಾಳ ದಿನ'ವನ್ನು ಆಚರಿಸುವ ತಯಾರಿ ಮಾಡಿಕೊಳ್ಳುತ್ತಿದೆ. ಎಂಇಎಸ್‌ನ ಬೂಟಾಟಿಕೆಯನ್ನು ಬೆಂಬಲಿಸಲು ಬೆಳಗಾವಿ ಜಿಲ್ಲೆಗೆ ಪ್ರತಿನಿಧಿಯನ್ನು ಕಳುಹಿಸುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಘೋಷಿಸಿದ್ದಾರೆ.

ಏಕನಾಥ್‌ ಶಿಂಧೆಯ ನಿರ್ಧಾರದಿಂದ ಕೆರಳಿರುವ ಕನ್ನಡ ಪರ ಸಂಘಟನೆಗಳು ಇದಕ್ಕೆ ಅವಕಾಶ ನೀಡದಂತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರವನ್ನು ಒತ್ತಾಯಿಸಿವೆ.

ಬೆಳಗಾವಿ ಸೇರಿದಂತೆ 840 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ವಿಲೀನಗೊಳಿಸುವ ಹೋರಾಟದ ನೇತೃತ್ವವನ್ನು ಎಂಇಎಸ್ ಸಂಘಟನೆ ವಹಿಸಿಕೊಂಡಿದೆ. ಇದಕ್ಕೆ ಬೆಂಬಲ ಸೂಚಿಸಲು ತಮ್ಮ ಸರ್ಕಾರ ಬೆಳಗಾವಿಗೆ ಪ್ರತಿನಿಧಿಯನ್ನು ಕಳುಹಿಸಲಿದೆ ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.

kannada-rajyotsava

ಕಾರ್ಯಕ್ರಮಕ್ಕೆ ಹಾಜರಾಗುವಂತೆ ಎಂಇಎಸ್ ನಾಯಕರು ನಮಗೆ ಆಹ್ವಾನ ನೀಡಿದ್ದಾರೆ. ನಾವು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುತ್ತೇವೆ ಎಂದು ಸಿಎಂ ಶಿಂಧೆ ಕೊಲ್ಲಾಪುರದಲ್ಲಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಲವು ಕನ್ನಡ ಪರ ಸಂಘಟನೆಗಳು ಶಿಂಧೆ ಹೇಳಿಕೆಗೆ ಸೂಕ್ತ ಪ್ರತಿಕ್ರಿಯೆ ನೀಡದ ರಾಜ್ಯ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ.

ನವೆಂಬರ್ 1 ರಂದು 'ಕರಾಳ ದಿನ' ಆಚರಿಸಲು ಎಂಇಎಸ್‌ಗೆ ಬೆಳಗಾವಿ ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ. ಕರಾಳ ದಿನವನ್ನು ಆಚರಿಸಲು ಮುಂದಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

kannada-rajyotsava

ಬೆಳಗಾವಿ ಮತ್ತು ಮಹಾರಾಷ್ಟ್ರದ 840 ಮರಾಠಿ ಭಾಷಿಕ ಗ್ರಾಮಗಳ ಏಕೀಕರಣಕ್ಕಾಗಿ ಎಂಇಎಸ್ ಹೋರಾಟ ನಡೆಸುತ್ತಿದೆ. ಕರ್ನಾಟಕವು ಇದನ್ನು ವಿರೋಧಿಸುತ್ತಲೇ ಬಂದಿದೆ. ಮಹಾಜನ್ ಸಮಿತಿಯ ವರದಿ ಮೂಲಕ ವಿವಾದವನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂದು ಮಹಾಜನ್‌ ಆಯೋಗ ವರದಿ ನೀಡಿದೆ. ಈ ವರದಿಯನ್ನು ತಿರಸ್ಕರಿಸಿರುವ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ವಿವಾದವೀಗ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಉಳಿದಿದೆ.

ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಮನವಿ

ಕಳೆದ ವರ್ಷ ಬೆಳಗಾವಿ ನಗರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ 5 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು. ಜಿಲ್ಲಾಡಳಿತದ ಪ್ರಕಾರ, ಹಿಂದಿನ ವರ್ಷದ ದಾಖಲೆಯನ್ನು ಈ ವರ್ಷ ರಾಜ್ಯೋತ್ಸವವು ಮುರಿಯಲಿದೆ.

kannada-rajyotsava

ಜಿಲ್ಲೆಯ ಜನತೆ ತಮ್ಮ ಮನೆ ಮುಂದೆ ಕೆಂಪು ಮತ್ತು ಹಳದಿ ಬಣ್ಣದ ರಂಗೋಲಿ ಬಿಡಿಸಿ, ದೀಪ ಹಚ್ಚಿ, ಗಾಳಿಪಟ ಹಾರಿಸುವ ಮೂಲಕ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕರೆ ನೀಡಿದ್ದಾರೆ.

ವಾಣಿಜ್ಯ ಸಂಸ್ಥೆಗಳು ಮತ್ತು ಕಚೇರಿಗಳು ಇದನ್ನೇ ಅನುಸರಿಸುವಂತೆ ಅವರು ತಿಳಿಸಿದ್ದಾರೆ. ಇನ್ನೂ ಹಲವು ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ.

ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತಾ ಸಭೆಯಲ್ಲಿ ನಿರ್ಧರಿಸಲಾಗಿದೆ. ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜಕೀಯ ಮುಖಂಡರು, ಗಣ್ಯರು, ಹೋರಾಟಗಾರರು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿಗೆ ಸಮರ್ಪಣಾ ಭಾವದಿಂದ ದುಡಿದ 10 ಮಂದಿ ಮಹನೀಯರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಭವ್ಯ ಮೆರವಣಿಗೆ ಮತ್ತು ಸಂಗೀತ ಮೇಳಗಳು ನಡೆಯಲಿವೆ. ಕಳೆದ ಬಾರಿಗಿಂತ ಹೆಚ್ಚಿನ ಸಂಖ್ಯೆಯ ಜನರು ಈ ಬಾರಿಯ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲಾಡಳಿತದ ಜತೆಗೆ ಕನ್ನಡಪರ ಸಂಘಟನೆಗಳು ರಾಜ್ಯೋತ್ಸವ ಆಚರಣೆಗೆ ಉತ್ಸಾಹದಿಂದ ಸಿದ್ಧತೆ ನಡೆಸಿವೆ. ನಗರದ ಎಲ್ಲೆಡೆ ಕನ್ನಡ ಪರ ಸಂಘಟನೆಗಳು, ರಾಜಕೀಯ ಮುಖಂಡರು, ಗಣ್ಯರ ರಾಜ್ಯೋತ್ಸವ ಶುಭಾಶಯ ಬ್ಯಾನರ್‌ಗಳು ರಾರಾಜಿಸುತ್ತಿವೆ. ರಾಣಿ ಚನ್ನಮ್ಮ ವೃತ್ತ, ಬೋಗರ್ವೇಸ್, ಗೋವಾವೆ, ಟಿಳಕವಾಡಿ, ಶಹಾಪುರ ಮುಂತಾದ ಪ್ರಮುಖ ರಸ್ತೆಗಳಲ್ಲಿ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+