ಜೂ. 14ಕ್ಕೆ ಬಿಜೆಪಿ ಅಧ್ಯಕ್ಷರಿಂದ ಕರ್ನಾಟಕದಲ್ಲಿ ಜನ ಸಂವಾದ
ಬೆಂಗಳೂರು, ಜೂನ್ 12 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಭಾನುವಾರ ಕರ್ನಾಟಕದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
'ಕರ್ನಾಟಕ ಜನಸಂವಾದ ರ್ಯಾಲಿ' ಹೆಸರಿನಲ್ಲಿ ಜೂನ್ 14ರ ಭಾನುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜೆ. ಪಿ. ನಡ್ಡಾ ವಿಡಿಯೋ ಕಾನ್ಫರೆನ್ಸ್ ಮೂಲಕ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕರ್ನಾಟಕದ ಪ್ರಮುಖ ಟಿವಿ ಚಾನೆಲ್ ಮತ್ತು ಕೇಬಲ್ ನೆಟ್ವರ್ಕ್ಗಳಲ್ಲಿ ಈ ರ್ಯಾಲಿಯು ನೇರ ಪ್ರಸಾರವಾಗಲಿದೆ. ಬಿಜೆಪಿ ಕರ್ನಾಟಕದ ಫೇಸ್ ಬುಕ್ ಮತ್ತು ಯೂಟ್ಯೂಬ್ ಚಾನೆಲ್ಗಳ ಮೂಲಕವೂ ಭಾಷಣವನ್ನು ವೀಕ್ಷಿಸಬಹುದಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ 'ಜನ ಸಂವಾದ ರ್ಯಾಲಿ'ಯನ್ನು ಬಿಜೆಪಿ ಆಯೋಜನೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರದಲ್ಲಿ ರ್ಯಾಲಿ ಉದ್ದೇಶಿಸಿ ಮಾತನಾಡಿದ್ದಾರೆ.
'ಮೋದಿ ಸರ್ಕಾರದ ಸಾಧನೆಗಳನ್ನು ಮನೆ-ಮನೆಗೆ ತಲುಪಿಸೋಣ' ಎಂಬ ಘೋಷಣೆಯೊಂದಿಗೆ ಈ ವರ್ಚುವಲ್ ರ್ಯಾಲಿಗಳನ್ನು ಬಿಜೆಪಿ ದೇಶಾದ್ಯಂತ ಸಂಘಟನೆ ಮಾಡಿದೆ. ಲಾಕ್ ಡೌನ್ ಪರಿಣಾಮ ರಾಜಕೀಯ ಸಮಾವೇಶ ಆಯೋಜಿಸಲು ಅನುಮತಿ ಇಲ್ಲದ ಕಾರಣ ವರ್ಚುವಲ್ ರ್ಯಾಲಿ ನಡೆಯುತ್ತಿದೆ.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಇದೆ. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಮೂಲಕ ಜೆ. ಪಿ. ನಡ್ಡಾ ಕಾರ್ಯಕರ್ತರಲ್ಲಿ ವಿಶ್ವಾಸವನ್ನು ತುಂಬಲಿದ್ದಾರೆ.












Click it and Unblock the Notifications