ಬಿಜೆಪಿಗೆ ಸೇರಿ ಡಿಸಿಎಂ ಆಗಿ: ಕುಮಾರಸ್ವಾಮಿಗೆ ಓಪನ್ ಆಫರ್
ಮುಂಬೈ, ಜುಲೈ 8: ಸಮ್ಮಿಶ್ರ ಸರಕಾರವನ್ನು ಹೇಗಪ್ಪಾ ಉಳಿಸಿಕೊಳ್ಳುವುದು ಎನ್ನುವ ಚಿಂತೆಯಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿಗೆ ಎನ್ಡಿಎ ಮೈತ್ರಿಕೂಟದ ಮುಖಂಡರೊಬ್ಬರು ಓಪನ್ ಆಫರ್ ನೀಡಿದ್ದಾರೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ರಾಜೀನಾಮೆ ನೀಡಿರುವುದರಿಂದ, ಸಮ್ಮಿಶ್ರ ಸರಕಾರ ಬಹುಮತವನ್ನು ಕಳೆದುಕೊಂಡಿದೆ ಎಂದು ರಿಪಬ್ಲಿಕ್ ಪಾರ್ಟಿಯ ಮತ್ತು ಕೇಂದ್ರ ಸಚಿವರೂ ಆಗಿರುವ ರಾಮದಾಸ್ ಅಥಾವಳೆ ಹೇಳಿದ್ದಾರೆ.
ಬಹುಮತ ಇಲ್ಲದೇ ಇರುವಾಗ ಕುಮಾರಸ್ವಾಮಿ ರಾಜೀನಾಮೆ ನೀಡುವುದೇ ಸೂಕ್ತ ಎಂದಿರುವ ಅಥಾವಳೆ, ಈ ಹಿಂದೆಯೇ ಅವರು ಎನ್ಡಿಎ ಮೈತ್ರಿಕೂಟಕ್ಕೆ ಸೇರಬೇಕಾಗಿತ್ತು. ಆದರೆ, ಅವರು ಮುಖ್ಯಮಂತ್ರಿ ಹುದ್ದೆಯ ಹಿಂದೆ ಹೋದರು ಎಂದು ಅಥಾವಳೆ ವ್ಯಂಗ್ಯವಾಡಿದ್ದಾರೆ.

ಸಿಎಂ ಆದ ಮೇಲೂ, ಕಣ್ಣೀರು ಹಾಕುತ್ತಾ, ಕೆಲಸ ಮಾಡಲು ನನ್ನಿಂದ ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿಯೇ, ನಾನು ಈ ಹಿಂದೆಯೇ ಅವರನ್ನು ಎನ್ಡಿಎ ಮೈತ್ರಿಕೂಟಕ್ಕೆ ಬರುವಂತೆ ಆಹ್ವಾನಿಸಿದ್ದೆ ಎಂದು ಅಥಾವಳೆ ಹೇಳಿದ್ದಾರೆ.
ಅವರಿಗೆ ಇನ್ನೂ ಕಾಲ ಮೀರಿಲ್ಲ. ಅವರು ಬಿಜೆಪಿ ಸೇರಿಕೊಳ್ಳಲಿ, ಅವರಿಗೆ ಬಿಜೆಪಿಯಲ್ಲಿ ಸಿಎಂ ಹುದ್ದೆ ಸಿಗದಿದ್ದರೂ, ಉಪ ಮುಖ್ಯಮಂತ್ರಿ ಹುದ್ದೆಯಂತೂ ಖಂಡಿತಾ ಸಿಗುತ್ತದೆ. ನಮ್ಮ ಈ ಆಫರ್ ಅನ್ನು ಅವರು ಸ್ವೀಕರಿಸಬೇಕೆಂದು ರಾಮದಾಸ್ ಅಥಾವಳೆ ಹೇಳಿದ್ದಾರೆ.
ನೇರ ನುಡಿಗೆ ಹೆಸರಾಗಿರುವ ಅಥಾವಳೆ ಕೆಲವು ದಿನಗಳ ಹಿಂದೆ, ಮದುವೆಯಾದರೆ ಎಲ್ಲರಿಗೂ ಇನ್ನೂ ಹೆಚ್ಚಿನ ಜವಾಬ್ದಾರಿ ಬರುವುದು ಸಹಜ. ಅದರಂತೆಯೇ, ರಾಹುಲ್ ಗಾಂಧಿಗೂ ಇದೇ ಸಲಹೆಯನ್ನು ನೀಡುತ್ತೇನೆ ಎಂದು ಪಾರ್ಲಿಮೆಂಟಿನಲ್ಲಿ ಹೇಳಿದ್ದರು.












Click it and Unblock the Notifications