ಜೆಡಿಎಸ್ ಅಸಮಾಧಾನಿತ ನಾಯಕರ ಸಭೆ ರದ್ದು; ಹೊರಟ್ಟಿ ಹೇಳಿದ್ದೇನು?
ಬೆಂಗಳೂರು, ಅಕ್ಟೋಬರ್ 22 : ಜೆಡಿಎಸ್ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ನಾಯಕರು ಕರೆದಿದ್ದ ಸಭೆ ರದ್ದಾಗಿದೆ. "ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸರ್ಟಿಫಿಕೇಟ್ ಕೊಡುವ ಯೋಗ್ಯತೆ ನನಗಿಲ್ಲ" ಎಂದು ಬಸವರಾಜ ಹೊರಟ್ಟಿ ಹೇಳಿದರು.
ಎಚ್. ಡಿ. ಕುಮಾರಸ್ವಾಮಿ ಮತ್ತು ಜೆಡಿಎಸ್ ನಾಯಕತ್ವದ ವಿರುದ್ಧ ಧ್ವನಿ ಎತ್ತಿದ್ದ ಪಕ್ಷದ ನಾಯಕರ ಸಭೆ ಬೆಂಗಳೂರಿನಲ್ಲಿ ಮಂಗಳವಾರ ನಿಗದಿಯಾಗಿತ್ತು. ಸುಮಾರು 27 ನಾಯಕರು ಸಭೆಯಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆ ಇತ್ತು.
ಹಲವು ನಾಯಕರು ಬೇರೆ-ಬೇರೆ ಸ್ಥಳದಲ್ಲಿದ್ದ ಕಾರಣ ನಡೆಯಬೇಕಿದ್ದ ಸಭೆ ರದ್ದಾಗಿದೆ. ವಿಧಾನಸಭೆ ಕಲಾಪವಿದ್ದಾಗ ಎಲ್ಲಾ ಸದಸ್ಯರು ಬೆಂಗಳೂರಿನಲ್ಲಿರುತ್ತಾರೆ. ಆಗ ಸಭೆ ಸೇರಲು ತೀರ್ಮಾನವನ್ನು ಕೈಗೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ, ಪಕ್ಷದ ಹಿರಿಯ ನಾಯಕ ಬಸವರಾಜ ಹೊರಟ್ಟಿ ಮಾತನಾಡಿ, "ಸರ್ಕಾರ ಇದ್ದಾಗ ನಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬ ಅಸಮಾಧಾನವಿದೆ. ಈ ಬಗ್ಗೆ ಕುಮಾರಸ್ವಾಮಿ ಅವರನ್ನಾಗಲಿ, ಹೊರಗಡೆಯಾಗಲಿ ಪ್ರಶ್ನೆ ಮಾಡಿಲ್ಲ" ಎಂದು ಹೇಳಿದರು.

ಯೋಗ್ಯತೆ ನನಗೆ ಇಲ್ಲ
"ಎಚ್. ಡಿ. ಕುಮಾರಸ್ವಾಮಿ ಅವರಿಗೆ ಸರ್ಟಿಫಿಕೇಟ್ ಕೊಡುವಷ್ಟು ಯೋಗ್ಯತೆ ನನಗಿಲ್ಲ. ಅವರು ಎರಡು ಸಲ ಮುಖ್ಯಮಂತ್ರಿ ಆಗಿದ್ದವರು. ಅವರು ದೊಡ್ಡವರು, ಅವರ ಬಗ್ಗೆ ಮಾತನಾಡುವುದಕ್ಕೆ ಆಗಲ್ಲ" ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ
"ಎಚ್. ಡಿ. ದೇವೇಗೌಡರು ನಮ್ಮ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದಾರೆ. ನಾವು ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ, ಮಾಡುವುದಿಲ್ಲ. ಅಸಮಾಧಾನ ಇದ್ದಾಗ ಬಹಿರಂಗವಾಗಿಯೇ ಹೇಳುತ್ತೇವೆ" ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಪಕ್ಷ ಬಿಡುವ ಯೋಚನೆ ಮಾಡಿಲ್ಲ
"1983ರಿಂದ ನಾನು ಜನತಾ ಪರಿವಾರದಲ್ಲಿದ್ದೇನೆ. ತರಾತುರಿಯಲ್ಲಿ ಪಕ್ಷ ಬಿಡುವ ಅನಿವಾರ್ಯತೆ ಇಲ್ಲ. ನಾನು ಪಕ್ಷ ಬಿಡುವುದೇ ಆದರೆ ಮಾಧ್ಯಮಗಳಿಗೆ, ದೇವೇಗೌಡರಿಗೆ ಹೇಳಿಯೇ ಬಿಡುತ್ತೇನೆ. ಮನೆಯ ಯಜಮಾನನ ರೀತಿ ಕುಳಿತುಕೊಂಡು ಚರ್ಚೆ ಮಾಡುವುದು ತಪ್ಪಾ?" ಎಂದು ಬಸವರಾಜ ಹೊರಟ್ಟಿ ಪ್ರಶ್ನಿಸಿದರು.

ಅಸಮಾಧಾನಕ್ಕೆ ಕಾರಣವೇನು?
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗ ಎಚ್. ಡಿ. ಕುಮಾರಸ್ವಾಮಿ ವಿಧಾನ ಪರಿಷತ್ ಸದಸ್ಯರನ್ನು ಕಡೆಗಣಿಸಿದರು. ಕೆಲವು ಶಾಸಕರನ್ನು ಮಾತ್ರ ಹತ್ತಿರಕ್ಕೆ ಬಿಟ್ಟುಕೊಂಡರು. ಹಿರಿಯ ನಾಯಕರನ್ನು ಕಡೆಗಣಿಸಿದರು ಎಂಬುದು ಹಲವು ಶಾಸಕರ ಆರೋಪ. ಇವರೆಲ್ಲಾ ಸೇರಿ ಇಂದು ಸಭೆ ನಡೆಸಬೇಕಿತ್ತು.












Click it and Unblock the Notifications