ಡಿ ಕೆ ರವಿ ಸಾವು: ಕುಮಾರಸ್ವಾಮಿ ಕೇಳಿದ ಮಹತ್ವದ ಪ್ರಶ್ನೆ
ಬೆಂಗಳೂರು, ಮಾ 18: ನಿಷ್ಟಾವಂತ ಐಎಎಸ್ ಅಧಿಕಾರಿ ಡಿ ಕೆ ರವಿ ಅನುಮಾನಾಸ್ಪದ ಸಾವಿನ ಬಗ್ಗೆ ನಾಡೆಲ್ಲಾ ಶೋಕದಲ್ಲಿರುವ ಮಧ್ಯೆ, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರವಿ ಸಂಶಯಾಸ್ಪದ ಸಾವಿನ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ.
ಅಸೆಂಬ್ಲಿಯಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ರವಿ ಅವರು ನೇಣು ಹಾಕಿಕೊಂಡಿದ್ದಾರೆ ಎನ್ನಲಾದ ಕೊಠಡಿಗೆ ನಾನೂ ಹೋಗಿದ್ದೆ. ರವಿ ಅವರು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆಯವರು ಹೇಳುತ್ತಿದ್ದಾರೆ. [ರವಿ ಸಾವಿಗೆ ಕಾರಣವೇನು? ಓಟ್ ಹಾಕಿ]
ಆ ಸೀಲಿಂಗ್ ಫ್ಯಾನ್ ಅನ್ನು ನಾನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ರವಿ ಅವರು ಫ್ಯಾನಿಗೆ ನೇಣು ಹಾಕಿಕೊಂಡಿದ್ದರೆ ಫ್ಯಾನ್ ಸ್ವಲ್ಪ ಮಟ್ಟಿಗಾದರೂ ಜಖಂ ಆಗಬೇಕಿತ್ತಲ್ಲವೇ ಎಂದು ಕುಮಾರಸ್ವಾಮಿ ಮಹತ್ವದ ಪ್ರಶ್ನೆಯನ್ನು ಗೃಹ ಸಚಿವರಿಗೆ ಎಸೆದಿದ್ದಾರೆ. (ಸಿದ್ದು ಮೇಲೆ ಸಾಕ್ಷಿ ನಾಶದ ಆರೋಪ)
ಸದನದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ (ಮಾ 18) ರವಿ ಅವರ ಸಾವಿಗೆ ಸರಕಾರ ಕಾರಣ ಎಂದು ನಾವೇನೂ ಹೇಳುತ್ತಿಲ್ಲ. ಅವರೊಬ್ಬರು ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಅವರ ಸಾವಿನ ಹಿಂದೆ ಹಲವು ಅನುಮಾನಗಳು ಮೂಡಿವೆ ಎಂದು ಹೇಳಿದ್ದಾರೆ.
ಸಚಿವ ಜಾರ್ಜ್ ಅವರೇ ಇದು ಅತ್ಯಂತ ಸೂಕ್ಷ್ಮ ವಿಷಯ. ಜನರು ರವಿ ಅಸಹಜ ಸಾವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ಜನರ ಭಾವನೆಗೆ ಸ್ಪಂದಿಸುವ ಕೆಲಸವನ್ನು ಮಾಡಿ ಎಂದು ಕುಮಾರಸ್ವಾಮಿ, ಸರಕಾರಕ್ಕೆ ಸಲಹೆ ನೀಡಿದ್ದಾರೆ.
ಫ್ಯಾನ್ ಹೊಸದಾಗಿಯೇ ಇದೆ
ರವಿ ನೇಣು ಹಾಕಿಕೊಂಡಿದ್ದಾರೆ ಎನ್ನಲಾದ ಫ್ಯಾನನ್ನು ಒಮ್ಮೆ ನೋಡಲು ನಿಮ್ಮ ಅಧಿಕಾರಿಗಳಿಗೆ ತಿಳಿಸಿ. ತನಿಖೆ ಪ್ರಾಮಾಣಿಕವಾಗಿ ನಡೆಯಲಿ, ನಾವು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿಲ್ಲ. ರಾಜ್ಯದ ಜನರು ರವಿ ಅವರ ಸಾವಿಗೆ ಯಾವ ರೀತಿ ಶೋಕ ವ್ಯಕ್ತ ಪಡಿಸುತ್ತಿದ್ದಾರೆ ಎನ್ನುವುದನ್ನು ನೋಡಿದ್ದೀರಿ. ರಾಜ್ಯದ ಜನತೆಯ ಆಶಯದಂತೆ ಸಿಬಿಐಗೆ ವಹಿಸಿ - ಕುಮಾರಸ್ವಾಮಿ.
ಆತ್ಮಹತ್ಯೆ ಎಂದು ಹೇಗೆ ಹೇಳುತ್ತೀರಿ?
ರವಿ ಅವರ ಮರಣೋತ್ತರ ಪರೀಕ್ಷೆಯ ಮೊದಲೇ ಇದು ಆತ್ಮಹತ್ಯೆ ಎಂದು ಸಚಿವರು ಮತ್ತು ಪೊಲೀಸರು ಹೇಳಿಕೆ ನೀಡುತ್ತಾರೆ. ಇದು ಆತ್ಮಹತ್ಯೆ ಎಂದು ವರದಿ ಬರುವ ಮುನ್ನ ಗೊತ್ತಾಗಲು ಹೇಗೆ ಸಾಧ್ಯ. ಸರಕಾರ ಈ ವಿಚಾರವನ್ನು ಯಾವ ರೀತಿ ಗಂಭೀರವಾಗಿ ತೆಗೆದುಕೊಂಡಿದೆ ಎನ್ನುವುದು ಇದರಿಂದ ಅರ್ಥವಾಗುತ್ತದೆ - ಕುಮಾರಸ್ವಾಮಿ.
ರಘುಪತಿ ಭಟ್ ಪತ್ನಿ ವಿಚಾರ
ರವಿ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಮತ್ತು ಜೆಡಿಎಸ್ ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾಗ, ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಮಾಜಿ ಉಡುಪಿ ಬಿಜೆಪಿ ಶಾಸಕ ರಘುಪತಿ ಭಟ್ ಪತ್ನಿ ಸಾವಿನ ವಿಚಾರವನ್ನು ಪ್ರಸ್ತಾಪಿಸಿದರು. ಇದರಿಂದ ಸದನದಲ್ಲಿ ಮತ್ತೆ ಕೋಲಾಹಲದ ವಾತಾವರಣ ನಿರ್ಮಾಣವಾಯಿತು.
ಕಾಗೋಡು ಮನವಿ
ವಿಧಾನಸಭಾ ಅಧಿವೇಶನ ಕಲಾಪ ಸುಗಮವಾಗಿ ನಡೆಯಬೇಕೆನ್ನುವುದು ನಮ್ಮ ಅಪೇಕ್ಷೆ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳೊಂದಿಗೆ ಸಂಧಾನ ನಡೆಸಿದ್ದೇವೆ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಹೋರಾಟ ಮುಂದುವರಿಯುವುದು
ಅಸಹಜ ಸಾವನ್ನಪ್ಪಿದ ಡಿ ಕೆ ರವಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೂ ಸದನದಲ್ಲೇ ಕುಳಿತು ಹೋರಾಟ ಮುಂದುವರೆಸುವುದಾಗಿ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.