Karnataka weather: ಗುರುವಾರ ಈ 12 ಜಿಲ್ಲೆಗಳಿಗೆ ಭಾರಿ ಮಳೆ, 'ಯೆಲ್ಲೋ ಅಲರ್ಟ್' ಘೋಷಣೆ
ಬೆಂಗಳೂರು, ನವೆಂಬರ್ 08: ಕರ್ನಾಟಕದಲ್ಲಿ ಹಿಂಗಾರು ಮಳೆ ಚುರುಕುಗೊಂಡಿದೆ. ಕೈಕೊಟ್ಟಿದ್ದ ಮುಂಗಾರು ಮಳೆಯ ಕಾರಣದಿಂದ ಬರಗಾಲಕ್ಕೆ ತತ್ತರಿಸಿದ್ದ ರೈತರ ಮೊಗದಲ್ಲಿ ಹಿಂಗಾರು ಮಂದಹಾಸ ಮೂಡಿಸಿದೆ. ಮುಂದಿನ 48 ಗಂಟೆಗಳ ಕಾಲ ಹಿಂಗಾರು ಅಬ್ಬರಿಸಲಿದ್ದು, ಈ ನಿಮಿತ್ತ ರಾಜ್ಯದ 12 ಜಿಲ್ಲೆಗಳಿಗೆ 'ಹಳದಿ ಎಚ್ಚರಿಕೆ' ನೀಡಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಒಳನಾಡು ಕೆಲವು ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಅರ್ಧ ರಾಜ್ಯಕ್ಕೆ ಹಿಂಗಾರು ಉತ್ತಮ ದರ್ಶನವಾಗಿದೆ. ಕೆಲವೆಡೆ ಭಾರಿ ಮುಂದುವರಿಯುವ ಮುನ್ಸೂಚನೆ ಲಭಿಸಿದೆ. ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು ಗುಡುಗು ಮಿಂಚು ಸಹಿತ ಭಾರಿ ಮಳೆಗೆ ಸಾಕ್ಷಿಯಾಗಲಿವೆ.

ಒಳನಾಡು ಜಿಲ್ಲೆಗಳಾದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ ಹಾಗೂ ಹಾವೇರಿ, ಬೆಳಗಾವಿ, ಬಾಗಲಕೋಟೆ, ಧಾರವಾಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗುರುವಾರ ನವೆಂಬರ್ 9ರಂದು ಭಾರೀ ಮಳೆ ಆಗಲಿದೆ. ಹೀಗಾಗಿ ಇಷ್ಟು ಜಿಲ್ಲೆಗಳಿಗೆ 'ಹಳದಿ ಎಚ್ಚರಿಕೆ' ಘೋಷಿಸಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.
ಶುಕ್ರವಾರ ಹಿಂಗಾರು ದುರ್ಬಲ?
ಗುರುವಾರದ ನಂತರ ಕರ್ನಾಟಕದಲ್ಲಿ ಹಿಂಗಾರು ಮಳೆ ದುರ್ಬಲವಾಗುವ ಲಕ್ಷಣಗಳು ಇವೆ. ಹೀಗಾಗಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಉಳಿದ ಕರಾವಳಿ ಹಾಗೂ ಉತ್ತರ ಒಳನಾಡಿನ ಒಂದೆರಡ ಕಡೆ ತುಂತುರು ಮಳೆ ಹಾಗೂ ಶುಷ್ಕ ವಾತಾವರಣ ಮುಂದುವರಿಯಬಹುದು ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಚಿಕ್ಕಬಳ್ಳಾಪುರದಲ್ಲಿ 11 ಸೆಂಟಿ ಮೀಟರ್, ತುಮಕೂರಿನಲ್ಲಿ 10, ಮಂಡ್ಯದಲ್ಲಿ 09, ಹಾವೇರಿ, ರಾಮನಗರ, ಬೆಂಗಳೂರು ನಗರದಲ್ಲಿ ತಲಾ 08, ಗದಗ, ಮೈಸೂರು ಜಿಲ್ಲೆಯಲ್ಲಿ 07 ಸೆಂಟಿ ಮೀಟರ್ ಮಳೆ ದಾಖಲಾಗಿದೆ.

ಈ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆ ದಾಖಲು
ಚಿಕ್ಕಮಗಳೂರು, ಯಾದಗಿರಿ, ಕೋಲಾರ, ಚಿತ್ರದುರ್ಗ, ವಿಜಯನಗರ, ಶಿವಮೊಗ್ಗ, ಬಾಗಲಕೋಟೆ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಕೊಪ್ಪಳ ಸೇರಿದಂತೆ ಇನ್ನಿತರ ಜಿಲ್ಲೆಗಳ ಕೆಲವು ತುಂತುರು-ಹಗುರ ಮಳೆ ದಾಖಲಾಗಿದೆ. ಒಂದೆರಡು ಕಡೆಗಳಲ್ಲಿ ಬಿರುಸಿನ ಮಳೆ ಸುರಿದಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಬಿರುಸು ಮಳೆ ಸಾಧ್ಯತೆ
ಬೆಂಗಳೂರಿನಲ್ಲಿ ಮುಂದಿನ ಎರಡು ದಿನ ಹೀಗೆ ಮಳೆಯ ಮತ್ತು ಚಳಿ ವಾತಾವರಣ ಮುಂದುವರಿಯಲಿದೆ. ನಿತ್ಯ ಸಂಜೆ ನಂತರ ಒಂದೆಡೆ ಮಳೆ ಜಮಾಯಿಸುತ್ತಿದೆ. ಹಲವು ಬಡಾವಣೆಗಳಲ್ಲಿ ತಡರಾತ್ರಿವರೆಗೂ ಮಳೆ ಮುಂದುವರಿಯುತ್ತಿದೆ. ಸಂಚಾರ ಅಸ್ತವೆಸ್ತವಾಗಿದೆ. ಗುರುವಾರವು ಜೋರು ಮಳೆ ಬರುವ ಸಾಧ್ಯತೆ. ತಾಪಮಾನದಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಿಳಿಸಿದೆ.












Click it and Unblock the Notifications