Breaking: ನ.16ಕ್ಕೆ ವಾಯುಭಾರ ಕುಸಿತ, ಕರ್ನಾಟಕದ 4 ಜಿಲ್ಲೆಗೆ ಯೆಲ್ಲೋ ಅಲರ್ಟ್
ಬೆಂಗಳೂರು, ನವೆಂಬರ್ 12: ವಾಯುಭಾರತ ಕುಸಿತಗೊಂಡಿರುವ ಹಿನ್ನೆಲೆ ರಾಜ್ಯಾದ್ಯಂತ ಬಹಳಷ್ಟು ಕಡೆಗಳಲ್ಲಿ ಭಾನುವಾರ (ನ.13) ಹಗುರ ಮಳೆ ಆಗಲಿದೆ. ಮಲೆನಾಡಿನ ಎರಡು ಜಿಲ್ಲೆ ಸೇರಿ ಒಟ್ಟು ನಾಲ್ಕು ಜಿಲ್ಲೆಗಳ ಹಲವೆಡೆ ಭಾರಿ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನಗಳ ಪೈಕಿ ಭಾನುವಾರ ದಕ್ಷಿಣ ಒಳನಾಡಿನ ಚಾಮರಾಜನಗರ ಮತ್ತು ಮೈಸೂರು ಹಾಗೂ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು ಸೇರಿದಂತೆ ನಾಲ್ಕು ಜಿಲ್ಲೆಗಳಿಗೆ ಗುಡುಗು ಸಹಿತ ಜೋರು ಮಳೆ ಸುರಿಯುವ ಸಾಧ್ಯತೆ ಇದೆ. ಈ ನಾಲ್ಕು ಜಿಲ್ಲೆಗಳಿಗೆ ಭಾನುವಾರ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉಳಿದ ನಾಲ್ಕು ದಿನ ಇದೇ ಭಾಗದಲ್ಲಿ ಹಗುರ ಮಳೆ ಆಗಲಿದೆ.
ಕರಾವಳಿ ಭಾಗದ ಜಿಲ್ಲೆಗಳ ಹಲವು ಕಡೆಗಳಲ್ಲಿ ಹಗುರದಿಂದ ಸಾಧಾರಣವಾಗಿ ಮಳೆ ಸುರಿಯಲಿದೆ. ಇದೇ ವೇಳೆ ಉತ್ತರ ಒಳನಾಡಿನ ಭಾಗದಲ್ಲಿ ಕೆಲವು ಕಡೆಗಳಲ್ಲಿ ಶುಷ್ಕ ವಾತಾವರಣ, ಇನ್ನು ಕೆಲವೆಡೆ ಮೋಡ ಕವಿದ ಹಾಗೂ ಹಗುರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ವಿಜ್ಞಾನಿ ಡಾ.ಪ್ರಸಾದ್ ತಿಳಿಸಿದರು.

ನ.16ಕ್ಕೆ ವಾಯುಭಾರ ಕುಸಿತ ಸಾಧ್ಯತೆ
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ಪ್ರದೇಶ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ ದುರ್ಬಲಗೊಂಡಿದೆ. ನಂತರ ಭಾನುವಾರದ ಹೊತ್ತಿಗೆ ಈಶಾನ್ಯ ಅರಬ್ಬಿ ಸಮುದ್ರ ತಲುಪುಲಿದೆ. ಅಲ್ಲಿ ಈ ವಾಯುಭಾರ ಕುಸಿತ ಮತ್ತಷ್ಟು ದುರ್ಬಲಗೊಂಡು ಮೇಲ್ಮೈ ಸುಳಿಗಾಳಿಯಾಗಿ ತದನಂತರ ಕೊನೆಗೊಳ್ಳುವ ಸಾಧ್ಯತೆ ಇದೆ. ನವೆಂಬರ್ 16ರಂದು ಈಶಾನ್ಯ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ನಿರ್ಮಾಣಗೊಳ್ಳುವ ಸಾಧ್ಯತೆ ಇದೆ.
ಚಾಮರಾಜನಗರದ ಕೊಳ್ಳೆಗಾಲದಲ್ಲಿ ಕಳೆದ 24ಗಂಟೆಯಲ್ಲಿ 3ಸೆಂ.ಮೀ. ಅಧಿಕ ಮಳೆ ಆಗಿದೆ. ರಾಜ್ಯದ ಗರಿಷ್ಠ ತಾಪಮಾನ ಕಾರವಾರ ಮತ್ತು ಹೊನ್ನಾವರದಲ್ಲಿ ತಲಾ 34.8 ಡಿಗ್ರಿ ಸೆಲ್ಸಿಯಸ್, ಮಂಗಳೂರಲ್ಲಿ 33 ಡಿಗ್ರಿ ಸೆಲ್ಸಿಯಸ್, ಗದಗ 30 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಬೆಂಗಳೂರಲ್ಲಿ ಮುಂದಿನ 2ದಿನ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಬಹಳಷ್ಟು ಕಡೆ ಹಗುರ, ಕೆಲವೊಮ್ಮ ಜೋರು ಮಳೆ ಆಗುವ ಲಕ್ಷಣಗಳು ಇವೆ. ಈ ವೇಳೆ ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.












Click it and Unblock the Notifications