Rain Alert: ಕುಗ್ಗಿದ ಸೈಕ್ಲೋನ್ ಪ್ರಭಾವ, ಒಣಹವೆ ಎಚ್ಚರಿಕೆ: ನವೆಂಬರ್ 5ರಿಂದ ಕರ್ನಾಟಕದಲ್ಲಿ ವ್ಯಾಪಕ ಮಳೆ
ಬೆಂಗಳೂರು, ನವೆಂಬರ್ 01: ಕರ್ನಾಟಕದಾದ್ಯಂತ ಸುರಿಯುತ್ತಿದ್ದ ಮಳೆ ಇದೀಗ, ಒಂದಷ್ಟು ಜಿಲ್ಲೆಗಳಲ್ಲಿ ಹಗುರವಾಗಿ ಸುರಿಯುವುದಕ್ಕೆ ಸಿಮೀತವಾಗಿದೆ. ಅಷ್ಟರ ಮಟ್ಟಿಗೆ ಭಾರೀ ಮಳೆಯ ಪ್ರಮಾಣ ತಗ್ಗಿದೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಭಾಗದಲ್ಲಿ ಉಂಟಾಗಿದ್ದ ಕ್ರಮವಾಗಿ ಸೈಕ್ಲೋನ್, ವಾಯುಭಾರ ಕುಸಿತದ ಪ್ರಭಾವ ಕಡಿಮೆಯಾದ ಬೆನ್ನಲ್ಲೆ ಕರ್ನಾಟಕದಲ್ಲಿ ಹಿಂಗಾರಿನ ಬಿರುಸು ಇಳಿಕೆಯಾಗಿದ್ದು, ಆದರೆ ಇಂದು ಮತ್ತು ನವೆಂಬರ್ 5ರಿಂದ ಮತ್ತೆ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ತಾಪಮಾನ ಪ್ರಮಾಣ ಏರಿಕೆ ಆಗುತ್ತಿದೆ.
ಹೌದು, ರಾಜ್ಯದ ಒಂದೆರಡು ಕಡೆಗಳಲ್ಲಿ ಸೋನೆ ಮಳೆ ಆಗಿದೆ. ಕಳೆದ ಎರಡು ದಿನಗಳಿಂದ ಮಳೆ ತೀವ್ರ ಸ್ವರೂಪದಲ್ಲಿ ಇಳಿಕೆ ಆಗಿದ್ದು, ಒಣಹವೆ, ಅಧಿಕ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ಮಲೆನಾಡು, ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಆಗಾಗ ಮೋಡ ಕವಿದ ವಾತಾವರಣ ಕಂಡು ಬರುತ್ತಿದೆ. ಇಂದು ಉತ್ತರ ಕನ್ನಡ, ಧಾರವಾಡ, ಬೆಳಗಾವಿಯಲ್ಲಿ ಮಾತ್ರವೇ ಕೊಂಚ ಮಳೆ ಆಗುವ ಸಾಧ್ಯತೆ ಕಾಣಿಸುತ್ತಿದೆ. ಉಳಿದೆಲ್ಲ ಜಿಲ್ಲೆಗಳಲ್ಲಿ ಒಣಹವೆ, ವ್ಯಾಪಕ ಬಿಸಿಲು ಕಂಡು ಬರಲಿದೆ ಎಂದು ಹವಾಮಾನ ಇಲಾಖೆಯು ಮುನ್ಸೂಚನೆಯಲ್ಲಿ ತಿಳಿಸಿದೆ.

ಮುಂದಿನ ನವೆಂಬರ್ 4 ಮತ್ತು 5ರಿಂದ ಎರಡು ದಿನ ರಾಜ್ಯಾದ್ಯಂತ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮತ್ತೆ ಮಳೆ ಭೀತಿ ಆವರಿಸಲಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಉತ್ತಮ ಮಳೆ ಸಂಭವವಿದೆ. ನಂತರ ಎರಡು ದಿನ ಮತ್ತೆ ಸೋನೆ ಮಳೆ, ಅಲ್ಲಲ್ಲಿ ಚುದುರಿದಂತೆ ಹಗುರ ಮಳೆ ನಿರೀಕ್ಷಿಸಬಹುದೆಂದು ಹವಾಮಾನ ಇಲಾಖೆಯು ತಿಳಿಸಿದೆ. ಒಟ್ಟು ನವೆಂಬರ್ ಮೊದಲ ವಾರಾಂತ್ಯದ ನಾಲ್ಕರಿಂದ ಐದು ದಿನ ಮತ್ತೆ ಮಳೆ ಮುನ್ಸೂಚನೆ ಇದೆ ಎಂದು ತಿಳಿಸಲಾಗಿದೆ.
ಮೊಂಥಾ ಚಂಡಮಾರುತ ಅಬ್ಬರ ಕುಂಠಿತಗೊಂಡಿದೆ. ಆಂಧ್ರ, ತೆಲಂಗಾಣ, ತಮಿಳುನಾಡು ಭಾಗದಲ್ಲಿ ಹೆಚ್ಚಿನ ಮಳೆ ಸುರಿಸಿದೆ. ಕೆಲವೆಡೆ ಭಾರೀ ನಷ್ಟ ಉಂಟು ಮಾಡಿದೆ. ಇದೀಗ ಸಮುದ್ರ ಮಟ್ಟದಲ್ಲಿ ಸಣ್ಣಪುಟ್ಟ ವೈಪರೀತ್ಯಗಳು ಇವೆ. ಆದರೆ ಅವರು ಪ್ರಾಥಮಿಕ ಹಂತದಲ್ಲಿವೆ. ಮುಂದಿನ ದಿನಗಳಲ್ಲಿ ಅವರು ತೀವ್ರಗೊಂಡರೆ ಹೆಚ್ಚಿನ ಮಳೆ ಆಗಬಹುದು. ಇಲ್ಲವಾದರೆ ಒಣಹವೆಯ ಮುನ್ಸೂಚನೆ ರಾಜ್ಯಾದ್ಯಂತ ಕಂಡು ಬರುವುದು ಬಹುತೇಕ ನಿಶ್ಚಿತವಾಗಿದೆ.
ರಾಜ್ಯದಲ್ಲಿ ಹೆಚ್ಚುತ್ತಿದೆ ತಾಪಮಾನ
ರಾಜ್ಯದಲ್ಲಿ ಮಳೆ ಅಬ್ಬರ ಕಡಿಮೆಯಾದ ಬೆನ್ನಲ್ಲೆ ತಾಪಮಾನ ಹೆಚ್ಚಾಗುತ್ತಿದೆ. ಗರಿಷ್ಠ ತಾಪಮಾನ ಕಾರವಾರದಲ್ಲಿ 33.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉಳಿದಂತೆ ಮಂಗಳೂರು ವಿಮಾನ ನಿಲ್ದಾಣ 32 ಡಿಗ್ರಿ ಸೆಲ್ಸಿಯಸ್ , ಹೊನ್ನಾವರ 32 ಡಿಗ್ರಿ ಸೆಲ್ಸಿಯಸ್ , ಮಂಗಳೂರು ಶಕ್ತಿನಗರ 32 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 32 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು 31 ಡಿಗ್ರಿ ಸೆಲ್ಸಿಯಸ್, ಹಾವೇರಿ 30 ಡಿಗ್ರಿ ಸೆಲ್ಸಿಯಸ್, ವಿಜಯಪುರ 30 ಡಿಗ್ರಿ ಸೆಲ್ಸಿಯಸ್, ಶಿವಮೊಗ್ಗದ ಆಗುಂಬೆಯಲ್ಲಿ 30 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ. ದಾವಣಗೆರೆ, ಚಿತ್ರದುರ್ಗ ತಲಾ 29 ಡಿಗ್ರಿ ಸೆಲ್ಸಿಯಸ್, ಮೈಸೂರು ಮತ್ತು ಮಂಡ್ಯದಲ್ಲಿ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.












Click it and Unblock the Notifications