ಮಂಡ್ಯದಲ್ಲಿ ರಮ್ಯಾ ಸೋತರೆ ಅಂಬಿ ಮನೆಗೆ
ಮಂಡ್ಯ, ಏ.22: ಮಂಡ್ಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಕಳೆದ ವಾರ ನಡೆದ ಚುನಾವಣೆಯಲ್ಲಿ ಸೋಲುತ್ತಾರಾ? ಗೊತ್ತಿಲ್ಲ. ಆದರೆ ಒಂದು ವೇಳೆ ಪರಾಜಿತರಾದರೆ ಅಂಬರೀಷ್ ಅಂಕಲ್ ಅವರಿಂದಾಗಿಯೇ ತಾನು ಸೋತಿದ್ದು, ಹಾಗಾಗಿ ಅವರನ್ನು ಮನೆಗೆ ಕಳುಹಿಸಿ ಎಂದು ನಟಿ ರಮ್ಯಾ ಅಲವತ್ತುಕೊಳ್ಳಬಹುದು.
ಅಲ್ಲಿಗೆ ರಮ್ಯಾ ಸೋತರೆ ವಸತಿ ಸಚಿವ ಅಂಬರೀಷ್ ಅವರು ಸಚಿವ ಸ್ಥಾನದಿಂದ ನಿರ್ಗಮಿಸಿ ಸ್ವಗೃಹಸ್ಥರಾಗಬೇಕಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ನಿರೀಕ್ಷಿಸದಷ್ಟು ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬ ಗಾಳಿಸುದ್ದಿಯ ನಡುವೆ ಮಂಡ್ಯಾದಲ್ಲಿ ರಮ್ಯಾ ಸೋಲು ಖಚಿತ ಎಂಬ ವರದಿಯನ್ನಾಧರಿಸಿ, ಕಾಂಗ್ರೆಸ್ ಪಕ್ಷವು ಸಚಿವ ಅಂಬರೀಷ್ ಅವರ ತಲೆದಂಡ ಪಡೆಯಬಹುದು.
ಅದರಲ್ಲೂ ಮಂಡ್ಯ ಕ್ಷೇತ್ರದ ಬಗ್ಗೆ ಸ್ವತಃ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಅವರೇ ವಿಶೇಷ ಮುತುವರ್ಜಿ ವಹಿಸಿದ್ದರು. ಭಿನ್ನಮತ, ಒಳಜಗಳನ್ನೆಲ್ಲಾ ಪಕ್ಕಕ್ಕಿಟ್ಟು ಚುನಾವಣೆಯಲ್ಲಿ ರಮ್ಯಾ ಗೆಲ್ಲಲೇಬೇಕೆಂದು ಫರ್ಮಾನು ಹೊರಡಿಸಿದ್ದರು. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಯ ಕಣ್ಗಾವಲು ಹೊರತಾಗಿಯೂ ಪಕ್ಷದ ಅಭ್ಯರ್ಥಿ ಅಲ್ಲಿ ಸೋಲುವುದು ಗ್ಯಾರಂಟಿ. ಇದಕ್ಕೆ ಸ್ಥಳೀಯ ನಾಯಕರೇ ಕುಮ್ಮಕ್ಕು ನೀಡಿದ್ದಾರೆ ಎಂಬ ವರದಿಗಳು ಪಕ್ಷವನ್ನು ತಲುಪಿದೆ.

ಹಾಗಾಗಿ ಕಾಂಗ್ರೆಸ್ ಹೈಕಮಾಂಡ್ ಮೊದಲೇ ಎಚ್ಚರಸಿದ್ದಂತೆ ಯಾರೆಲ್ಲಾ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ್ದಾರೋ, ಪಕ್ಷದ ಅಭ್ಯರ್ಥಿಯ ಸೋಲಿಗೆ ಯಾರು ಚಿತಾವಣೆ ನಡೆಸಿರುತ್ತಾರೋ ಅವರ ತಲೆದಂಡ ಪಡೆಯುವುದು ನಿಶ್ಚಿತ. ಅಂತಹ ಸಂದರ್ಭದಲ್ಲಿ ಸಚಿವ ಅಂಬರೀಷ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ.
ರಮ್ಯಾಗೂ ಅಂಬರೀಷ್ ಅಂಕಲ್ ಬಗ್ಗೆ ಈ ಹಿಂದಿದ್ದಂತೆ ವಿಶೇಷ ಗೌರವ/ ಅಭಿಮಾನವೇನೂ ಇಲ್ಲ. ಏಕೆಂದರೆ ಕಳೆದ ಉಪಚುನಾವಣೆಯಲ್ಲೇ ಅಂಬಿ ಅಂಕಲ್ ರಮ್ಯಾ ಕಾಲೆಳೆದಿದ್ದರು. ಜತೆಗೆ, ಈ ಚುನಾವಣೆಯಲ್ಲೂ ರಮ್ಯಾ ಬಗ್ಗೆ ತನಗೆ ವಿಶೇಷ ಕಾಳಜಿಯೇನೂ ಇಲ್ಲ ಎಂಬುದನ್ನು ಅಂಬರೀಷ್ ಅಂಕಲ್ ಅಗತ್ಯಕ್ಕಿಂತ ಹೆಚ್ಚು ಜಗಜ್ಜಾಹೀರು ಮಾಡಿದ್ದರು.
ಇನ್ನು ತಾವು ಅನಾರೋಗ್ಯಪೀಡಿತರಾದಾಗ ರಮ್ಯಾ ತಮ್ಮ ವರ್ಚಸ್ಸಿಗೆ ಕುಂದುಂಟು ಮಾಡುವಂತೆ ವರ್ತಿಸಿದ್ದಾರೆ ಎಂಬುದೂ ನಟ ಅಂಬರೀಷ್ ಅವರನ್ನು ಘಾಸಿಗೊಳಿಸಿತ್ತು. ಹಾಗಾಗಿ ಸಿಂಗಪುರದಿಂದ ವಾಪಸಾಗುತ್ತಿದ್ದಂತೆ ಒಂದೆರಡು ಬಾರಿ ಅವರು ರಮ್ಯಾ ಮೇಲೆ ಮುಗಿಬಿದ್ದರು. ರಾಜಕೀಯೇತರವಾಗಿಯೂ ಇದು ರಮ್ಯಾ ಮೇಲೆ ಪರಿಣಾಮ ಬಿದ್ದಿದೆ. ಇದರಿಂದ ಚುನಾವಣೆ ವೇಳೆ ತಪ್ಪು ಸಂದೇಶ ರವಾನೆಯಾಗಿದೆ. ಹಾಗಾಗಿ ರಮ್ಯಾ ಸೋಲುವುದು ಖಚಿತ ಎನ್ನಲಾಗಿದೆ.
ಇದಿಷ್ಟು ವರದಿ ತಾಜಾ ಆಗಿ ಪಕ್ಷದ ಹೈಕಮಾಂಡ್ ಕೈಸೇರಿದ್ದು ಸದ್ಯಕ್ಕೆ ಫಲಿತಾಂಶಕ್ಕಾಗಿ ಎದುರು ನೋಡಲಾಗುತ್ತಿದೆ. ಫಲಿತಾಂಶ ಏರುಪೇರಾದರೆ ಅಂಬರೀಷ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಬದಲಾವಣೆಗಳು ಆಗುವುದು ನಿಶ್ಚಿತವೆನ್ನಲಾಗಿದೆ.












Click it and Unblock the Notifications