Karnataka BJP: ನನಗೆ ಬಕೆಟ್ ಹಿಡಿದು ಗೊತ್ತಿಲ್ಲ; ಬಿಜೆಪಿ ಅಧ್ಯಕ್ಷ ಸ್ಥಾನ ಕೊಡಿ: ಬಹಿರಂಗವಾಗಿ ಬೇಡಿಕೆ ಇಟ್ಟ ವಿ ಸೋಮಣ್ಣ
ಬೆಂಗಳೂರು, ಜೂನ್ 24: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಸೂಚನೆಯ ಮೇರೆಗೆ ತಮ್ಮ ಕ್ಷೇತ್ರವನ್ನ ಬಿಟ್ಟು ವರುಣಾ ಹಾಗೂ ಚಾಮರಾಜನಗರದಲ್ಲಿ ಸ್ಪರ್ಧೆ ಮಾಡಿ ಸೋಲು ಅನುಭವಿಸಿರುವ ಮಾಜಿ ಸಚಿವ ವಿ ಸೋಮಣ್ಣ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಾಯಕರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.
ಇನ್ನೂ ಸೋಲಿನ ಬಳಿಕ ಹಲವು ನಾಯಕರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದ ವಿ ಸೋಮಣ್ಣ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ನಡೆಸುತ್ತಾರಾ ಎನ್ನುವ ಮಾತುಗಳು ಕೇಳಿ ಬಂದಿದ್ದು, ವಿಧಾನಸಭಾ ಚುನಾವಣೆಯಲ್ಲಿ ನನಗೆ ಸೋಲಾಗಿದೆ, ನಾನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ನಡೆಸಲ್ಲ ಎಂದು ಮಾಜಿ ಸಚಿವ ವಿ ಸೋಮಣ್ಣ ಸ್ಪಷ್ಟಪಡಿಸಿದ್ದರು. ಆದರೆ, ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಕುರಿತು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ.

ಹೌದು, ಕರ್ನಾಟಕದಲ್ಲಿ ಕೇಸರಿ ಪಕ್ಷವನ್ನು ಮುನ್ನಡೆಸಲು ಬಯಸುವುದಾಗಿ ಬಿಜೆಪಿಯ ಹಿರಿಯ ನಾಯಕ ವಿ ಸೋಮಣ್ಣ ಶುಕ್ರವಾರ ಹೇಳಿದ್ದಾರೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಘಟಕವನ್ನು ಬಲಪಡಿಸಲು ನಾನು ಸೂಕ್ತ ಎಂದು ಮಾಜಿ ಸಚಿವ ವಿ ಸೋಮಣ್ಣ ಹೇಳಿಕೊಂಡಿದ್ದಾರೆ.
ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನಕ್ಕೆ ನನಗೂ ಸಹ ಒಂದು ಅವಕಾಶವನ್ನ ಕೊಡಿ ಎಂದು ಬಿಜೆಪಿ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ ಸೋಲಿ ಪರಾಮರ್ಶೆ ಹಾಗೂ ಪಕ್ಷವನ್ನ ಬಲಪಡಿಸಲು ಸಿದ್ದತೆಯನ್ನ ನಡೆಸಿದೆ. ಅಲ್ಲದೇ ಬಿಜೆಪಿ ಅಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷದ ಸ್ಥಾನಕ್ಕೆ ಯಾರನ್ನು ನೇಮಿಸಬೇಕು ಎನ್ನುವ ಚರ್ಚೆ ಬಿಜೆಪಿ ಪಾಳಯದಲ್ಲಿ ನಡೆಯುತ್ತಿರುವ ಮಧ್ಯೆಯೇ ಸೋಮಣ್ಣ ಅವರು ರಾಜ್ಯಾಧ್ಯಕ್ಷ ಸ್ಥಾನದ ಆಸೆಯನ್ನ ಬಹಿರಂಗಪಡಿಸಿದ್ದಾರೆ.
ಇನ್ನೂ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಗಾಂಭೀರ್ಯ ತರುವುದರ ಜೊತೆಗೆ ನನಗೆ ನೀಡುವ ಕೆಲಸವನ್ನು ಸವಾಲಾಗಿ ತೆಗೆದುಕೊಂಡು ಕಾರ್ಯ ನಿರ್ವಹಿಸುತ್ತೇನೆ. ದೊಡ್ಡ ರಾಜಕಾರಣಿಗಳ ಗರಡಿಯಲ್ಲಿ ಪಳಗಿರುವ ನನಗೆ 100 ದಿನ ಕೊಟ್ಟು ನೋಡಲಿ, ಸುಳ್ಳು ಹೇಳಲ್ಲ, ಹೇಡಿಯೂ ಅಲ್ಲ. ಕೊಟ್ಟ ಕೆಲಸವನ್ನು ಪ್ರಾಣದ ಹಂಗು ತೊರೆದು ಸಾಧಿಸಿ ತೋರಿಸಿದ್ದೇನೆ ಎಂದು ಹೈಕಮಾಂಡ್ ನಾಯಕರಿಗೆ ಮನವಿ ಮಾಡಿದ್ದಾರೆ.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಟ್ಟು ಇತರ ಎಲ್ಲ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ರಾಜಕೀಯದಲ್ಲಿ 45 ವರ್ಷಗಳ ಅನುಭವ ಇದೆ. ಪಕ್ಷದಲ್ಲಿ ಶಿಸ್ತು ಮೂಡಿಸುತ್ತೇನೆ. ಅಜಾಗ್ರತೆ ಆಗಿರುವುದನ್ನು ಜಾಗ್ರತ ಮಾಡುತ್ತೇನೆ. ಈ ವಿಚಾರವಾಗಿ ಕೇಂದ್ರದ ನಾಯಕರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯ ಬಳಿಕ ಪಕ್ಷ ಕಠಿಣ ಪರಿಸ್ಥಿತಿಯನ್ನ ಎದುರಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಅದನ್ನು ಸರಿಪಡಿಸುವ ಕೆಲಸ ಮಾಡಲು ಸಿದ್ಧನಿದ್ದೇನೆ. ನನ್ನಷ್ಟು ಅರ್ಹ ಬೇರೆ ಯಾರೂ ಇಲ್ಲ, ಬಕೆಟ್ ಹಿಡಿದು ಗೊತ್ತಿಲ್ಲ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುತ್ತೇನೆ. ಆರ್. ಅಶೋಕ ಕಾರ್ಯ ವೈಖರಿ ಬೇರೆ. ನನ್ನ ಕಾರ್ಯವೈಖರಿ ಬೇರೆ. ನಾನು ತೆಗೆದುಕೊಂಡಂತೆ ರಿಸ್ಕ್ ಯಾರೂ ತೆಗೆದುಕೊಂಡಿಲ್ಲ ಬಿಡಿ. ಯಾರು ಎಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಒಂದು ವೇಳೆ ನಾನು ಅಧ್ಯಕ್ಷನಾದರೆ ನನ್ನ ಮಾತು ಎಲ್ಲರೂ ಕೇಳಬೇಕು ಎಂದು ಹೇಳಿದರು.












Click it and Unblock the Notifications