ಹುಟ್ಟುಹಬ್ಬದಂದು ಮನಬಿಚ್ಚಿ ಮಾತನಾಡಿದ ಪರಮೇಶ್ವರ್
ಬೆಂಗಳೂರು, ಆ.6 : "ನನಗೆ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇತ್ತು. ಈಗ ಸಹಜವಾಗಿ ಉಪ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಹುದ್ದೆ ನೀಡಿದರೆ ಅದನ್ನು ನಿಭಾಯಿಸಲು ಸಮರ್ಥನಾಗಿದ್ದಾನೆ" ಎಂದು ಕೆಪಿಸಿಸಿ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬುಧವಾರ 63ನೇ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ್, ತಮ್ಮ ಮನದಾಳವನ್ನು ತೆರೆದಿಟ್ಟರು. ನಾನು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೆ. ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ನನಗಿತ್ತು ಎಂದು ತಿಳಿಸಿದರು.

ಚುನಾವಣೆ ವೇಳೆ ನಾನು ಮುಖ್ಯಮಂತ್ರಿಯಾಗಬೇಕು ಎಂಬ ಆಸೆಯಿತ್ತು. ಆದರೆ, ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾದಾಗ ಕ್ಷೇತ್ರದ ಜನತೆಯ ಆಶಯ ಬೇರೆಯೇ ಇತ್ತು. ನಾನು ಪಕ್ಷದ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು. [ಪರಮೇಶ್ವರ್ ಹುಟ್ಟುಹಬ್ಬದ ಬಗ್ಗೆ ಡಿವಿಎಸ್ ಹೇಳಿದ್ದೇನು]
ಸದ್ಯ ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ. ಪಕ್ಷದ ಹೈಕಮಾಂಡ್ ನಾಯಕರು ಹುದ್ದೆಯನ್ನು ನೀಡಿದರೆ, ಅದನ್ನು ನಿಭಾಯಿಸಲು ಸಮರ್ಥನಾಗಿದ್ದೇನೆ ಎಂದು ಹೇಳಿದ ಪರಮೇಶ್ವರ್, ನನಗೆ ಪಕ್ಷದಲ್ಲಿ ಹೆಚ್ಚಿನ ಸ್ಥಾನಮಾನ ಸಿಗಲಿ ಎಂಬುದು ಅಭಿಮಾನಿಗಳ ಬಯಕೆ. ಅವರ ಭಾವನೆಗಳನ್ನು ಗೌರವಿಸುತ್ತೇನೆ ಎಂದರು. [ಪರಮೇಶ್ವರ್ ಡಿಸಿಎಂ ಮಾಡಿ, ಕಾಂಗ್ರೆಸ್ ಕಚೇರಿಯಲ್ಲಿ ಗದ್ದಲ]
ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಯಾವುದೇ ಹುದ್ದೆ ನೀಡಿದರೂ ನಿಭಾಯಿಸಲು ಸಮರ್ಥನಾಗಿದ್ದಾನೆ. ನನಗೆ ಡಿಸಿಎಂ ಹುದ್ದೆ ಸಿಗಲಿದೆ ಎಂಬ ನಂಬಿಕೆ ಇದೆ ಎಂದು ಹೇಳಿದ ಅವರು, ನಾನು ಯಾವುದೇ ಹುದ್ದೆಗಾಗಿ ಲಾಭಿನಡೆಸುವುದಿಲ್ಲ. ಒಂದುವೇಳೆ ಡಿಸಿಎಂ ಹುದ್ದೆ ಸಿಗದಿದ್ದರೆ ನಿರಾಶೆಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.











Click it and Unblock the Notifications