Government Employee: ಕರ್ನಾಟಕ ಸರ್ಕಾರಿ ನೌಕರರ ತುಟ್ಟಿಭತ್ಯೆ ಎಷ್ಟು ಹೆಚ್ಚಳ
ಬೆಂಗಳೂರು, ಅಕ್ಟೋಬರ್ 17: ಕೇಂದ್ರದ ಎನ್ಡಿಎ ಸರ್ಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್ ಕೊಡಗೆ ನೀಡಿದೆ. ತುಟ್ಟಿಭತ್ಯೆ (ಡಿಎ) ಹೆಚ್ಚಳದ ಕುರಿತು ಬುಧವಾರ ಸರ್ಕಾರ ತೀರ್ಮಾನವನ್ನು ಕೈಗೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3ರಷ್ಟು ಹೆಚ್ಚುವರಿ ತುಟ್ಟಿಭತ್ಯೆ ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರಕ್ಕೆ ಸಂಪುಟದ ಅನುಮೋದನೆ ಸಿಕ್ಕಿದೆ. ಈ ಮೂಲಕ ನೌಕರರಿಗೆ ಹಬ್ಬದ ಉಡುಗೊರೆ ನೀಡಲಾಗಿದೆ.
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಶೇಕಡ 3ರಷ್ಟು ಹೆಚ್ಚುವರಿ ಕಂತಿನ ತುಟ್ಟಿಭತ್ಯೆ (ಡಿಎ) ಮತ್ತು ಪಿಂಚಣಿದಾರರಿಗೆ ತುಟ್ಟಿ ಪರಿಹಾರ (ಡಿಆರ್) ಅನ್ನು ನೀಡಲು ಅನುಮೋದಿಸಲಾಗಿದೆ.

ಬೆಲೆ ಏರಿಕೆಯನ್ನು ಸರಿದೂಗಿಸಲು ದಿನಾಂಕ 01/07/2024ರಿಂದ ಅನ್ವಯವಾಗುವಂತೆ ಅಸ್ತಿತ್ವದಲ್ಲಿರುವ ಮೂಲ ವೇತನ/ ಪಿಂಚಣಿಯ ಶೇಕಡ 50ಕ್ಕಿಂತ ಹೆಚ್ಚಿನ ಪ್ರಮಾಣಕ್ಕೆ ಅನುಮೋದನೆ ನೀಡಲಾಗಿದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ ಶಿಫಾರಸುಗಳನ್ನು ಆಧರಿಸಿದ ಸ್ವೀಕೃತ ಸೂತ್ರಕ್ಕೆ ಅನುಗುಣವಾಗಿದೆ.
ಡಿಎ ಮತ್ತು ಡಿಆರ್ ಎರಡೂ ಹೆಚ್ಚಳದಿಂದಾಗಿ ಬೊಕ್ಕಸದ ಮೇಲಿನ ಸಂಯೋಜಿತ ವಾರ್ಷಿಕ ಹೊರೆಯು ರೂ. 9,448.35 ಕೋಟಿಗಳಾಗಿರುತ್ತದೆ. ಈ ನಿರ್ಧಾರದಿಂದಾಗಿ ಸುಮಾರು 49.18 ಲಕ್ಷ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತು 64.89 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ರಾಜ್ಯದಲ್ಲಿ ಎಷ್ಟು ತುಟ್ಟಿಭತ್ಯೆ ಹೆಚ್ಚಳ: ಪ್ರತಿ ಬಾರಿಯು ಕೇಂದ್ರ ಸರ್ಕಾರ ತುಟ್ಟಿಭತ್ಯೆ ಹೆಚ್ಚಳ ಮಾಡಿದ ಬಳಿಕ ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡುತ್ತದೆ. ಕರ್ನಾಟಕ ಸರ್ಕಾರ ರಚನೆ ಮಾಡಿದ್ದ 7ನೇ ರಾಜ್ಯ ವೇತನ ಆಯೋಗದ ಶಿಫಾರಸಿನ ಅನ್ವಯ ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಲಾಗುತ್ತದೆ.
ಈಗ ಕರ್ನಾಟಕ ಸರ್ಕಾರ ಎಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಿದೆ? ಎಂದು ನೌಕರರು ಕುತೂಹಲದಿಂದ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರಿ ನೌಕರರಿಗೆ ಶೇ. 3ರಷ್ಟು ತುಟ್ಟಿಭತ್ಯೆ ಹೆಚ್ಚಳ ಮಾಡಲಾಗಿದೆ. ಕರ್ನಾಟಕ ಸರ್ಕಾರವು ಶೇ 2.3ರಷ್ಟು ತುಟ್ಟಿ ಭತ್ಯೆ ನೀಡುವ ಸಾಧ್ಯತೆ ಇದೆ.
ಕರ್ನಾಟಕ ಸರ್ಕಾರಕ್ಕೆ ತನ್ನ ವರದಿ ನೀಡಿರುವ ಕೆ. ಸುಧಾಕರ್ ನೇತೃತ್ವದ ರಾಜ್ಯ ವೇತನ ಆಯೋಗ ಕೇಂದ್ರದ ತುಟ್ಟಿ ಭತ್ಯೆ ಸೂತ್ರ ಮತ್ತು ಮಾದರಿಯನ್ನು ಅಳವಡಿಸಿಕೊಳ್ಳುವುದನ್ನು ಮುಂದುವರಿಸಲಾಗುತ್ತದೆ ಎಂದು ಹೇಳಿದೆ. ದಿನಾಂಕ 01.07.2022 ರಂತೆ 361.704 ಸೂಚ್ಯಂಕ ಮಟ್ಟದಲ್ಲಿ ಸಂಪೂರ್ಣವಾಗಿ ತಟಸ್ಥಗೊಂಡಿರುವ ತುಟ್ಟಿ ಭತ್ಯೆಯೊಂದಿಗೆ, ದಿನಾಂಕ 01.07.2022 ರಿಂದ, ಭಾರತ ಸರ್ಕಾರವು ಮಂಜೂರು ಮಾಡಿದ ಪ್ರತಿ ಶೇ.1 ರಷ್ಟು ತುಟ್ಟಿಭತ್ಯೆಗೆ, ರಾಜ್ಯ ಸರ್ಕಾರಿ ನೌಕರರಿಗೆ ಮಂಜೂರು ಮಾಡಬೇಕಾದ ತುಟ್ಟಿಭತ್ಯೆಯು ಪರಿಷ್ಕೃತ ಮೂಲ ವೇತನದ ಶೇ.0.722 ರಷ್ಟು ಆಗಿರುತ್ತದೆ ಎಂದು ವರದಿಯಲ್ಲಿ ಶಿಫಾರಸು ಮಾಡಿದೆ.
ರಾಜ್ಯ 7ನೇ ವೇತನ ಆಯೋಗ ರೂಢಿಯಲ್ಲಿರುವಂತೆ, ರಾಜ್ಯ ಸರ್ಕಾರವು ಅಳವಡಿಸಿಕೊಳ್ಳಬೇಕಾದ ತುಟ್ಟಿ ಭತ್ಯೆಯ ಸೂತ್ರವನ್ನು ನಿರ್ಧರಿಸುವ ಕಾರ್ಯವನ್ನು ಸಹ ಈ ಆಯೋಗಕ್ಕೆ ವಹಿಸಲಾಗಿದೆ. ಹಣದುಬ್ಬರ ಪರಿಣಾಮದಿಂದ ನೌಕರರ ವೇತನದ ಮೌಲ್ಯವನ್ನು ರಕ್ಷಿಸಲು ಸರ್ಕಾರಿ ನೌಕರರಿಗೆ ತುಟ್ಟಿ ಭತ್ಯೆಯನ್ನು ಸಂದಾಯ ಮಾಡಲಾಗುತ್ತದೆ. ಹಣದುಬ್ಬರವನ್ನು ಯಾವ ರೀತಿಯಲ್ಲಿ ಸರಿದೂಗಿಸುವುದು ಮತ್ತು ವೇತನ ರಚನೆಯಲ್ಲಿ ಅಳವಡಿಸುವುದು ಎಂಬುದನ್ನು ತುಟ್ಟಿ ಭತ್ಯೆ ಸೂತ್ರವು ಸೂಚಿಸುತ್ತದೆ ಎಂದು ಹೇಳಿದೆ.
ಹಲವು ವರ್ಷಗಳಿಂದ ಕರ್ನಾಟಕವು ಕೇಂದ್ರ ತುಟ್ಟಿ ಭತ್ತ ಸೂತ್ರವನ್ನು ಮತ್ತು ವಿಧಾನವನ್ನು ಅನುಸರಿಸಿಕೊಂಡು ಬರುತ್ತಿದೆ. ಬಹುತೇಕ ಇತರ ರಾಜ್ಯಗಳು ಸಹ ಇದೇ ರೀತಿ ಮಾಡುತ್ತಿವೆ. ಆಯೋಗದ ಶಿಫಾರಸ್ಸುಗಳು ಜಾರಿಗೆ ಬಂದ ಸಮಯದಲ್ಲಿ ಅನ್ವಯವಾಗುವ ತುಟ್ಟಿ ಭತ್ಯೆಯ ಪ್ರಮಾಣವನ್ನು ನಿಷ್ಪರಿಣಾಮಗೊಳಿಸಿ (ಪರಿಷ್ಕೃತ) ವೇತನದಲ್ಲಿ ಅದನ್ನು ಅಂತರ್ಗತಗೊಳಿಸಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತುಟ್ಟಿ ಭತ್ಯೆಯನ್ನು ಲೆಕ್ಕ ಹಾಕಲು ಅನುಸರಿಸುವ ಸೂತ್ರವು ಈ ಮುಂದಿನಂತಿದೆ. ಪ್ರತಿ ವರ್ಷದ ಡಿಸೆಂಬರ್ ಮತ್ತು ಜೂನ್ ಅಂತ್ಯಕ್ಕೆ ಎಐಸಿಪಿಐಎಎನ್ನ ಹನ್ನೆರಡು ತಿಂಗಳ ಅಂದಾಜು ಮೊತ್ತದ ಏರಿಕೆ ಮತ್ತು ಇದಕ್ಕೆ ಪ್ರತಿಯಾಗಿ ವೇತನ ರಚನೆಯನ್ನು ನಿರ್ಧರಿಸಲು ಬಳಸಲಾದ ಸೂಚ್ಯಂಕದ ಮೂಲ ಸಂಖ್ಯೆಯನ್ನು ಆಧರಿಸಿ ತುಟ್ಟಿ ಭತ್ಯೆಯ ಪರಿಹಾರವನ್ನು ರೂಪಿಸಲಾಗುತ್ತದೆ. ಪ್ರತಿ ವರ್ಷವೂ ಜನವರಿ ಮತ್ತು ಜುಲೈನಲ್ಲಿ ಎರಡು ಬಾರಿ ತುಟ್ಟಿ ಭತ್ಯೆಯನ್ನು ಮಂಜೂರು ಮಾಡಲಾಗುತ್ತದೆ.
ಆಯೋಗವು ಈ ಪದ್ಧತಿಯನ್ನು ಬದಲಿಸಲು ಯಾವುದೇ ಕಾರಣವಿಲ್ಲವೆಂದು ಮತ್ತು 4ನೇ ರಾಜ್ಯ ವೇತನ ಆಯೋಗವು ಅವಲೋಕಿಸಿದಂತೆ ಪ್ರಸ್ತುತ ಪದ್ಧತಿಯು ಉತ್ತಮವಾಗಿ ಸ್ಥಾಪಿತವಾಗಿದೆ ಮತ್ತು ಎಲ್ಲಾ ಭಾಗೀದಾರರಿಂದ ಉತ್ತಮವಾಗಿ ಗ್ರಹಿಸಲ್ಪಟ್ಟಿರುತ್ತದೆ ಹಾಗೂ ಹೊಸ ಪದ್ಧತಿಯನ್ನು ಅಭಿವೃದ್ಧಿಪಡಿಸುವುದಕ್ಕೆ ಹೆಚ್ಚಿನ ಕಾಲವ್ಯಯವಾಗುವುದಲ್ಲದೆ ಯಾವುದೇ ಹೆಚ್ಚುವರಿ ಲಾಭ ಅಥವಾ ಪ್ರಯೋಜನವಿಲ್ಲದಿರುವುದರಿಂದ ಕೇಂದ್ರ ತುಟ್ಟಿ ಭತ್ಯೆ ಸೂತ್ರ ಮತ್ತು ವಿಧಾನವನ್ನು ಮುಂದುವರೆಸಲು ಶಿಫಾರಸ್ಸು ಮಾಡುತ್ತದೆ ಎಂದು ಆಯೋಗ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.











Click it and Unblock the Notifications