ಹಿಂದೂ ಸಂಘಟನೆ ಸದಸ್ಯರು ಎಷ್ಟೊಂದು ಮಂದಿ ಸತ್ತರು?
ಬೆಂಗಳೂರು, ಅಕ್ಟೋಬರ್ 17: ಶಿವಾಜಿನಗರದ ಕಾಮರಾಜ್ ರಸ್ತೆಯಲ್ಲಿ ಭಾನುವಾರ (ಅಕ್ಟೋಬರ್ 16) ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಕೊಲೆಯಾಗಿದೆ. ಈ ಪ್ರಕರಣದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ಶಾಸಕರು, ಸಂಸದರು ಪ್ರತಿಭಟನೆ ನಡೆಸಿ, ರಾಜ್ಯ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರುದ್ರೇಶ್ ಹತ್ಯೆಯನ್ನು ಖಂಡಿಸಿ, ತಪ್ಪಿತಸ್ಥರ ಶೀಘ್ರ ಬಂಧನಕ್ಕೆ ಆಗ್ರಹಿಸಿ, ಆರ್ ಎಸ್ ಎಸ್ ಸೋಮವಾರ ಶಿವಾಜಿ ನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಂದ್ ಗೆ ಸಹ ಕರೆ ನೀಡಿದೆ. ಇದೇ ವೇಳೆ, ವೈಯಕ್ತಿಕ ದ್ವೇಷದಿಂದ ರುದ್ರೇಶ್ ಕೊಲೆಯಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಗೆ ಮುನ್ನವೇ ತನಿಖೆ ದಿಕ್ಕು ತಪ್ಪಿಸುವ ಯತ್ನ ನಡೆದಿದೆ ಎಂದು ಆರೋಪ ವ್ಯಕ್ತವಾಗುತ್ತಿದೆ.[ಶಿವಾಜಿನಗರದಲ್ಲಿ ಆರೆಸ್ಸೆಸ್ ಕಾರ್ಯಕರ್ತನ ಕಗ್ಗೊಲೆ]
ಅಂದಹಾಗೆ, ಕಳೆದ ಒಂದು-ಒಂದೂವರೆ ವರ್ಷದಲ್ಲಿ ರಾಜ್ಯದ ವಿವಿಧೆಡೆ ಹತ್ಯೆಗೀಡಾದ ಹಿಂದೂಪರ ಸಂಘಟನೆಗಳ ಸದಸ್ಯರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮಡಿಕೇರಿಯ ಡಿ.ಎಸ್.ಕುಟ್ಟಪ್ಪ
ವಿಶ್ವ ಹಿಂದೂ ಪರಿಷತ್ (ಮಡಿಕೇರಿ) ಸಂಘಟನಾ ಕಾರ್ಯದರ್ಶಿಯಾಗಿದ್ದ ಕುಟ್ಟಪ್ಪ ಅವರು ನವೆಂಬರ್ 10, 2015ರಲ್ಲಿ, ಟಿಪ್ಪು ಸುಲ್ತಾನ್ ಜಯಂತಿಯಂದು ಮೆರವಣಿಗೆ ವೇಳೆ ಹತ್ಯೆಗೀಡಾದರು.
ಮಡಿಕೇರಿಯ ಪ್ರವೀಣ್ ಪೂಜಾರಿ
ಮಡಿಕೇರಿಯ ಗುಡ್ಡೆಹೊಸೂರು ಸಮೀಪದ ಅತ್ತೂರು ಗ್ರಾಮದ, ಆರ್ ಎಸ್ ಎಸ್ ಕಾರ್ಯಕರ್ತರಾಗಿದ್ದ ಪ್ರವೀಣ್ ಪೂಜಾರಿ 2016ರ ಅಗಸ್ಟ್ ನಲ್ಲಿ ಕೊಲೆಯಾದರು. ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ವೇಳೆ ಪ್ರವೀಣ್ ಪೂಜಾರಿ ಅವರ ಹತ್ಯೆಯಾಗಿತ್ತು.
ಉಡುಪಿಯ ಪ್ರವೀಣ ಪೂಜಾರಿ
ಬಿಜೆಪಿ ಕಾರ್ಯಕರ್ತರಾಗಿದ್ದ ಪ್ರವೀಣ ಪುಜಾರಿ ದನ ಸಾಗಿಸುವಾಗ ಉಡುಪಿಯ ಸಂತೆ ಕಟ್ಟೆ ಬಳಿ ಬಜರಂಗ ದಳ ಹಾಗೂ ವಿಎಚ್ ಪಿ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಈ ಘಟನೆ ಆಗಸ್ಟ್ 2016ರಲ್ಲಿ ನಡೆದಿತ್ತು.
ಮೈಸೂರಿನ ರಾಜು
ಕ್ಯಾತಮಾರನಹಳ್ಳಿ ವಾಸಿ, ವಿಶ್ವ ಹಿಂದೂ ಪರಿಷತ್-ಬಿಜೆಪಿ ಕಾರ್ಯಕರ್ತ ರಾಜು ಅವರನ್ನು ಮೈಸೂರಿನ ಎಂ.ಜಿ.ರಸ್ತೆಯ ವಿನಾಯಕ ಟೀ ಸ್ಟಾಲ್ ಬಳಿ ಮಚ್ಚಿನಿಂದ ಹಲ್ಲೆ ನಡೆಸಿ, ಕೊಲ್ಲಲಾಗಿತ್ತು.
ಧಾರವಾಡದ ಯೋಗೇಶ್ ಗೌಡ
ಬಿಜೆಪಿಯಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ ಗೌಡ ಜೂನ್ 15, 2016ರಲ್ಲಿ ಹತ್ಯೆಯಾಗಿದ್ದರು. ಧಾರವಾಡದ ಹೆಬ್ಬಳ್ಳಿ ಕ್ಷೇತ್ರದ ಸದಸ್ಯರಾಗಿದ್ದ ಯೋಗೇಶ್ ಗೌಡ, ಸಪ್ತಾಪುರ ಪ್ರದೇಶದಲ್ಲಿರುವ ಉದಯ್ ಜಿಮ್ ನಲ್ಲಿ ಕೊಲೆಯಾಗಿದ್ದರು.
ಮೂಡಬಿದರೆ ಪ್ರಶಾಂತ್
ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಹೊಸಬೆಟ್ಟು ಗ್ರಾಮದ ಪ್ರಶಾಂತ್ ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದರೆಯಲ್ಲಿ ಅಕ್ಟೋಬರ್ 9, 2015ರಲ್ಲಿ ಹತ್ಯೆಯಾಗಿದ್ದರು.