ನನ್ನ ಹೆಂಡತಿಗೂ ಫ್ರೀ: ಎಲ್ಲ ಗ್ಯಾರಂಟಿಗಳಿಗೆ ಸಿಎಂ ಸಿದ್ದರಾಮಯ್ಯ ಅಸ್ತು
ಬೆಂಗಳೂರು, ಜೂನ್ 2: ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿಗಳಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಸ್ತು ಎಂದಿದ್ದು, ಎಲ್ಲ ಗ್ಯಾರಂಟಿಗಳಿಗೆ ಷರತ್ತುಬದ್ಧ ಅನುಮತಿಯನ್ನು ನೀಡಿದ್ದಾರೆ.
ಗ್ಯಾರಂಟಿ ಸಂಬಂಧ ವಿಧಾನಸೌಧದಲ್ಲಿ ಕ್ಯಾಬಿನೆಟ್ ಸಭೆ ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾವು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ, ಅದಕ್ಕಿಂತ ಮುಂಚಿತವಾಗಿ ನೀಡಿದ್ದ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೇವು. ಇದಕ್ಕೆ ನಮ್ಮ ಸಹಿ ಮಾಡಿ ಗ್ಯಾರಂಟಿ ಕಾರ್ಡ್ ನೀಡಿದ್ದೇವು. ನಾವು ಈ ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೇವು. ಅದರಂತೆ ಎಲ್ಲ ಗ್ಯಾರಂಟಿ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದರು.

ಇದನ್ನು ಎಲ್ಲ ಮನೆಗಳಿಗೂ ಹಂಚಲಾಗಿತ್ತು. ಈ ಮಧ್ಯೆ ವಿರೋಧ ಪಕ್ಷದವರು ಅಪಪ್ರಚಾರ ಮಾಡಿದ್ದರು. ಮಾಧ್ಯಮಗಳಲ್ಲೂ ಚರ್ಚೆ ನಡೆದಿತ್ತು. ನಾವು 5 ಗ್ಯಾರಂಟಿಗಳಿಗೆ ನಾವು ಆಗಲೇ ಜಾರಿ ಸಂಬಂಧ ಆದೇಶ ಹೊರಡಿಸಿದ್ದೆವು. ಈಗಲೂ ಕ್ಯಾಬಿನೆಟ್ ಸಭೆಯಲ್ಲೂ ಚರ್ಚೆ ಮಾಡಿ ನಿರ್ಧಾರ ಮಾಡಿದ್ದೇವೆ. 5 ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.
ಗ್ಯಾರಂಟಿಗಳನ್ನು ಯಾವುದೇ ಜಾತಿ, ಧರ್ಮ, ಭಾಷೆಗಳ ತಾರತಮ್ಯವಿಲ್ಲದೆ ಜಾರಿ ಮಾಡುತ್ತೇವೆ. ಕರ್ನಾಟಕದ ಜನತೆಗೆ ಈ ಗ್ಯಾರಂಟಿ ಜಾರಿ ಮಾಡುತ್ತೇವೆ. ಇರದಲ್ಲಿ 1. ಗೃಹಜ್ಯೋತಿ, 200 ಯುನಿಟ್ ಉಚಿತ ವಿದ್ಯುತ್ ಇದು ಮೊದಲ ಗ್ಯಾರಂಟಿಯಾಗಿದೆ. ಇದಕ್ಕೆ 12 ತಿಂಗಳ ಅವಧಿ ಲೆಕ್ಕ ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಶೇಕಡ 10 ಹೆಚ್ಚು ಮಾಡುತ್ತೇವೆ. 200 ಯುನಿಟ್ವರೆಗಿನ ವಿದ್ಯುತ್ ಬಳಸಿದರೆ ಶುಲ್ಕ ವಿಧಿಸಲ್ಲ ಎಂದರು.
ನೀವು 199 ಯುನಿಟ್ವರೆಗೂ ವಿದ್ಯುತ್ ಬಳಸಿದರೆ ಶುಲ್ಕ ವಿಧಿಸಲ್ಲ. ಈ ತಿಂಗಳು ಬಿಲ್ ತಯಾರು ಆಗಿರುವುದರಿಂದ ಮುಂದಿನ ತಿಂಗಳು ಜುಲೈ 1ರಿಂದ ಇದು ಜಾರಿ ಬರಲಿದೆ. ಈ ತಿಂಗಳು ಕಟ್ಟಬೇಕು ಇಲ್ಲಿವರೆಗೂ (ಜುಲೈ) ಉಳಿಸಿರುವ ಬಾಕಿಯನ್ನು ಸೇರಿಸಿ ಜನರೇ ಕಟ್ಟಬೇಕು. ಇಲ್ಲಿ ಬಾಡಿಗೆದಾರರಿಗೂ ಉಚಿತ ವಿದ್ಯುತ್ ಅನ್ವಯವಾಗುತ್ತದೆ ಎಂದರು.
2. ಗೃಹಲಕ್ಷ್ಮೀ ಯೋಜನೆ ಮನೆ ಯಜಮಾನಿಗೆ ಈ ಗ್ಯಾರಂಟಿ ಅನ್ವಯವಾಗುತ್ತದೆ. ಇದಕ್ಕೆ ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆ ಒದಗಿಸಬೇಕಾಗುತ್ತದೆ. ಅವರು ಈ ಫಲಾನುಭವಿಯಾಗಲು ಖಾತೆಗೆ ಹಣ ಜಮೆ ಜೂನ್ 15ರಿಂದ ಜುಲೈ 15ವರೆಗೆ ಆನ್ಲೈನ್ ಅರ್ಜಿ ಹಾಕಬೇಕು. ಜುಲೈ 15 ಆಗಸ್ಟ್ 15ರವರೆಗೆ ಪರಿಶೀಲಿಸಿ ಅವರ ಪ್ರತಿ ತಿಂಗಳು ಖಾತೆಗೆ ಹಣ ಜಮೆ ಮಾಡುತ್ತೇವೆ. ಇದರಲ್ಲಿ ಬಿಪಿಎಲ್ ಹಾಗೂ ಎಪಿಎಲ್ ಎರಡಕ್ಕೂ ಅನ್ವಯವಾಗುತ್ತದೆ ಎಂದರು.
18 ವರ್ಷ ತುಂಬಿರುವ ಯಾರದರೂ ಕುಟುಂಬದ ಯಜಮಾನಿಯು ಇದಕ್ಕೆ ಅರ್ಜಿ ಹಾಕಬಹುದು. ಇದಕ್ಕಾಗಿಯೇ ಅರ್ಜಿ ಕರೆಯುತ್ತಿದ್ದೇವೆ. ಇದಕ್ಕಾಗಿ ಬ್ಯಾಂಕ್ ಖಾತೆ ಹಾಗೂ ಲಿಂಕ್ ಆಗಿರುವ ಆಧಾರ್ ಸಂಖ್ಯೆ ಮುಖ್ಯವಾಗಿರುತ್ತದೆ. ಇಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ತೆಗೆದುಕೊಳ್ಳುವವರು ಕೂಡ ಪರಿಗಣಿಸಲಾಗುತ್ತದೆ. ಅವರನ್ನು ಇಲ್ಲಿ ಕೈಬಿಡಲಾಗಲ್ಲ ಎಂದರು.
3. ಅನ್ನಭಾಗ್ಯ ಯೋಜನೆಯಡಿಯಲ್ಲಿ ನಾವು ಗ್ಯಾರಂಟಿ ನೀಡಿದಂತೆ ಆಹಾರ ಧಾನ್ಯಗಳನ್ನು ಜುಲೈ 1ರಂದು ಎಲ್ಲ ಬಿಪಿಎಲ್ ಕಾರ್ಡ್ ಹಾಗೂ ಅಂತ್ಯೋದಯ ಕಾರ್ಡ್ದಾರರಿಗೆ ಪ್ರತಿಯೊಬ್ಬರಿಗೆ 10 ಕೆಜಿ ಆಹಾರ ಧಾನ್ಯ ನೀಡಲಾಗುತ್ತದೆ ಎಂದರು.
4. ಶಕ್ತಿ ಗ್ಯಾರಂಟಿ ಯೋಜನೆಯಡಿ ಎಲ್ಲ ಮಹಿಳೆಯರಿಗೆ ಅವರ ಸ್ಥಿತಿಗತಿಯನ್ನದೆ ವಿದ್ಯಾರ್ಥಿಗಳನ್ನು ಒಳಗೊಂಡಂತೆ ಜೂನ್ 11ರಂದು ಉಚಿತ ಬಸ್ ಪ್ರಯಾಣ ಜಾರಿ ಮಾಡಲಾಗುತ್ತಿದೆ. ಈ ಯೋಜನೆ ಕರ್ನಾಟಕ ರಾಜ್ಯ ಒಳಗೆ ಮಾತ್ರ ಅನ್ವಯವಾಗುತ್ತದೆ. ಎಸಿ ಮತ್ತು ಲಕ್ಷುರಿ ಬಸ್ ಬಿಟ್ಟು ಎಲ್ಲ ಬಸ್ಗಳಿಗೂ ಅನ್ವಯವಾಗುತ್ತದೆ. ಇದು ಕರ್ನಾಟಕದವರಿಗೆ ಮಾತ್ರ ಅನ್ವಯವಾಗುತ್ತದೆ ಎಂದರು.
5. ಯುವನಿಧಿ ಗ್ಯಾರಂಟಿಯಡಿ 2022- 23ರಲ್ಲಿ ವ್ಯಾಸಂಗ ಮಾಡಿ ಪಾಸ್ ಆದ ಎಲ್ಲ ಪದವೀಧರರಿಗೆ ಪ್ರತಿ ತಿಂಗಳಿಗೆ 3,000 ರೂಪಾಯಿ. ಡಿಪ್ಲೊಮೊ ಮಾಡಿರುವವರಿಗೆ 1,500 ರೂಪಾಯಿ 24 ತಿಂಗಳುಗಳ ವರೆಗೆ ನಿಧಿ ನೀಡಲಾಗುತ್ತದೆ. ಇಲ್ಲಿ 24 ತಿಂಗಳು ಮೊದಲೇ ಕೆಲಸ ಸಿಕ್ಕರೆ ಅವರಿಗೆ ಗ್ಯಾರಂಟಿ ಅಂತ್ಯವಾಗುತ್ತದೆ. ಇದಕ್ಕೆ ಎಲ್ಲ ಅರ್ಜಿ ಹಾಕಬೇಕಾಗುತ್ತದೆ. ಇಲ್ಲಿ ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಮಂಗಳಮುಖಿಯರನ್ನು ಸೇರಿದಂತೆ ನೀಡಲಾಗುತ್ತದೆ. ಪದವೀಧರರು 180 ದಿನಗಳವರೆಗೆ ಕೆಲಸವಿಲ್ಲದಿರುವ 18ರಿಂದ 25 ವರ್ಷದವರಿಗೆ ಈ ಗ್ಯಾರಂಟಿ ಅನ್ವಯವಾಗುತ್ತದೆ ಎಂದರು.
ಮೊದಲಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಮಾತಿಗೆ ನಾವು ಬದ್ಧ. ಇದು ರಾಜ್ಯಕ್ಕೆ ಒಳ್ಳೆಯ ನಿರ್ಧಾರವಾಗಿದೆ. ಕರ್ನಾಟಕ ವಿಧಾನಸಭಾ ಚುನಾವಣೆ ವೇಳೆ ಕಾಂಗ್ರೆಸ್ ನೀಡಿದ್ದ 5 ಗ್ಯಾರಂಟಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಯಾಬಿನೆಟ್ ಸಚಿವರೊಂದಿಗೆ ಸಭೆ ನಡೆಸಿ ತೀರ್ಮಾನ ಮಾಡಿದ್ದಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೃಹಶಕ್ತಿ, ಶಕ್ತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡುವ ಭರವಸೆ ನೀಡಲಾಗಿತ್ತು. ಆದರೆ ಈಗ ಉಚಿತ ಬಸ್ ಪ್ರಯಾಣ ಹಾಗೂ ತಿಂಗಳಿಗೆ 200 ಯುನಿಟ್ ಉಚಿತ ವಿದ್ಯುತ್ ನೀಡುವ ಶಕ್ತಿ ಯೋಜನೆ ಜಾರಿಗೆ ಒತ್ತಡ ಹೆಚ್ಚುತ್ತಿತ್ತು.
ಈ ಸಂಬಂಧ ಬುಧವಾರವೂ ಹಿರಿಯ ಅಧಿಕಾರಿಗಳು, ಇಲಾಖೆ ಕಾರ್ಯದರ್ಶಿಗಳು ಹಾಗೂ ಸಂಪುಟದ ಸಚಿವರೊಂದಿಗೆ ಕ್ಯಾಬಿನೆಟ್ ಮೀಟಿಂಗ್ ನಡೆದಿತ್ತು. ಆದರೆ ಯೋಜನೆಗಳ ಸಂಬಂಧ ರೂಪುರೇಷೆ ಸಿದ್ದವಾಗದ ಹಿನ್ನೆಲೆ ಸಭೆಯನ್ನು ಶುಕ್ರವಾರಕ್ಕೆ ಮುಂದೂಡಲಾಗಿತ್ತು. ಈ ಬೆನ್ನಲ್ಲೇ ಶುಕ್ರವಾರ ಬೆಳಗ್ಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದರು. ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಧ್ಯಾಹ್ನ 1 ಗಂಟೆವರೆಗೂ ಕಾಯುವಂತೆ ತಿಳಿಸಿದ್ದರು.












Click it and Unblock the Notifications