ತಕ್ಷಣ ಮುಷ್ಕರ ನಿಲ್ಲಿಸಲಿ ಎಚ್ಎಎಲ್ ನೌಕರರಿಗೆ ಆದೇಶ
ಬೆಂಗಳೂರು, ಅಕ್ಟೋಬರ್ 22 : ಎಚ್ಎಎಲ್ ನೌಕರರು ನಡೆಸುತ್ತಿರುವ ಮುಷ್ಕರವನ್ನು ತಕ್ಷಣ ನಿಲ್ಲಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ನೌಕರರು ಕಳೆದ 8 ದಿನಗಳಿಂದ ಮುಷ್ಕರವನ್ನು ನಡೆಸುತ್ತಿದ್ದಾರೆ.
ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ ( ಎಚ್ಎಎಲ್) ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಹೈಕೋರ್ಟ್ ನಡೆಸಿತು. ಹಿಂದೂಸ್ಥಾನ್ ಏರೋನಾಟಿಕ್ಸ್ ನೌಕರರ ಸಂಘ ಕಚೇರಿ ದೈನಂದಿನ ವ್ಯವಹಾರ, ನಷ್ಟ ಉಂಟು ಮಾಡುವಂತೆ ಪ್ರತಿಭಟನೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಹೇಳಿದೆ.
ಅಕ್ಟೋಬರ್ 14ರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಚ್ಎಎಲ್ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ನೌಕರರ ಪ್ರತಿಭಟನೆಯಿಂದಾಗಿ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿದೆ ಎಂದು ಎಚ್ಎಎಲ್ ನ್ಯಾಯಾಲಯದ ಮೊರೆ ಹೋಗಿತ್ತು.

ನೌಕರರು ತಕ್ಷಣ ಮುಷ್ಕರ ಕೈ ಬಿಟ್ಟು ಕೆಲಸಕ್ಕೆ ಹಾಜರಾಗಬೇಕು. ಪ್ರತಿಭಟನೆಯನ್ನು ಮುಂದುವರೆಸಿದರೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಲಿದ್ದು, ಅದು ನ್ಯಾಯಾಂಗ ನಿಂದನೆಯಾಗಲಿದೆ ಎಂದು ಎಚ್ಎಎಲ್ ಪ್ರಕಟಣೆಯಲ್ಲಿ ಹೇಳಿದೆ.
2017ರ ವೇತನ ಪಾವತಿ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ಸಂಸ್ಥೆಯ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಆದ್ದರಿಂದ, ಕಾನೂನಿನ ಮೂಲಕ ಮುಷ್ಕರವನ್ನು ತಡೆಯಲು ಎಚ್ಎಎಲ್ ಹೈಕೋರ್ಟ್ಗೆ ಅರ್ಜಿ ಹಾಕಿತ್ತು.
ವೇತನ ಪರಿಷ್ಕರಣೆ ಬಗ್ಗೆ ಎಚ್ಎಎಲ್ ಆಡಳಿತ ಮಂಡಳಿ ಹಾಗೂ ಉದ್ಯೋಗಿಗಳ ನಡುವೆ 11 ಬಾರಿ ನಡೆದಿದ್ದ ಮಾತುಕತೆ ವಿಫಲವಾಗಿತ್ತು. ಆದ್ದರಿಂದ, ನೌಕರರು ಮುಷ್ಕರ ಆರಂಭಿಸಿದ್ದರು. ಈಗ ನ್ಯಾಯಾಲಯ ಮುಷ್ಕರಕ್ಕೆ ತಡೆ ನೀಡಿದೆ.












Click it and Unblock the Notifications