ಚನ್ನಪಟ್ಟಣ ಉಪಚುನಾವಣೆ: ಕೈ ಹಿಡಿಯುತ್ತಾರಾ ಸಿ ಪಿ ಯೋಗೇಶ್ವರ್: ಪರಮೇಶ್ವರ್ ಏನಂದ್ರು?
ಬೆಂಗಳೂರು, ಅಕ್ಟೋಬರ್ 22: ಸಿ.ಪಿ.ಯೋಗೇಶ್ವರ್ ಪಕ್ಷಕ್ಕೆ ಬರುವ ವಿಚಾರ ಮಾಹಿತಿ ನನಗೆ ಇಲ್ಲ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಲು ರಣನೀತಿ ಮಾಡುತ್ತಿದ್ದೇವೆ. ಸಿ.ಪಿ.ಯೋಗೇಶ್ವರ್ ನನಗೆ ಆತ್ಮೀಯ ಸ್ನೇಹಿತ. ಹಿಂದೆ ನಮ್ಮ ಪಕ್ಷದಲ್ಲಿದ್ದಾಗ ಒಳ್ಳೆ ಕೆಲಸಗಳನ್ನು ಮಾಡಿದ್ದಾರೆ. ಅವರು ಪಕ್ಷ ಸೇರ್ಪಡೆ ಆಗುವುದು ಕೆಪಿಸಿಸಿ ಅಧ್ಯಕ್ಷರು ಮತ್ತು ಹೈಕಮಾಂಡ್ಗೆ ಬಿಟ್ಟಿರುವ ವಿಚಾರ ಎಂದು ಗೃಹ ಸಚಿವರಾದ ಪರಮೇಶ್ವರ್ ಹೇಳಿದರು.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಡಿ.ಕೆ.ಸುರೇಶ್ ಅವರಿಗೆ ಸ್ಪರ್ಧಿಸುವಂತೆ ನಾವೆಲ್ಲ ಒತ್ತಾಯಿಸಿದ್ದೇವೆ. ಹೈಕಮಾಂಡ್ ಯಾರನ್ನು ಅಭ್ಯರ್ಥಿ ಮಾಡುತ್ತದೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

ಜಾತಿಗಣತಿ ವರದಿಯಲ್ಲಿ ಏನು ಬಂದಿದೆ ಎಂಬುದು ಜನಸಮುದಾಯಕ್ಕೆ ಗೊತ್ತಾಗಬೇಕು. ಈ ಬಗ್ಗೆ ಚರ್ಚೆಯಾಗದಿದ್ದರೆ, ವರದಿಯನ್ನೇ ಮುಚ್ಚಿಹಾಕಿದರು ಎಂಬ ಆಪಾದನೆಗಳು ಸರ್ಕಾರದ ಮೇಲೆ ಬರುತ್ತವೆ. ಜಾತಿಗಣತಿ ವರದಿಯನ್ನು ಸಚಿವ ಸಂಪುಟದ ಮುಂದೆ ತಂದು, ಸಾಧಕ-ಬಾಧಕಗಳನ್ನು ಚರ್ಚಿಸಲಾಗುವುದು. ತದನಂತರ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ಜಾತಿಗಣತಿ ವರದಿಗೆ 160 ಕೋಟಿ ರೂ. ಖರ್ಚು ಮಾಡಿ, ಜನಸಮುದಾಯದ ಮುಂದೆ ಇಡದೇ ಹೋದರೆ ಹಣ ಖರ್ಚು ಮಾಡಿರುವುದು ಪ್ರಯೋಜನವಾಗುವುದಿಲ್ಲ. ವರದಿಯಲ್ಲಿ ಏನು ಬಂದಿದೆ ಎಂಬುದರ ಕುರಿತಾದರು ಜನರಿಗೆ ಗೊತ್ತಾಗಬೇಕು. ಇಲ್ಲವಾದರೆ ಮುಚ್ಚಿ ಹಾಕಿದರು ಅಂತೆಲ್ಲ ಸರ್ಕಾರದ ಬಗ್ಗೆ ಆಪಾದನೆಗಳು ಬರುತ್ತದೆ ಎಂದು ಹೇಳಿದರು.
ಜಾತಿಗಣತಿ ವರದಿ ಜಾರಿ ಮಾಡುವುದು ಬೇರೆ ವಿಚಾರ. ಅದರ ಮಾಹಿತಿ ಹೊರಗಡೆ ಬರಬೇಕಲ್ಲವೇ? ಜಾರಿ ಮಾಡಲು ಆಗುವ ತೀರ್ಮಾನಗಳು ಬೇರೆಬೇರೆ ರೀತಿಯಲ್ಲಿ ಆನಂತರ ಆಗುತ್ತವೆ. ಯಾರು ಕೂಡ ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದರು
ಪಂಚಮಸಾಲಿ, ಒಳ ಮೀಸಲಾತಿ ಮತ್ತು ಜಾತಿಗಣತಿ ವರದಿ ಕುರಿತು ಪ್ರತಿಕ್ರಿಯಿಸಿ, ಎಲ್ಲವನ್ನು ನಿಭಾಯಿಸುವ ಸಾಮಾರ್ಥ್ಯ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದೆ. ನಾವೆಲ್ಲರು ಸಹ ಜನಸಮುದಾಯದ ವಿಚಾರಧಾರೆಗಳನ್ನು ಯಾವ ರೀತಿ ತೀರ್ಮಾನ ಮಾಡಬೇಕು ಎಂಬುದರ ಕುರಿತು ಚರ್ಚೆ ಮಾಡಿ, ತೀರ್ಮಾನ ಕೈಗೊಳ್ಳುತ್ತೇವೆ ಎಂದರು.
ಮೀಸಲಾತಿ ಶೇ. 50 ಮೀರಿ ಹೋಗಬಾರದು ಎಂಬ ಆದೇಶವಿದೆ. ಕೆಲ ರಾಜ್ಯಗಳಲ್ಲಿ ಶೇ.50ರಷ್ಟು ಮೀರಿ ಹೋಗಿದ್ದಾರೆ. ತಮಿಳುನಾಡಿನವರು ಶೇ. 69 ಮೀಸಲಾತಿಯನ್ನು ಕಾನೂನಾತ್ಮಕವಾಗಿ ಮಾಡಿದ್ದಾರೆ. ಸಂವಿಧಾನದ ಶೆಡ್ಯೂಲ್ಡ್ 9ಕ್ಕೆ ಸೇರಿಸಿದ್ದಾರೆ. ನಮ್ಮ ರಾಜ್ಯದಲ್ಲಿಯೂ ಸಹ ಬೇರೆಬೇರೆ ಸಮುದಾಯಗಳು ಮೀಸಲಾತಿ ಕೇಳುತ್ತಿವೆ. ಅದನ್ನೆಲ್ಲ ಮಾಡಬೇಕಾದರೆ ಶೇ.50ರಷ್ಟು ಮೀರಿ ಹೋಗಬೇಕಾಗುತ್ತದೆ ಎಂದು ಹೇಳಿದರು.
ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದು, ಯಾವುದೇ ದುಡುಕಿನ ನಿರ್ಧಾರ ಇಲ್ಲ ಚಿಹ್ನೆ ಯಾವುದು ಎಂಬುದು ಇಂದು ಸಂಜೆ ನಿರ್ಧಾರವಾಗುತ್ತದೆ. ಗುರುವಾರ ಬೆಳಗ್ಗೆ 11 ಗಂಟೆಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಸಿ.ಪಿ ಯೋಗೇಶ್ವರ್ ಹೇಳಿದ್ದಾರೆ.
ಸಿ ಪಿ.ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಗುಸು ಗುಸು ಕೇಳಿ ಬರುತ್ತಿದೆ. ಯಾರೇ ಆಗಲಿ ಕಾಂಗ್ರೆಸ್ಸಿನ ಸಿದ್ಧಾಂತ ಮತ್ತು ಸಂವಿಧಾನದ ಮೌಲ್ಯಗಳನ್ನು ಒಪ್ಪಿ ಬರುವ ಎಲ್ಲರಿಗೂ ಪಕ್ಷಕ್ಕೆ ಸ್ವಾಗತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಹೇಳಿದ್ದಾರೆ ಎಂದು ತಿಳಿಸಿದರು.












Click it and Unblock the Notifications