ನಿರಂತರ ಮಳೆ: ಮುಂದಿನ ವಾರ ಇನ್ನೂ ಹೆಚ್ಚುತ್ತವೆ ತರಕಾರಿ ದರ
ಬೆಂಗಳೂರು ಆಗಸ್ಟ್ 08: ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮವಾಗಿ ತರಕಾರಿ ಬೆಳೆಗೆ ಹಾನಿ ಉಂಟಾಗಿದೆ. ಇರುವ ತರಕಾರಿ ಗಿಡಗಳ (ಪೈರು) ರಕ್ಷಣೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆ ಕುಂಠಿತಗೊಂಡು ದರ ಏರುಗತಿಯಲ್ಲಿ ಸಾಗುತ್ತಿದೆ. ಜೊತೆಗೆ ಮುಂದೆ ಸಾಲು ಸಾಲು ಹಬ್ಬಗಳು ಎದುರಾಗಲಿವೆ. ಹೀಗಾಗಿ ಇನ್ನೊಂದು ವಾರದಲ್ಲಿ ತರಕಾರಿ ದರ ಏರಿಕೆಯ ಶಾಕ್ ಜನರಿಗೆ ತಟ್ಟಲಿದೆ.
ಈಗಾಗಲೇ ಈರುಳ್ಳಿ, ಟೊಮೇಟೋ, ಕರಿಬೇವು ಸೇರಿದಂತೆ ಕೆಲವೇ ತರಕಾರಿ ಹೊರತು ಪಡಿಸಿದರೆ ಉಳಿದೆಲ್ಲವುಗಳ ದರ ಸಣ್ಣ ಪ್ರಮಾಣದಲ್ಲಿ ಏರಿಕೆ ಕಂಡಿವೆ. ಮಳೆ ಹೀಗೆ ಮುಂದುವರಿದರೂ ಇಲ್ಲವೇ ಇಂದಿನಿಂದ ಸಂಪೂರ್ಣವಾಗಿ ಮಳೆ ಸ್ಥಗಿತಗೊಂಡರು ಸಹ ತರಕಾರಿ ದರಗಳಲ್ಲಿ ಬದಲಾವಣೆ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
"ನಿರಂತರ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿವೆ. ಜಮೀನುಗಳಲ್ಲಿ, ತರಕಾರಿ ಪೈರಿನಲ್ಲಿ ಸಾಕಷ್ಟು ನೀರು ನಿಂತಿವೆ. ಇದರಿಂದ ತರಕಾರಿ ಗಿಡ, ಬಳ್ಳಿಗಳು ನಾಶವಾಗಿವೆ. ಇರುವ ಬೆಳೆಗಳಲ್ಲಿ ನಿರೀಕ್ಷೆಯಷ್ಟು ಉತ್ಪನ್ನವು ಬಾರದ ಸ್ಥಿತಿ ಇದೆ. ಹೀಗಾಗಿ ಮಾರುಕಟ್ಟೆಗಳಲ್ಲಿ ತರಕಾರಿ ದರಗಳಲ್ಲಿ ಹಂತ ಹಂತವಾಗಿ ಬದಲಾವಣೆ ಉಂಟಾಗುತ್ತಿದೆ. ಮುಂದೆ ಗಣೇಶ ಚತುರ್ಥಿ, ಮಹಾನವಮಿ ಸೇರಿದಂತೆ ಹಲವು ಹಬ್ಬಗಳು ಎದುರಾಗಲಿವೆ. ಇದೀಗ ಒಮ್ಮೆ ತರಕಾರಿ ದರ ಏರಿಕೆ ಆದರೆ ಬೇಗ ಇಳಿಕೆ ಆಗುವುದು ಅನುಮಾನ," ಎಂದು ದಾಸನಪುರ ಎಪಿಎಂಪಿ ತರಕಾರಿ ವರ್ತಕ ಗೋವಿಂದಪ್ಪ ಅವರು ಮಾಹಿತಿ ನೀಡಿದರು.
ಹೆಚ್ಚಾಗುತ್ತಿರುವ ತರಕಾರಿಗಳ ಹಾಲಿ ದರ
ಸೋಮವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿ ದರಗಳಲ್ಲಿ ಅಷ್ಟಾಗಿ ಏರಿಕೆ ಆಗಿಲ್ಲ. ಮಾರುಕಟ್ಟೆಗಳಲ್ಲಿ ಪ್ರತಿ ಕೇಜಿ ಈರುಳ್ಳಿ ದರ ಸದ್ಯ 18-25ರೂ.ವರೆಗೆ, ಟೊಮೆಟೊ 10-12ರೂ. ಇದೆ. ಇವುಗಳ ಹೊರತು ಇನ್ನಿತರ ತರಕಾರಿ ಪದಾರ್ಥಗಳು ದರಗಳು ಹೆಚ್ಚಾಗಿವೆ. ಕೇಜಿ ಸಣ್ಣ ಈರುಳ್ಳಿ 45-50ರೂ. ಆಲೂಗಡ್ಡೆ ಕೇಜಿ 25-35ರೂ., ಬದನೆಕಾಯಿ 60-80ರೂ, ಚವಳೆ 60ರೂ.ಗೆ ಮಾರಾಟವಾಗಿದೆ. ಇನ್ನು ಹಸಿ ಮೆಣಸಿನಕಾಯಿ 50-60ರೂ., ನಾಟಿ ಕ್ಯಾಪ್ಸಿಕಂ, 50-60 ಬಿನ್ಸ, 80-100, ಕ್ಯಾರೇಟ್ 70-85ರೂ.ವರೆಗೆ ಮಾರುಕಟ್ಟೆಗಳಲ್ಲಿ ಬಿಕರಿಯಾಗಿದೆ.
ಸೊಪ್ಪಿನ ದರಗಳಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಗಳು ಕಂಡು ಬಾರದಿದ್ದರೂ ಒಂದು ಕಟ್ಟು ಕೊತ್ತಂಬರಿಗೆ 20-30ರೂ., ಪುದಿನ 12-15ರೂ., ಮೆಂತ್ಯಸೊಪ್ಪು 30ಮೆಂತ್ಯ ರೂ. ಇದೆ. ಅದೇ ರೀತಿ ಕೆರಿಬೇವು ಕೇಜಿಗೆ 30-40ರೂ.ವರೆಗೆ ಹಣ ನೀಡಿ ಜನ ಖರೀದಿಸಿದ್ದಾರೆ.
ಪೂರೈಕೆ ಕೊರತೆ ಉಂಟಾಗುವ ಸಾಧ್ಯತೆ
ಬೆಂಗಳೂರಿನ ಕೆ.ಆರ್.ಮಾರುಕಟ್ಟೆ, ಗಾಂಧಿಬಜಾರ್, ಕೆ.ಆರ್ಪುರಂ, ಕಲಾಸಿಪಾಳ್ಯ ಸೇರಿದಂತೆ ವಿವಿಧ ಮಾರುಕಟ್ಟೆಗಳಿಗೆ ನಿತ್ಯ ಚಿಕ್ಕಬಳ್ಳಾಪುರ, ಚಿಂತಾಮಣಿ, ಕೋಲಾರ, ದೊಡ್ಡಬಳ್ಳಾಪುರ, ರಾಮನಗರ, ತುಮಕೂರು, ಮೈಸೂರು, ಹಾಸನ ಸೇರಿದಂತೆ ಬೇರೆ ರಾಜ್ಯಗಳಿಂದಲೂ ಲೋಡ್ ಗಟ್ಟಲೆ ತರಕಾರಿ ಬರುತ್ತದೆ. ಸದ್ಯ ಮಾರುಕಟ್ಟೆಗಳಿಗೆ ಪೂರೈಕೆ ಆಗುತ್ತಿರುವ ತರಕಾರಿ ಪ್ರಮಾಣ ಮಳೆಯಿಂದಾಗಿ ಇನ್ನೊಂದು ವಾರದಲ್ಲಿ ಕಡಿಮೆಯಾಗುವ ಸಾಧ್ಯತೆ ಇದೆ. ನಂತರ ಆಗ ತರಕಾರಿ ದರ ದಿಢೀರ್ ಏರಿಕೆ ಕಂಡು ಬರಲಿದೆ ಎಂದು ಕಲಾಸಿಪಾಳ್ಯ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಜನರಿಗೆ ದರ ಏರಿಕೆ ಬಿಸಿ
ನಿತಂತರ ಮಳೆಯಿಂದಾಗಿ ಜಮೀನಿನಲ್ಲಿ ಭೂಮಿಯಲ್ಲಿ ತೇವ ಹೆಚ್ಚಾಗಿದೆ. ಇದು ಭೂಮಿಯ ಮೇಲ್ಪದರದಲ್ಲಿನ ಫಲವತ್ತತೆ ಮೇಲೆ ಹೆಚ್ಚು ಪರಿಣಾಮ ಭೀರುತ್ತದೆ. ಅಲ್ಲದೇ ಈಗಿರುವ ಪರಿಸ್ಥಿತಿಯಲ್ಲಿ ಹೊಸದಾಗಿ ತರಕಾರಿ ಬೆಳೆದರು ಇಳುವರಿ ಬರಲು ಕಡಿಮೆ ಎಂದರೂ ಎರಡು ತಿಂಗಳೂ ಬೇಕು. ಅಲ್ಲಿಯವರೆಗೆ ಜನರಿಗೆ ಅಗತ್ಯವಸ್ತುಗಳ ದರ ಏರಿಕೆ ಬಿಸಿ ನಡುವೆ ತರಕಾರಿ ದರ ಏರಿಕೆ ಬಿಸಿ ತಟ್ಟಲಿದೆ.
100ರೂ.ಗಡಿ ದಾಟುವ ನಿರೀಕ್ಷೆ
ಮುಂದಿನ ವಾರದಿಂದ ಬದನೆ, ಬೀನ್ಸ, ಕ್ಯಾರೇಟ್, ಹಸಿ ಮೆಣಸಿನಕಾಯಿ ಸೇರಿದಂತೆ ಒಂದಷ್ಟು ತರಕಾರಿಗಳ ದರ 100ರೂ. ಗಡಿ ದಾಟುವ ಸಾಧ್ಯತೆ ಇದೆ. ಉಳಿದಂತೆ ಕೈಗೆಟಕುತ್ತಿರುವ ಈರುಳ್ಳಿ, ಆಲೂಗಡ್ಡೆ, ಸೌತೆಕಾಯಿ, ಚವಳೆ ಪದಾರ್ಥಗಳ ಬೆಲೆ ತುಸು ಏರಿಕೆ ಆಗಲಿದೆ. ಜತೆಗೆ ಕೊತ್ತಂಬರಿ, ಪುದಿನ, ಮೆಂತ್ಯ, ಪಾಲಕ್ ಸೊಪ್ಪುಗಳು ಹಾಲಿ ದರಕ್ಕಿಂತಲೂ ಶೇ.50ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ. ಈ ದುಪ್ಪಟ್ಟು ದರ ಸುಮಾರು ಒಂದೂವರೆಯಿಂದ ಎರಡು ತಿಂಗಳು ಚಾಲ್ತಿಯಲ್ಲಿರಬಹುದು ಎಂದು ಅವರು ತಿಳಿಸಿದ್ದಾರೆ.
Recommended Video