ಕರ್ನಾಟಕ; ಭಾರಿ ಮಳೆ ಮುನ್ಸೂಚನೆ, ಜೂ. 5ಕ್ಕೆ ಮುಂಗಾರು ಆಗಮನ
ಬೆಂಗಳೂರು, ಜೂನ್ 02 : ಕೇರಳಕ್ಕೆ ಪ್ರವೇಶಿಸಿರುವ ನೈಋತ್ಯ ಮುಂಗಾರು ಜೂನ್ 5ರಂದು ಕರ್ನಾಟಕಕ್ಕೆ ಆಗಮಿಸುವ ನಿರೀಕ್ಷೆ ಇದೆ. ಮುಂಗಾರು ಆಗಮನಕ್ಕೂ ಮೊದಲು ರಾಜ್ಯದಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಜೂನ್ನಿಂದ ಸೆಪ್ಟೆಂಬರ್ ತನಕ ನೈಋತ್ಯ ಮುಂಗಾರು ಇರಲಿದೆ. ಕೇರಳಕ್ಕೆ ಸೋಮವಾರ ಮುಂಗಾರು ಆಗಮಿಸುತ್ತಿದ್ದಂತೆ ಮಳೆ ಆರಂಭವಾಗಿದೆ. ಈ ಬಾರಿಯ ಮುಂಗಾರು ಉತ್ತಮವಾಗಿರಲಿದ್ದು, ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕರ್ನಾಟಕದಲ್ಲಿ ಸೋಮವಾರವೂ ಉತ್ತಮ ಮಳೆಯಾಗಿದೆ. ಉಡುಪಿಯ ಕೋಟಾದಲ್ಲಿ 10, ಕಾರವಾರದಲ್ಲಿ 7, ಬೆಳಗಾವಿ ಮತ್ತು ಪಾವಗಡದಲ್ಲಿ 6, ಹೊನ್ನಾವರ ಮತ್ತು ನರದುಂದದಲ್ಲಿ 5, ನಿಪ್ಪಾಣಿ, ಕಲಬುರಗಿ, ತೀರ್ಥಹಳ್ಳಿಯಲ್ಲಿ 2 ಸೆಂ. ಮೀ. ಮಳೆಯಾಗಿದೆ.
ನೈಋತ್ಯ ಮುಂಗಾರು ಜೂನ್ 5ರಂದು ಕರ್ನಾಟಕ ಪ್ರವೇಶಿಸುವ ಸಾಧ್ಯತೆ ಇದೆ. ಮುಂಗಾರು ಮಳೆ ಉತ್ತಮವಾಗಿ ಸುರಿದರೆ ಕೃಷಿ ಮತ್ತು ಆರ್ಥಿಕ ಚಟುವಟಿಕೆಗಳು ಚುರುಕಾಗಲಿವೆ. ದೇಶದ ಶೇ 75ರಷ್ಟು ಮಳೆ ಮುಂಗಾರು ಮಾರುತಗಳು ಬಂದ ಸಮಯದಲ್ಲಿಯೇ ಆಗಲಿದೆ.

ವಾಯುಭಾರ ಕುಸಿತ
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಜೂನ್ 2 ಮತ್ತು 3ರಂದು ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಕರಾವಳಿ ಭಾಗದಲ್ಲಿ 40 ರಿಂದ 60 ಕಿ. ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಯಾವ ಜಿಲ್ಲೆಯಲ್ಲಿ ಮಳೆ
ವಾಯುಭಾರ ಕುಸಿತದ ಪರಿಣಾಮ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದ್ದು ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಯೆಲ್ಲೂ ಅಲರ್ಟ್
ಬೆಳಗಾವಿ, ಧಾರವಾಡ, ಹಾವೇರಿ, ಕಲಬುರಗಿ, ರಾಯಚೂರು ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಮಂಗಳವಾರ ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದ್ದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ.

ಮುಂಗಾರು ಮಳೆಯ ಲೆಕ್ಕಾಚಾರ
ನೈಋತ್ಯ ಮುಂಗಾರು ಮಳೆಯ ಲೆಕ್ಕಾಚಾರ ಹಾಕಿರುವ ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್, "ವಾಡಿಕೆಯಷ್ಟು ಮಳೆಯಾಗಲಿದೆ ಎಂದು ಶೇ 41ರಷ್ಟು, ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಶೇ 25ರಷ್ಟು, ವಾಡಿಕೆಗಿಂತ ಭಾರಿ ಮಳೆಯಾಗಲಿದೆ ಎಂದು ಶೇ 14ರಷ್ಟು ಅಭಿಪ್ರಾಯ ವ್ಯಕ್ತವಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications