ದೇವೇಗೌಡರ ಅಡ್ರೆಸ್ ಕೇಳಿದ ಶ್ರೀರಾಮುಲುಗೆ ರೇವಣ್ಣ ಟಾಂಗ್!
ಬೆಂಗಳೂರು, ಅಕ್ಟೋಬರ್ 18 : 'ದೇವೇಗೌಡರ ಅಡ್ರೆಸ್ ಪದ್ಮನಾಭನಗರದಲ್ಲಿದೆ. ಮೊದಲು ಶ್ರೀರಾಮುಲು ಅವರು ತಮ್ಮ ಅಡ್ರೆಸ್ ಎಲ್ಲಿದೆ?' ಎಂದು ಹುಡುಕಿಕೊಳ್ಳಲಿ' ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ನವೆಂಬರ್ 3ರಂದು ನಡೆಯುವ ಬಳ್ಳಾರಿ ಉಪ ಚುನಾವಣೆ ವಿವಿಧ ಪಕ್ಷಗಳ ನಾಯಕರ ನಡುವಿನ ವಾಕ್ ಸಮರಕ್ಕೆ ಕಾರಣವಾಗಿದೆ. ಅದರಲ್ಲೂ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಅವರು, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ.
'ಬಳ್ಳಾರಿಗೆ ಬಂದರೆ ದೇವೇಗೌಡ ಅವರು ಅಡ್ರೆಸ್ ಇಲ್ಲದಂತಾಗುತ್ತಾರೆ' ಎಂದು ಬಿ.ಶ್ರೀರಾಮುಲು ಅವರು ಹೇಳಿದ್ದರು. ಸಚಿವ ಮತ್ತು ಎಚ್.ಡಿ.ದೇವೇಗೌಡ ಪುತ್ರ ಎಚ್.ಡಿ.ರೇವಣ್ಣ ಅವರು ಈ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ನವೆಂಬರ್ 3ರಂದು ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟವಾಗಲಿದೆ. ಬಿಜೆಪಿಯಿಂದ ಜೆ.ಶಾಂತ ಮತ್ತು ಕಾಂಗ್ರೆಸ್ನಿಂದ ವಿ.ಎಸ್.ಉಗ್ರಪ್ಪ ಅವರು ಅಭ್ಯರ್ಥಿಗಳಾಗಿದ್ದಾರೆ.

ಮಾತನಾಡುವ ನೈತಿಕತೆ ಇಲ್ಲ
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಎಚ್.ಡಿ.ರೇವಣ್ಣ ಅವರು, 'ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಶ್ರೀರಾಮುಲು ಅವರಿಗೆ ಇಲ್ಲ. ನಿನ್ನೆ ಮೊನ್ನೆ ರಾಜಕೀಯಕ್ಕೆ ಬಂದವರಿಗೆ ದೇವೇಗೌಡರ ಬಗ್ಗೆ ಏನು ಗೊತ್ತಿದೆ' ಎಂದು ಪ್ರಶ್ನೆ ಮಾಡಿದರು.

ಅಡ್ರೆಸ್ ಹುಡುಕಿಕೊಳ್ಳಲಿ
'ದೇವೇಗೌಡರ ಅಡ್ರೆಸ್ ಪದ್ಮನಾಭನಗರದಲ್ಲಿದೆ. ಅಡ್ರೆಸ್ ಸರಿಯಾಗಿಯೇ ಇದೆ. ಮೊದಲು ಶ್ರೀರಾಮುಲು ಅವರು ತಮ್ಮ ಅಡ್ರೆಸ್ ಎಲ್ಲಿದೆ? ಎಂದು ಹುಡುಕಿಕೊಳ್ಳಲಿ. ನಾಯಕ ಸಮುದಾಯಕ್ಕೆ ಕೊಡುಗೆ ನೀಡಿದವರು ದೇವೇಗೌಡರು. ಅವರ ಬಗ್ಗೆ ಇನ್ನೂ ಶ್ರೀರಾಮುಲು ಅವರಿಗೆ ತಿಳಿದಿಲ್ಲ' ಎಂದು ಲೇವಡಿ ಮಾಡಿದರು.

ಸುಧಾರಿಸಿಕೊಳ್ಳುತ್ತಿದ್ದಾರೆ
'ದೇವೇಗೌಡರ ಬಗ್ಗೆ ಮಾತನಾಡುವ ನೈತಿಕತೆ ಬಿ.ಶ್ರೀರಾಮುಲು ಅವರಿಗೆ ಇಲ್ಲ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಎಲ್ಲವನ್ನು ಅನುಭವಿಸಿ ಈಗ ಸುಧಾರಿಸಿಕೊಳ್ಳುತ್ತಿದ್ದಾರೆ. ಪಾಪ ಅವರ ಬಗ್ಗೆ ನಾನೇಕೆ ಮಾತನಾಡಲಿ?' ಎಂದು ಎಚ್.ಡಿ.ರೇವಣ್ಣ ಪ್ರಶ್ನಿಸಿದರು.

ಯಡಿಯೂರಪ್ಪ ಜೇಬಲ್ಲಿ ಇದ್ದಾರಾ?
ಬಳ್ಳಾರಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂಬ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಎಚ್.ಡಿ.ರೇವಣ್ಣ ಅವರು, 'ಯಡಿಯೂರಪ್ಪ ಅವರಿಗೆ ಅರಳು ಮರಳು. ಹೀಗಾಗಿ ಅವರು ಏನೇನು ಮಾತನಾಡುತ್ತಾರೆ. ಒಂದು ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮತದಾರರು ಇದ್ದಾರೆ. ಅವರೆಲ್ಲರೂ ಯಡಿಯೂರಪ್ಪ ಅವರು ಜೇಬಿನಲ್ಲಿದ್ದಾರಾ?' ಎಂದು ರೇವಣ್ಣ ಪ್ರಶ್ನೆ ಮಾಡಿದರು.












Click it and Unblock the Notifications