ನನ್ನಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ; 2 ಗಂಟೆ ಸಮಯ ಕೊಡಿ : ರೇವಣ್ಣ
Recommended Video
ಬೆಂಗಳೂರು, ಜುಲೈ 19 : "ಮೈತ್ರಿ ಸರ್ಕಾರ ರಚನೆಯಾದ ಬಳಿಕ ನನಗೆ ಸಿಕ್ಕಷ್ಟು ಪ್ರಚಾರ ಯಾರಿಗೂ ಸಿಕ್ಕಿಲ್ಲ. ಆದ್ದರಿಂದ, ಸದನದಲ್ಲಿ ನನಗೆ ಮಾತನಾಡಲು ಕನಿಷ್ಠ 2 ಗಂಟೆ ಸಮಯಕೊಡಬೇಕು" ಎಂದು ಲೋಕೋಪಯೋಗಿ ಸಚಿವ ಎಚ್. ಡಿ. ರೇವಣ್ಣ ಮನವಿ ಮಾಡಿದರು.
ವಿಶ್ವಾಸಮತಯಾಚನೆ ಚರ್ಚೆಯ ವೇಳೆ ಶುಕ್ರವಾರ ಸಚಿವ ಎಚ್. ಡಿ. ರೇವಣ್ಣ ಮಾಡಿದ ಮನವಿಗೆ ಸ್ಪೀಕರ್ ರಮೇಶ್ ಕುಮಾರ್ ಉತ್ತರ ನೀಡಿದರು. "ಸದನದ ಗಮನಕ್ಕೆ ಈ ವಿಚಾರ ತನ್ನಿ ನನಗೆ ಸಮಯಕೊಡಿ" ಎಂದು ರೇವಣ್ಣ ಹೇಳಿದರು.
"ನಮ್ಮ ಜ್ಯೋತಿಷಿಗಳನ್ನು ಕೇಳಿ ಸಮಯ ನಿಗದಿ ಮಾಡುತ್ತೇನೆ. ಅಲ್ಲಿಯ ತನಕ ಶಿವಲಿಂಗೇಗೌಡರು ಮಾತನಾಡಲಿ" ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳುವ ಮೂಲಕ ರೇವಣ್ಣ ಕಾಲೆಳೆಯುವ ಕೆಲಸ ಮಾಡಿದರು.

ಶುಕ್ರವಾರ ಎಚ್. ಡಿ. ದೇವೇಗೌಡ ಕುಟುಂಬದ ದೈವ ಭಕ್ತಿ ಬಗ್ಗೆಯೇ ಹಲವು ಬಾರಿ ವಿಷಯ ಪ್ರಸ್ತಾಪವಾಯಿತು. ಬೆಳಗ್ಗೆ ಎಚ್. ಡಿ. ಕುಮಾರಸ್ವಾಮಿ ಅವರು ಮಾತನಾಡುವಾಗ, "ಇದು ದೇವರ ಕೃಪೆಯಿಂದ ಬಂದ ಸರ್ಕಾರ" ಎಂದು ಹೇಳಿದರು.
ರೇವಣ್ಣ ಲಿಂಬೆ ಹಣ್ಣಿನ ಕಥೆ : ಸಚಿವ ರೇವಣ್ಣ ಲಿಂಬೆ ಹಣ್ಣು ಇಟ್ಟುಕೊಂಡು ತಿರುಗಾಡುವುದನ್ನು ಟೀಕಿಸುವ ನಾಯಕರ ಬಗ್ಗೆ ಮಾತನಾಡಿದ ಎಚ್. ಡಿ. ಕುಮಾರಸ್ವಾಮಿ, 'ರೇವಣ್ಣ ಅವರು ಬೆಳಗ್ಗೆ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಅರ್ಚಕರು ಲಿಂಬೆ ಹಣ್ಣು ಅಥವ ಏಲಕ್ಕಿ ಹಾರ ನೀಡುತ್ತಾರೆ" ಎಂದರು.
"ಲಿಂಬೆ ಹಣ್ಣು ಹಿಡಿದು ರೇವಣ್ಣ ಮುಂದಿನ ಕೆಲಸಕ್ಕೆ ಹೋಗುತ್ತಾರೆ. ಆದ್ದರಿಂದ, ಅವರ ಕೈಯಲ್ಲಿ ಸದಾ ಲಿಂಬೆ ಹಣ್ಣು ಇರುತ್ತದೆ. ನಮ್ಮದು ಮಾಟ-ಮಂತ್ರ ಮಾಡುವ ಕುಟುಂಬವಲ್ಲ. ಇದನ್ನೇ ಟೀಕೆ ಮಾಡಿದರೆ ಹೇಗೆ?" ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದರು.
"ರಾಮನ ಬಗ್ಗೆ ಮಾತನಾಡುವ ನೀವು ಲಿಂಬೆ ಹಣ್ಣು ಹಿಡಿದುಕೊಂಡು ಹೋಗುವ ಕುರಿತು ಟೀಕೆ ಮಾಡುತ್ತೀರಿ. ಮಾಟ ಮಂತ್ರ ಮಾಡಿ ಸರ್ಕಾರ ಉಳಿಸಿಕೊಳ್ಳುವುದಾದರೆ ನಾವು ಜನರ ಬಳಿ ಹೋಗುವ ಸಂದರ್ಭವೇ ಬರುತ್ತಿರಲಿಲ್ಲ" ಎಂದು ಕುಮಾರಸ್ವಾಮಿ ಹೇಳಿದರು.












Click it and Unblock the Notifications