'ಜಮೀರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ'
ಬೆಂಗಳೂರು, ಮೇ 30 : 'ಜಮೀರ್ ಅಹಮದ್ ಖಾನ್ ಅವರ ಬಣ್ಣ ಈಗ ಬಯಲಾಗಿದೆ. ಜೆಡಿಎಸ್ ಪಕ್ಷದ ರಾಜ್ಯಸಭೆ ಅಭ್ಯರ್ಥಿಯನ್ನು ಅವರು ಏಕೆ ಬೆಂಬಲಿಸುತ್ತಿಲ್ಲ?. ಜಮೀರ್ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ' ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಎಚ್.ಡಿ.ಕುಮಾರಸ್ವಾಮಿ ಅವರು, 'ಪಕ್ಷಕ್ಕಿಂತ ವ್ಯಕ್ತಿ ದೊಡ್ಡವರಲ್ಲ. ಜಮೀರ್ ಅವರಿಂದ ಪಕ್ಷಕ್ಕೆ ಸಾಕಷ್ಟು ಡ್ಯಾಮೇಜ್ ಆಗುತ್ತಿದೆ. ಶಿಸ್ತು ಕ್ರಮ ಕೈಗೊಳ್ಳುವ ದಿನ ಹತ್ತಿರ ಬಂದಿದೆ' ಎಂದು ಎಚ್ಚರಿಕೆ ನೀಡಿದರು. [ಕಾಂಗ್ರೆಸ್ ಬೆಂಬಲಿಸುವ ಜಮೀರ್ ತಂತ್ರ ಅತಂತ್ರ!]

'ಹೆಬ್ಬಾಳ ಕ್ಷೇತ್ರದ ಉಪ ಚುನಾವಣೆ ವೇಳೆ ಪಕ್ಷಕ್ಕಿಂತ ಜಾತಿ, ಧರ್ಮ ದೊಡ್ಡದು ಎಂದು ಜಮೀರ್ ಅಹಮದ್ ಹೇಳಿದ್ದರು. ಈಗ ರಾಜ್ಯಸಭೆ ಚುನಾವಣೆಯಲ್ಲಿ ಅವರು ತಮ್ಮ ಧರ್ಮದ ಅಭ್ಯರ್ಥಿಯನ್ನು ಏಕೆ ಬೆಂಬಲಿಸುತ್ತಿಲ್ಲ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. [ಅಚ್ಚರಿಯಾದರೂ ಸತ್ಯ, ಜೆಡಿಎಸ್ ಅಭ್ಯರ್ಥಿಗೆ ಖೇಣಿ ಬೆಂಬಲ!]
ಶಾಸಕರು ನಮ್ಮ ಜೊತೆ ಇದ್ದಾರೆ : 'ರಾಜ್ಯಸಭೆ ಚುನಾವಣೆಯಲ್ಲಿ ಐವರು ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತೇವೆ' ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವುದು ಅವರೊಬ್ಬರೇ. ಉಳಿದ ನಾಲ್ವರು ಶಾಸಕರು ನಮ್ಮ ಜೊತೆ ಇದ್ದಾರೆ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಇಷ್ಟಕ್ಕೂ ವಿವಾದವೇನು? : ಮೇ 26ರಂದು ಬೆಂಗಳೂರಿನಲ್ಲಿ ಮಾತನಾಡಿದ್ದ ಜಮೀರ್ ಅಹಮದ್ ಖಾನ್ ಅವರು, 'ಜೆಡಿಎಸ್ನ ಐವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ರಾಮಮೂರ್ತಿ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಬೆಂಬಲ ನೀಡುತ್ತೇವೆ. ಈ ಕುರಿತು ನಾವು ಈಗಾಗಲೇ ತೀರ್ಮಾನ ಕೈಗೊಂಡಿದ್ದೇವೆ' ಎಂದು ಹೇಳಿದ್ದರು. [ರಾಜ್ಯಸಭೆಗೆ ಕರ್ನಾಟಕದಿಂದ ವೆಂಕಯ್ಯ ಬದಲಿಗೆ ನಿರ್ಮಲಾ]
ಮೇ 28ರಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇದರಿಂದಾಗಿ ಎಚ್.ಡಿ.ಕುಮಾರಸ್ವಾಮಿ ಅವರು ಜಮೀರ್ ಅಹಮದ್ ಖಾನ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಜಮೀರ್ ಹೇಳುವ ಪ್ರಕಾರ ಕಾಂಗ್ರೆಸ್ ಬೆಂಬಲಿಸುವವರು
* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)
* ಚೆಲುವರಾಯಸ್ವಾಮಿ (ನಾಗಮಂಗಲ)
* ಎಚ್.ಸಿ.ಬಾಲಕೃಷ್ಣ (ಮಾಗಡಿ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)
ಸಣ್ಣಪುಟ್ಟ ಭಿನ್ನಾಭಿಪ್ರಾಯವಿದೆ : ಜಮೀರ್ ಅಹಮದ್ ಖಾನ್ ಅವರು ಹೇಳುವ ಪ್ರಕಾರ ಕುಮಾರಸ್ವಾಮಿ ಜೊತೆ ಅವರಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯವಿದೆ. '2006ರಲ್ಲಿ ಇದ್ದಂತೆ ಕುಮಾರಸ್ವಾಮಿ ಅವರು ಬದಲಾದರೆ 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ' ಎಂದು ಜಮೀರ್ ಕೆಲವು ದಿನಗಳ ಹಿಂದೆ ಹೇಳಿದ್ದರು.












Click it and Unblock the Notifications