ಪಿಎಫ್ಐನ ಐವರಿಗೆ ಡಿಫಾಲ್ಟ್ ಜಾಮೀನು ತಿರಸ್ಕಾರ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು, ಏಪ್ರಿಲ್ 26; ಕಾನೂನು ಬಾಹಿರ ಚಟುವಟಿಕೆ ನಡೆಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿರುವ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಐವರು ಸದಸ್ಯರಿಗೆ ಸದ್ಯಕ್ಕೆ ಜಾಮೀನು ಸಿಗುವ ಸಾಧ್ಯತೆಗಳಿಲ್ಲ. ಏಕೆಂದರೆ ಡಿಫಾಲ್ಟ್ ಜಾಮೀನು ಮನವಿ ತಿರಸ್ಕರಿಸಿ ನ್ಯಾಯಾಂಗ ಬಂಧನದ ಅವಧಿ ವಿಸ್ತರಿಸಿದ್ದ ಬೆಂಗಳೂರಿನ 46ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ (ರಾಷ್ಟ್ರೀಯ ತನಿಖಾ ದಳ-ಎನ್ಐಎ ವಿಶೇಷ ನ್ಯಾಯಾಲಯ) ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದ ಆದೇಶ ರದ್ದು ಕೋರಿ ಮೊಹಮ್ಮದ್ ಬಿಲಾಲ್ ಸೇರಿ ನಿಷೇಧಿತ ಪಿಎಫ್ಐ ಸಂಘಟನೆಯ ಐವರು ಸದಸ್ಯರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಜಾಗೊಳಿಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ವಿಜಯಕುಮಾರ್ ಎ. ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಅಲ್ಲದೆ, ಆರೋಪಿಗಳ ಡಿಫಾಲ್ಟ್ ಜಾಮೀನು ಅರ್ಜಿ ಮತ್ತು ರಿಮ್ಯಾಂಡ್ ಅವಧಿ ವಿಸ್ತರಣೆ ಕೋರಿದ ಅರ್ಜಿಗಳನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಹೊಂದಿದೆ ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿದಾರರ ಪರ ವಕೀಲರು, ಹಾಲಿ ಪ್ರಕರಣವನ್ನು ರಾಜ್ಯ ಪೊಲೀಸರು ತನಿಖೆ ನಡೆಸಿದ್ದಾರೆ. ಪ್ರಕರಣದ ವಿಚಾರಣೆಗಾಗಿ ಎನ್ಐಎ ಕಾಯ್ದೆ ಸೆಕ್ಷನ್ 22(1)ರ ಅಡಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವ ಕುರಿತು ಅಧಿಸೂಚನೆ ಹೊರಡಿಸಲಾಗಿಲ್ಲ. ಎನ್ಐಎ ಕಾಯ್ದೆ ಸೆಕ್ಷನ್ 22(3)ರ ಅಡಿ ಮಂಗಳೂರಿನ ಸತ್ರ ನ್ಯಾಯಾಲಯ ಮಾತ್ರ ಪ್ರಕರಣದ ವಿಚಾರಣೆ ನಡೆಸುವ ವ್ಯಾಪ್ತಿ ಹೊಂದಿದೆ. ರಿಮ್ಯಾಂಡ್ ಅವಧಿ ವಿಸ್ತರಣೆ ಮತ್ತು ಡಿಫಾಲ್ಟ್ ಅರ್ಜಿಯನ್ನು ಮಂಗಳೂರು ನ್ಯಾಯಾಲಯ ಪರಿಗಣಿಸಬೇಕು. ಹಾಗಾಗಿ, ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದ ಆದೇಶವು ಕಾನೂನು ಬಾಹಿರವಾಗಿದೆ ಎಂದು ವಾದಿಸಿದ್ದರು.
ಆ ವಾದ ಒಪ್ಪದೇ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಎನ್ಐಎ ಕಾಯ್ದೆ ಸೆಕ್ಷನ್ 22(1)ರ ಅಡಿ ರಾಜ್ಯ ಸರ್ಕಾರವು ಒಂದು ಅಥವಾ ಹೆಚ್ಚಿನ ವಿಶೇಷ ನ್ಯಾಯಾಲಯ ಸ್ಥಾಪಿಸಬಹುದಾಗಿದೆ. ಬೆಂಗಳೂರಿನ 46ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಎನ್ಐಎ ವಿಶೇಷ ಕೋರ್ಟ್ ಆಗಿ ಕಾರ್ಯ ನಿರ್ವಹಿಸಲಿದೆ ಎಂದು ರಾಜ್ಯ ಸರ್ಕಾರವು 2012ರ ಜು.19ರಂದು ಆದೇಶ ಮಾಡಿದೆ. ಹಾಗಾಗಿ, ಅರ್ಜಿದಾರರ ಡಿಫಾಲ್ಟ್ ಜಾಮೀನು ಮತ್ತು ರಿಮ್ಯಾಂಡ್ ವಿಸ್ತರಣೆಗೆ ಕೋರಿದ ಅರ್ಜಿಯನ್ನು ವಿಚಾರಣೆ ನಡೆಸುವ ಅಧಿಕಾರ ವ್ಯಾಪ್ತಿ ಆ ಎನ್ಐಎ ವಿಶೇಷ ನ್ಯಾಯಾಲಯ ಹೊಂದಿದ್ದು, ಅದರ ಆದೇಶ ಸೂಕ್ತವಾಗಿದೆ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ: ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪ ಸಂಬಂಧ ಅರ್ಜಿದಾರರಾದ ಮೊಹಮ್ಮದ್ ಬಿಲಾಲ್, ಮೊಹಮ್ಮದ್ ರಫೀಕ್, ಅಬ್ಬಾಸ್ ಕೀನ್ಯಾ, ಅಕ್ಬರ್ ಸಿದ್ದಿಕಿ ಮತ್ತು ಮೊಹಮ್ಮದ್ ರಫೀಕ್ ಅವರನ್ನು 2022ರ ಅ.15ರಂದು ಮಂಗಳೂರಿನ ಪಂಣಬೂರು ಪೊಲೀಸ್ ಠಾಣೆ ಪೊಲೀಸರು ಬಂಧಿಸಿ ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಹಾಜರುಪಡಿಸಿದ್ದರು. ನ್ಯಾಯಾಲಯ ಅರ್ಜಿದಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಅವರ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯ ವಿವಿಧ ಅಪರಾಧ ಕೃತ್ಯಗಳ ಸಂಬಂಧ ಪ್ರಕರಣ ದಾಖಲಿಸಲಾಗಿತ್ತು. ನಂತರ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಪ್ರಕರಣವನ್ನು 2022ರ ಡಿ.28ರಂದು ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.
2023ರ ಜ.9ರಂದು ವಿಶೇಷ ನ್ಯಾಯಾಲಯವು ಅರ್ಜಿದಾರರ ರಿಮ್ಯಾಂಡ್ ಅವಧಿಯನ್ನು 90ರಿಂದ 180 ದಿನಗಳಿಗೆ ವಿಸ್ತರಿಸಿತ್ತು. 90 ದಿನಗಳಲ್ಲಿ ತನಿಖಾಧಿಕಾರಿಗಳು ತನಿಖೆಯ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸದ ಹಿನ್ನೆಲೆಯಲ್ಲಿ ಡಿಫಾಲ್ಟ್ ಜಾಮೀನು ಕೋರಿ ಅರ್ಜಿದಾರ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ಜ.17ರಂದು ವಿಶೇಷ ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಜ.25ರಂದು ಆರೋಪಿಗಳು ಹೈಕೋರ್ಟ್ ಕದ ತಟ್ಟಿದ್ದರು. ಪ್ರಕರಣದ ಕುರಿತು ತನಿಖಾಧಿಕಾರಿಗಳು 2023ರ ಏ.10ರಂದು ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ಕುರಿತು ವಿಶೇಷ ನ್ಯಾಯಾಲಯವು ಏ.17ರಂದು ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು.












Click it and Unblock the Notifications