ದ್ರಾಕ್ಷಿ ಕೃಷಿ: ಎಸ್ಸಿ, ಎಸ್ಟಿ ಬೆಳೆಗಾರರಿಗೆ ಅತ್ಯಧಿಕ ಸಹಾಯಧನ
ನವದೆಹಲಿ, ಆಗಸ್ಟ್ 06: ವಿಪರೀತ ಮಳೆ ಇಲ್ಲವೇ ಮಳೆ ಕೊರತೆಯಂತಹ ಪ್ರಾಕೃತಿಕ ಹಾಗೂ ಇನ್ನಿತರ ಕಾರಣಗಳಿಂದ ಅಪಾರವಾಗಿ ನಷ್ಟ ಎದುರಿಸುತ್ತಿರುವ ದ್ರಾಕ್ಷಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ಏನೆಲ್ಲ ನೆರವು ನೀಡುತ್ತದೆ, ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಕೈಗೊಂಡ ಕ್ರಮಗಳೇನು ಎಂಬುದರ ಕುರಿತು ಕರ್ನಾಟಕದ ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಸಂಸತ್ನಲ್ಲಿ ಮಾಹಿತಿ ಕೇಳುವ ಮೂಲಕ ಸದನದ ಗಮನ ಸೆಳೆದಿದ್ದಾರೆ.
ಚಿಕ್ಕಬಳ್ಳಾಪುರ ಸಂಸದ ಡಾ.ಕೆ.ಸುಧಾಕರ್ ಅವರು ಲೋಕಸಭೆಯಲ್ಲಿ ದ್ರಾಕ್ಷಿ ಬೆಳೆಗಾರರ ಸಮಸ್ಯೆಗಳನ್ನು ಸದನದ ಗಮನಕ್ಕೆ ತಂದರು. ಅವರು ಕೇಳಿದ ಪ್ರಶ್ನೆಗಳಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಲಿಖಿತವಾಗಿ ಉತ್ತರಿಸಿತು. ಅದರ ಅಂಶಗಳು ಇಲ್ಲಿವೆ.

ಎಸ್ಸಿ ಎಸ್ಟಿ ಬೆಳೆಗಾರರಿಗೆ ಅತ್ಯಧಿಕ ನೆರವು
ಸಚಿವಾಲಯವು ನೀಡಿದ ಮಾಹಿತಿ ಪ್ರಕಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ದ್ರಾಕ್ಷಿ ಕೃಷಿಯನ್ನು ಪ್ರೋತ್ಸಾಹಿಸಲು ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಬೆಳೆಗಾರರಿಗೆ ಹನಿ ನೀರಾವರಿಗಾಗಿ ಸಾಮಾನ್ಯ ವರ್ಗಕ್ಕೆ ಶೇ.75 ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ವರ್ಗದ ಬೆಳೆಗಾರರಿಗೆ ಶೇ.90 ಸಹಾಯಧನ ನೀಡಲಾಗುತ್ತಿದೆ.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ, ಸಾಮಾನ್ಯ ವರ್ಗದ ಬೆಳೆಗಾರರಿಗೆ ಹೆಕ್ಟೇರ್ಗೆ ಗರಿಷ್ಠ 24,000 ರೂ. ಹಾಗೂ ಎಸ್ಸಿ/ಎಸ್ಟಿ ಗೆ ಹೆಕ್ಟೇರ್ಗೆ ಗರಿಷ್ಠ 30,000 ರೂ. ಗೊಬ್ಬರ ಸಹಾಯಧನ ನೀಡಲಾಗುತ್ತಿದೆ. ಜೊತೆಗೆ ಪೌಷ್ಠಿಕಾಂಶ ಹಾಗೂ ರೋಗ ನಿಯಂತ್ರಣಕ್ಕಾಗಿ ಹೆಕ್ಟೇರ್ಗೆ ಗರಿಷ್ಠ 2,000 ರೂ. ನೀಡಲಾಗುತ್ತಿದೆ.
ಇನ್ನೂ ಕೀಟನಾಶಕ ಮತ್ತು ಗೊಬ್ಬರ ಸಿಂಪಡಣೆಗಾಗಿ ಯಂತ್ರ ಖರೀದಿಗೆ ಸಾಮಾನ್ಯ ವರ್ಗಕ್ಕೆ ಗರಿಷ್ಠ 76,000 ರೂ. ಹಾಗೂ ಎಸ್ಸಿ/ಎಸ್ಟಿ ಗೆ ಗರಿಷ್ಠ 95,000 ರೂ. ಸಹಾಯಧನ ನೀಡಲಾಗುತ್ತಿದೆ.

2022-23 ರಲ್ಲಿ ದ್ರಾಕ್ಷಿ ಉತ್ಪಾದನೆಯಲ್ಲಿ ಇಳಿಕೆ
2021-22 ಹಾಗೂ 2022-23 ನೇ ಸಾಲಿನಲ್ಲಿ ಅತಿಯಾದ ಮಳೆ ಹಾಗೂ ರೋಗಗಳಿಂದಾಗಿ ದ್ರಾಕ್ಷಿ ಬೆಳೆ ಪ್ರದೇಶ ಹಾಗೂ ಉತ್ಪಾದನೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 2022-23 ರಲ್ಲಿ ಚಿಕ್ಕಬಳ್ಳಾಪುರದಲ್ಲಿ 568 ಹೆಕ್ಟೇರ್ನಲ್ಲಿ ದ್ರಾಕ್ಷಿ ಬೆಳೆದಿದ್ದು, 13,113 ಟನ್ ಉತ್ಪಾದನೆಯಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿತು.
ಇದೇ ಸಾಲಿನಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ 1,712 ಹೆಕ್ಟೇರ್ನಲ್ಲಿ ದ್ರಾಕ್ಷಿ ಬೆಳೆದಿದ್ದು, 43,086 ಟನ್ ದ್ರಾಕ್ಷಿ ಉತ್ಪಾದನೆಯಾಗಿದೆ.
ಬೆಳೆಗಾರರು ನಷ್ಟ ಪರಿಹಾರ ಪಡೆಯಲು, ಹವಾಮಾನ ಆಧಾರಿತ ಬೆಳೆ ಬಿಮೆ ಯೋಜನೆಗೆ (RWBCIS) ಹೆಸರು ನೋಂದಾಯಿಸಲು ಸಲಹೆ ನೀಡಲಾಗುತ್ತಿದೆ. ಈ ಯೋಜನೆಯಡಿ, ಶೇ.5 ರಷ್ಟು ಅಂದರೆ ಹೆಕ್ಟೇರ್ಗೆ 14,000 ರೂ. ವಿಮೆ ಪಾವತಿಸಬೇಕು. ನಷ್ಟವಾದಾಗ ಹೆಕ್ಟೇರ್ಗೆ 2.80 ಲಕ್ಷ ರೂ. ಪರಿಹಾರ ಸಿಗಲಿದೆ ಎಂದು ಕೇಂದ್ರ ಸಚಿವಾಲಯ ಸಂಸದರ ಪ್ರಶ್ನೆಗೆ ಉತ್ತರಿಸಿತು.












Click it and Unblock the Notifications