ಬಿರುಬಿಸಿಲಿನ ಎಫೆಕ್ಟ್ ಸರ್ಕಾರಿ ಕಚೇರಿ 1.30ಕ್ಕೆ ಬಂದ್
ಬೆಂಗಳೂರು, ಏ. 21 : ಉತ್ತರ ಕರ್ನಾಟಕದಲ್ಲಿ ಬಿರುಬಿಸಿಲಿನ ಪರಿಣಾಮ ಸರ್ಕಾರಿ ಕಚೇರಿಗಳ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಲಾಗಿದೆ. ಗುಲ್ಬರ್ಗ ಮತ್ತು ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಈ ವೇಳಾಪಟ್ಟಿ ಏ.21ರ ಸೋಮವಾರದಿಂದ ಜಾರಿಗೆ ಬರಲಿದೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಶನಿವಾರ ಸರ್ಕಾರಿ ಕಚೇರಿಗಳ ವೇಳಾಪಟ್ಟಿ ಬದಲಾವಣೆಗೆ ಅನುಮೋದನೆ ನೀಡಿದ್ದು, ಸೋಮವಾರರಿಂದ ಈ ವೇಳಾಪಟ್ಟಿ ಜಾರಿಗೆ ಬಂದಿದೆ. ಅದರಂತೆ ಈ ವಿಭಾಗಗಳ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರ ವರೆಗೆ ಮಾತ್ರ ಕಾರ್ಯ ನಿರ್ವಹಿಸಲಿವೆ.

ಗುಲ್ಬರ್ಗ ಕಂದಾಯ ವಿಭಾಗದ ಬಳ್ಳಾರಿ, ಬೀದರ್, ಗುಲ್ಬರ್ಗ, ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಬೆಳಗಾವಿ ಕಂದಾಯ ವಿಭಾಗದ ಬಾಗಲಕೋಟೆ ಮತ್ತು ಬಿಜಾಪುರ ಜಲ್ಲೆಗಳಲ್ಲಿ ಈ ವೇಳಾಪಟ್ಟಿ ಜಾರಿಗೆ ಬರಲಿದೆ. ಸರ್ಕಾರಿ ಕಚೇರಿ ಕೆಲಸದ ಅವಧಿ ಪರಿಷ್ಕರಿಸುವಂತೆ ಹಿಂದೆ ಸರ್ಕಾರಿ ನೌಕರರ ಸಂಘ ಸರ್ಕಾರಕ್ಕೆ ಮನವಿ ಮಾಡಿತ್ತು.
ಲೋಕಸಭೆ ಚುನಾವಣೆ ಕೆಲಸಗಳು ಇದ್ದ ಕಾರಣ ಮತದಾನ ಮುಗಿಯುವ ತನಕ ವೇಳಾಪಟ್ಟಿಯನ್ನು ಪರಿಷ್ಕರಣೆ ಮಾಡಿರಲಿಲ್ಲ. ಸದ್ಯ ಅದನ್ನು ಪರಿಷ್ಕರಿಸಲಾಗಿದ್ದು, ಏ.21ರಿಂದ ಮೇ 10ರ ವರೆಗೆ ಈ ವೇಳಾಪಟ್ಟಿ ಜಾರಿಯಲ್ಲಿರುತ್ತದೆ. ನಂತರ ಮೇ 11 ರಿಂದ 17ರ ವರೆಗೆ ಮತ ಎಣಿಕೆ ಕೆಲಸ ಕಾರ್ಯಗಳು ಆರಂಭವಾಗುವುದರಿಂದ ಪರಿಷ್ಕೃತ ವೇಳಾಪಟ್ಟಿ ಅನ್ವಯ ವಾಗುವುದಿಲ್ಲ.
ಮೇ.18ರಿಂದ ಮೇ 31ರ ವರೆಗೆ ಪುನಃ ಸರ್ಕಾರಿ ಕಚೇರಿಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ರವರೆಗೆ ಕಾರ್ಯನಿರ್ವಹಿಸಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಜೂ 1ರಿಂದ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಅಂದಹಾಗೆ ಸೋಮವಾರ ಬಿಜಾಪುರದಲ್ಲಿ ಗರಿಷ್ಠ 38 ಡಿಗ್ರಿ, ಬಳ್ಳಾರಿಯಲ್ಲಿ 39, ಕೊಪ್ಪಳದಲ್ಲಿ 36, ಗುಲ್ಬರ್ಗದಲ್ಲಿ 39, ರಾಯಚೂರಿನಲ್ಲಿ 40, ಯಾದಗಿರಿಯಲ್ಲಿ 40, ಬಾಗಲಕೋಟೆಯಲ್ಲಿ 38 ಡಿಗ್ರಿ ಗರಿಷ್ಠ ಉಷ್ಣಾಂಶವಿರಲಿದೆ ಎಂದು ಹವಮಾನ ಇಲಾಖೆ ಹೇಳಿದೆ. ಶುಕ್ರವಾರ ಮತ್ತು ಶನಿವಾರದ ವೇಳೆಗೆ ಈ ಜಿಲ್ಲೆಗಳ ಉಷ್ಣಾಂಶ 40 ಡಿಗ್ರಿಗಿಂತ ಹೆಚ್ಚು ದಾಖಲಾಗುವ ಸಾಧ್ಯತೆ ಇದೆ.












Click it and Unblock the Notifications