ಮೈಕ್ ಮಾರ್ಗಸೂಚಿ ಆಜಾನ್ಗೆ ಅನ್ವಯ ಆಗಲ್ಲ; ಮೊಹಮ್ಮದ್ ಷಫಿ ಸಾ-ಆದಿ
ಬೆಂಗಳೂರು, ಮೇ 12: ಪ್ರಾರ್ಥನಾ ಮಂದಿರ, ಸಭೆ-ಸಮಾರಂಭಗಳಲ್ಲಿ ಧ್ವನಿವರ್ಧಕ ನಿಷೇಧಿಸಿ ಸರ್ಜಾರ ಮಾಡಿರುವ ಆದೇಶ ಆಜಾನ್ಗೆ ಅನ್ವಯ ಆಗಲ್ಲ ಎಂದು ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೊಹಮ್ಮದ್ ಷಫಿ ಸಾ-ಆದಿ ಅಭಿಪ್ರಾಯಪಟ್ಟಿದ್ದಾರೆ.
ಬೆಳಗ್ಗೆ 5 ಗಂಟೆಗೆ ಕೂಗುವ ಆಜಾನ್ ಪ್ರಾರ್ಥನೆ ಅಲ್ಲ, ಪ್ರಾರ್ಥನೆಗೆ ಬರುವಂತೆ ಕೊಡುವ ಸಂದೇಶ. ಆಜಾನ್ಗೆ ಧ್ವನಿವರ್ಧಕದ ಮೂಲಕವೇ ಕರೆಯಬೇಕು. ಸುಪ್ರೀಂಕೋರ್ಟ್ ಆದೇಶದಲ್ಲೂ ಆಜಾನ್ ಬಗ್ಗೆ ವಿರೋಧವಿಲ್ಲ. ಸರ್ಕಾರದ ಆದೇಶ ಏನಿದೆ ಅದನ್ನು ಪಾಲಿಸುತ್ತೇವೆ. ಆದರೆ ಆಜಾನ್ಗೆ ಸರ್ಕಾರದ ಆದೇಶ ಅನ್ವಯ ಆಗಲ್ಲ ಎಂದಿದ್ದಾರೆ.
ಆಜಾನ್ ನಿಷೇಧಿಸುವಂತೆ ಒತ್ತಾಯಿಸಿ ವಿವಿಧ ಹಿಂದೂ ಸಂಘಟನೆಗಳು ಹನುಮಾನ್ ಚಾಲೀಸಾ ಪಠಣ ಮಾಡಿದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಧ್ವನಿವರ್ಧಕಗಳ ಬಳಕೆ ನಿಯಂತ್ರಿಸುವ ಭಾಗವಾಗಿ, ಧ್ವನಿ ಉತ್ಪಾದಿಸುವ ಉಪಕರಣಗಳ ಬಳಕೆಗೆ ಅಧಿಕಾರಿಗಳಿಂದ ಲಿಖಿತ ಅನುಮತಿ ಪಡೆಯಬೇಕೆಂದು ಸರ್ಕಾರ ಹೇಳಿದೆ. ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯ ನಡುವೆ ಮುಚ್ಚಿದ ಆವರಣಗಳನ್ನು ಹೊರತುಪಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸಬಾರದು ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಸರ್ಕಾರದ ಸುತ್ತೋಲೆಯಲ್ಲಿ ಏನಿದೆ?
ಧ್ವನಿವರ್ಧಕ ಮತ್ತು ಧ್ವನಿ ಉತ್ಪಾದಕ ಉಪಕರಣ ಬಳಸಲು ಅನುಮತಿ ಪಡೆಯದವರು ಸ್ವಯಂ ಪ್ರೇರಣೆಯಿಂದ ಅವುಗಳನ್ನು ತೆಗೆದುಹಾಕಲು ತಿಳಿಸಿದೆ. ಇಲ್ಲದಿದ್ದರೆ ನೀಡಲಾದ ಗಡುವಿನಿಂದ 15 ದಿನಗಳಲ್ಲಿ ಗೊತ್ತುಪಡಿಸಿದ ಪ್ರಾಧಿಕಾರದಿಂದ ಅದನ್ನು ತೆಗೆದುಹಾಕಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ. ಈ ಅಧಿಸೂಚನೆಯು 2002ರ ಸರ್ಕಾರಿ ಆದೇಶವನ್ನು ಉಲ್ಲೇಖಿಸಿದ್ದು, ಶಬ್ದ ಮಾಲಿನ್ಯ ಕಡಿಮೆ ಮಾಡುವ ಭಾಗವಾಗಿ ನಿಯಮ ಜಾರಿಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

ಲಿಖಿತ ಅನುಮತಿ ಪಡೆಯದೇ ಸಾರ್ವಜನಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವುದನ್ನು ನಿಷೇಧಿಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನಂತೆ ರಾತ್ರಿ ಸಮಯದಲ್ಲಿ ಧ್ವನಿವರ್ಧಕ ಬಳಸುವಂತಿಲ್ಲ. ಒಳಾಗಂಣದಲ್ಲಿ ಮಾತ್ರ ಬಳಸಬಹುದಾಗಿದೆ. ವಸತಿ ಪ್ರದೇಶಗಳಲ್ಲಿ ರಾತ್ರಿ ಸಮಯ ವಾಹನಗಳು ಹಾರ್ನ್ ಹಾಕುವ ಹಾಗಿಲ್ಲ.
ಸುಪ್ರೀಂಕೋರ್ಟ್ ಆದೇಶ, ಶಬ್ದ ಮಾಲಿನ್ಯ ನಿಯಂತ್ರಣ ನಿಯಮ, ರಾಜ್ಯ ಸರ್ಕಾರದ ಹಿಂದಿನ ಆದೇಶಗಳ ಅಂಶಗಳ ಆಧಾರದ ಮೇಲೆ ಹೊಸ ನಿಯಮ ರೂಪಿಸಿ ಸುತ್ತೋಲೆ ಹೊರಡಿಸಿತ್ತು.












Click it and Unblock the Notifications