ಶಿಕ್ಷಣ ಇಲಾಖೆ ವಿರುದ್ಧದ ಆರೋಪಕ್ಕೆ ದಾಖಲೆ ಇದ್ದರೆ ಕೊಡಿ:ನಾಗೇಶ್
ಬೆಂಗಳೂರು, ಸೆಪ್ಟಂಬರ್ 06: ಭ್ರಷ್ಟಾಚಾರದ ಕುರಿತು ದಾಖಲೆಗಳಿದ್ದರೆ ತನಿಖಾ ಸಂಸ್ಥೆಗಳಿಗೆ ದೂರು ನೀಡಿ. ಅದನ್ನು ಬಿಟ್ಟು ಖಾಲಿ ಡಂಗುರ ಬಾರಿಸುವುದು ನಿಮ್ಮ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿರುಗೇಟು ನೀಡಿದ್ದಾರೆ.
ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಣ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವ ಕೆಲಸವು ಆಗಲ್ಲ. ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದರ ವಿರುದ್ಧ ಟ್ವಿಟ್ ಮಾಡಿರುವ ಸಚಿವ ಬಿ.ಸಿ.ನಾಗೇಶ್ ಅವರು ಸರಣಿ ಟ್ವಿಟ್ ಮಾಡಿದ್ದಾರೆ. ಆರೋಪಗಳಿಗೆ ದಾಖಲೆ ನೀಡಿ ಎಂದು ಕಿಡಿ ಕಾರಿದ್ದಾರೆ.
ಸಿದ್ದರಾಮಯ್ಯನವರೇ ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ನೀವು, ಆರೋಪಗಳ ಬಗ್ಗೆ ಪುರಾವೆ ಸಮೇತ ದೂರು ನೀಡಿ ಸಾಬೀತುಪಡಿಸಿ. ಬರೀ ಗಾಳಿಯಲ್ಲಿ ಗುಂಡು ಹಾರಿಸುವುದು ಏಕೆ ಎಂದು ಸಚಿವರು ಪ್ರಶ್ನಿಸಿದ್ದಾರೆ.

ನಿಮ್ಮ ಅವಧಿಯ ಪ್ರಕರಣಗಳ ಪಟ್ಟಿಗೆ ಕೊನೆ ಇಲ್ಲ
ಅಧಿಕಾರದಲ್ಲಿದ್ದಾಗ ಲೋಕಾಯುಕ್ತ ಸಂಸ್ಥೆಯ ಅಧಿಕಾರ ಕಸಿದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿದ್ದು ದುರುದ್ದೇಶದಿಂದ ಅಲ್ಲವೇ?. ಹಿಂದೂಗಳ ವಿಭಜನೆಗೆ ಯತ್ನ, ಹಗರಣಗಳು, ಭ್ರಷ್ಟಾಚಾರ, ಅಧಿಕಾರಿಗಳ ಸಾವುಗಳು, ಶಾಲಾ ಮಕ್ಕಳಲ್ಲಿ ತಾರತಮ್ಯ, ಸಮಾಜವಾದದ ಹೆಸರಿನಲ್ಲಿ ಹೂಬ್ಲೋಟ್ ವಾಚ್ ಧರಿಸಿದ್ದು. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕೊನೆಯೇ ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಅವರು ಗುಡುಗಿದರು.
ತುಷ್ಟೀಕರಣ, ಜಾತಿವಾದ, ಹಿಂದೂಗಳ ನಂಬಿಕೆ ಮತ್ತು ಧಾರ್ಮಿಕ ಆಚರಣೆಗಳ ಅವಹೇಳನ, ಅವಮಾನ ಮಾಡಿಕೊಂಡು ಓಡಾಡುವ ನಿಮಗೆ ಈಗಾಗಲೇ ಜನತೆ ತಕ್ಕ ಪಾಠ ಕಲಿಸಿದ್ದಾರೆ. ಆದರೂ ಅಹಂಕಾರ ಮುಂದುವರೆಸಿರುವ ನಿಮಗೆ ನಿಮ್ಮ ಪಕ್ಷದವರೂ ಒಳಗೊಂಡಂತೆ ಜನರು ಮತ್ತೊಮ್ಮೆ ಪಾಠ ಕಲಿಸಲು ಕಾಯುತ್ತಿದ್ದಾರೆ ನೆನಪಿರಲಿ ಎಂದು ಬಿ.ಸಿ.ನಾಗೇಶ್ ಎಚ್ಚರಿಸಿದರು.
ಬಿಜೆಪಿ ಯೋಜನೆಗಳು ಸಹಿಸಲಾಗುತ್ತಿಲ್ಲ:
ಕಳೆದೊಂದು ವರ್ಷದಲ್ಲಿ ಬಿಜೆಪಿ ಸರ್ಕಾರದಿಂದ 15,000 ಶಿಕ್ಷಕರ ನೇಮಕ. 8,100 ಕೊಠಡಿಗಳ ನಿರ್ಮಾಣಗೊಳ್ಳಲು ಯೋಜನೆ ರೂಪಿಸಿರುವುದು. ಪೌಷ್ಟಿಕ ಆಹಾರ ವಿತರಣೆ, ಅತಿಥಿ ಉಪನ್ಯಾಸಕರು, ಶಿಕ್ಷಕರು, ಬಿಸಿಯೂಟ ಕಾರ್ಯಕರ್ತರ ಗೌರವ ಸಂಭಾವನೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿರುವುದು. ಶಿಕ್ಷಣದ ಸಮಗ್ರ ಸುಧಾರಣೆಗಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಅನುಷ್ಠಾನ ಕಾರ್ಯ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಇದನ್ನು ನೋಡಿ ಅವರಿಗೆ ಸಹಿಸಲಾಗುತ್ತಿಲ್ಲ ಎಂದು ಹೇಳಿದರು.

ಶಾಲಾ ಮಕ್ಕಳ ಸಮವಸ್ತ್ರ, ನೈತಿಕ ಶಿಕ್ಷಣ ತರಗತಿ, ಮಧ್ಯಾಹ್ನದ ಬಿಸಿಯೂಟದ ಜೊತೆಗೆ ಪೂರಕ ಪೌಷ್ಟಿಕ ಆಹಾರ ವಿತರಣೆ, ಪಠ್ಯ ಪುಸ್ತಕ ಪರಿಷ್ಕರಣೆ ಮುಂತಾದ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿಸಲು ಪ್ರಯತ್ನ ಮಾಡಿ ವಿಫಲರಾಗಿದ್ದೀರಿ. ಈಗ ಮತ್ತೊಂದು ಸುಳ್ಳಿನ ಸರ ಪೋಣಿಸಲು ಪ್ರಯತ್ನ ಮಾಡುತ್ತಿರುವಿರಿ. ನಿಮ್ಮ ಸುಳ್ಳುಗಳು ನೀರಿನ ಮೇಲಿನ ಗುಳ್ಳೆಯಂತೆ ಎಂದು ಸಿದ್ದರಾಮಯ್ಯ ವಿರುದ್ಧ ಸಚಿವರು ಆಕ್ರೋಶ ಹೊರಹಾಕಿದ್ದಾರೆ.












Click it and Unblock the Notifications