ಖಾಸಗಿ ಸ್ಥಳಾವಕಾಶ ಕೋರಿ ಕೋರ್ಟ್ ಮೊರೆ ಹೋದ ಬಿ. ನಾಗೇಂದ್ರ
ಬೆಂಗಳೂರು, ಜುಲೈ 17: ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಅವ್ಯವಹಾರ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ಸಂಬಂಧ ಜಾರಿ ನಿರ್ದೇಶನಾಲಯ ವಶದಲ್ಲಿರುವ ಮಾಜಿ ಸಚಿವ ಬಿ. ನಾಗೇಂದ್ರ ತಮಗೆ ಚಿಕಿತ್ಸೆ ಪಡೆಯಲು ಮತ್ತು ವಕೀಲರೊಂದಿಗೆ ಚರ್ಚಿಸಲು ಖಾಸಗಿಯಾಗಿ ಸ್ಥಳಾವಕಾಶ ಒದಗಿಸಬೇಕೆಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನಗರದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಚಾರಣೆಯನ್ನು ಜುಲೈ 18 ಮುಂದೂಡಿದೆ. ವಕೀಲರೊಂದಿಗೆ ಚರ್ಚೆ ನಡೆಸಲು ಖಾಸಗಿ ಸ್ಥಳಾವಕಾಶ ವ್ಯವಸ್ಥೆ ಮಾಡಬೇಕು. ಈಗಾಗಲೇ ಸ್ಟಂಟ್ ಹಾಕಿಸಿದ್ದು, ಸರಿಯಾದ ರೀತಿಯಲ್ಲಿ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು. ವಿಚಾರಣೆ ವೇಳೆ ಅಧಿಕಾರಿಗಳು ಹೇಳಿದಂತೆ ಮಾಹಿತಿ ನೀಡಬೇಕು ಎಂಬುದಾಗಿ ಒತ್ತಡ ಹಾಕದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.

ಒತ್ತಡ ಹಾಕುವಂತಿಲ್ಲ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಇಡಿ ವಶದಲ್ಲಿದ್ದ ಆರೋಪಿಯನ್ನು ಹೇಳಿಕೆ ದಾಖಲಿಸುವ ಹಕ್ಕು ಪೊಲೀಸರಿಗೆ ಇದೆ. ಆದರೆ, ಈ ರೀತಿ ಹೇಳಿಕೆ ದಾಖಲಿಸುವಾಗ ಅಡಿಯಲ್ಲಿ ಒತ್ತಡ ಹಾಕಬಾರದು ಎಂದು ತಿಳಿಸಲಾಗಿದೆ. ಸಾಕ್ಷಿ ದಾಖಲಿಸುವಾಗ, ಸಾಕ್ಷಿ ಕಲೆ ಹಾಕುವಾಗ ಒತ್ತಡ ಹಾಕುವಂತಿಲ್ಲ ಎಂಬುದಾಗಿ ಬಾಂಬೆ ಹೈಕೋರ್ಟ್ ಆದೇಶವೊಂದರಲ್ಲಿ ತಿಳಿಸಿದೆ.
ಅಲ್ಲದೆ, ವಿಚಾರಣೆ ನಡೆಸುವ ಸಂದರ್ಭದಲ್ಲಿಯೂ ವಕೀಲರನ್ನು ಭೇಟಿ ಮಾಡಿ ಮಾಹಿತಿ ಪಡೆಯುವುದಕ್ಕೆ ಕಾನೂನಿನಲ್ಲಿ ಅವಕಾಶ ಇದೆ. ವಕೀಲರು ಇಡಿ ವಶದಲ್ಲಿರುವ ನಾಗೇಂದ್ರ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ಸಂದರ್ಭದಲ್ಲಿ ಅಧಿಕಾರಿಗಳು ಪಕ್ಕದಲ್ಲಿ ಬಂದು ನಿಲ್ಲುತ್ತಾರೆ. ನ್ಯಾಯಾಲಯದ ಆದೇಶ ತಂದಲ್ಲಿ ಮಾತ್ರ ಖಾಸಗಿಯಾಗಿ ಚರ್ಚೆ ನಡೆಸುವುದಕ್ಕೆ ಅವಕಾಶ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸುತ್ತಾರೆ ಎಂದು ವಕೀಲರು ಮಾಹಿತಿ ನೀಡಿದರು.
ಏನೇ ಮಾತನಾಡಿದರೂ ನಮ್ಮ ಮುಂದೆಯೇ ಮಾತನಾಡಬೇಕು ಎಂದು ಹೇಳುತ್ತಾರೆ. ತನಿಖೆಯ ವೇಳೆ ಅರ್ಜಿದಾರರಿಗೆ ಬೆದರಿಕೆ ಹಾಕಿದಲ್ಲಿ ವಕೀಲರೊಂದಿಗೆ ಚರ್ಚೆ ಡೆಸುವುದಾದರೂ ಹೇಗೆ?. ಅಧಿಕಾರಿ ಪಕ್ಕದಲ್ಲಿ ಇದ್ದರೆ ಧೈರ್ಯ ಬರಲು ಸಾಧ್ಯವೇ? ಇದು ಎಷ್ಟರ ಮಟ್ಟಿಗೆ ಸರಿ? ಎಂದು ವಾದ ಮಂಡಿಸಿದರು.
ಅಲ್ಲದೆ, ಅರ್ಜಿದಾರರಿಂದ ವಶಕ್ಕೆ ಪಡಿಸಿಕೊಂಡಿರುವ ಮೊಬೈಲ್ ಅನ್ನು ಮಿರರ್ ಇಮ್ಯೇಜ್ ಮಾಡುವುದಕ್ಕೆ ಅವಕಾಶ ನೀಡಬಾರದು. ಚುನಾವಣೆಯ ವೇಳೆ ನಮ್ಮ ಕಕ್ಷಿದಾರರ ವಿಚಾರಗಳು ಬಹಿರಂಗವಾಗಲಿದೆ. ತನಿಖೆಯ ಎಲ್ಲಾ ವಿಷಯ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿದೆ ಎಂದು ಅವರು ನ್ಯಾಯಾಲಯಕ್ಕೆ ವಿವರಿಸಿದರು.
ಪೋನ್ನಲ್ಲಿ ಅನೇಕ ಖಾಸಗಿ ವಿಚಾರ ಇರುತ್ತವೆ. ಕೆನಡಿಯನ್ ಸುಪ್ರೀಂಕೋರ್ಟ್ ಹೇಳತ್ತದೆ ಕೋರ್ಟ್ ಅನುಮತಿ ಇಲ್ಲದೇ ಮಾಡಬಾರದು. ಬಳಕೆ ಮಾಡಿದರು ಅದು ಕೋರ್ಟ್ ಮಾನಿಟರಿಂಗ್ ಅಡಿಯಲ್ಲಿ ಮಾಡಬೇಕು. ತನಿಖಾಧಿಕಾರಿಗಳು ಕಾನೂನಿನ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ನ್ಯಾಯಾಲಯದ ಮುಂದೆ ಬಂದಿದ್ದೇವೆ. ಅವರು ಕಾನೂನು ರೀತಿ ಕೆಲಸ ಮಾಡಿದ್ದರೆ ನಾವು ಬರುತ್ತಿರಲಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು, ತನಿಖೆ ಹೇಗೆ ನಡೆಸಬೇಕು ಎನ್ನುವುದು ತನಿಖಾಧಿಕಾರಿಯ ವಿವೇಚನೆಗೆ ಬಿಟ್ಟಿದ್ದಾಗಿದೆ. ಈ ಸಂಬಂಧ ನಿರ್ದೇಶನ ನೀಡಲು ಸಾಧ್ಯವೇ.? ಎಂದು ನಾಗೇಂದ್ರ ಪರ ವಕೀಲರಿಗೆ ಪ್ರಶ್ನಿಸಿದರು.
ಆಧಾರರಹಿತ ಹೇಳಿಕೆ ಸಲ್ಲ: ಇಡಿ ಪರ ವಾದ ಮಂಡಿಸಿದ ಪ್ರಸನ್ನ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಅರ್ಜಿದಾರರ ಪರ ವಕೀಲರು ಆಧಾರ ರಹಿತವಾಗಿ ಏನನ್ನೂ ಹೇಳಬಾರದು, ಕಾನೂನಿನಲ್ಲಿ ಇರುವ ಅಂಶಗಳು ಹಾಗೂ ನ್ಯಾಯಾಲಯದ ಆದೇಶಗಳನ್ನು ಸ್ಪಷ್ಟವಾಗಿ ತಿಳಿಸಿ ವಾದ ಮಂಡಿಸಬೇಕು. ಆರೋಪಿ ವಿಡಿಯೋ ಗ್ರಾಫ್ಗೆ ರೆಡಿ ಇದ್ದರೂ ಮಾಡಲು ಅವಕಾಶ ಇಲ್ಲ. ಆರೋಪಿ ಲಾಭದ ರೀತಿಯಲ್ಲಿ ಪ್ರಾಸಿಕ್ಯೂಷನ್ ಕೆಲಸ ಮಾಡಲು ಸಾಧ್ಯವಿಲ್ಲ.
ಆದರೆ, ಆರೋಪಿಯೊಂದಿಗೆ ಚರ್ಚೆ ನಡೆಸಲು ವಕೀಲರಿಗೆ ಪೋನ್ ಒಳಗೆ ಅವಕಾಶ ನೀಡಲು ಸಾಧ್ಯವಿಲ್ಲ. ತನಿಖೆಯ ಹಂತದಲ್ಲಿದ್ದಾಗ ಪೋನ್ ಬಿಡುಗಡೆಗೆ ಅವಕಾಶ ಇಲ್ಲ. ಪ್ರಕರಣದಲ್ಲಿ ಪರಿಣಾಮಕಾರಿ ವಿಚಾರಣೆಗೆ ಕಷ್ಟ ಸಾಧ್ಯವಾಗಿದೆ ಎಂದು ವಿವರಿಸಿದರು.












Click it and Unblock the Notifications