ಸಿದ್ದರಾಮಯ್ಯನವರಿಗೆ ಇರುವ ಅಹಂಕಾರ ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ? ಶ್ರೀರಾಮುಲು
ದಾವಣಗೆರೆ, ಮೇ 21: ಬೆಳಗ್ಗೆಯಿಂದ ಹೊತ್ತಿ ಉರಿಯುತ್ತಿರುವ ರೋಷನ್ ಬೇಗ್ ವಿವಾದಕ್ಕೆ ಬಿಜೆಪಿ ಮುಖಂಡ, ಶಾಸಕ ಶ್ರೀರಾಮುಲು, ಅನಾವಶ್ಯಕವಾಗಿ ಮೂಗು ತೂರಿಸಿದ್ದಾರೆ.
ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್, ರೋಷನ್ ಬೇಗ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈಗ, ಶ್ರೀರಾಮುಲು ಸರದಿ. ಬೇಗ್ ನೀಡಿದ ಹೇಳಿಕೆ ಸರಿಯಾಗಿದೆ, ಸಿದ್ದರಾಮಯ್ಯನವರಿಗೆ ಅಹಂ ಜಾಸ್ತಿನೇ ಇದೆ ಎಂದು ರಾಮುಲು ಹೇಳಿದ್ದಾರೆ.
ಮನುಷ್ಯ ಎಷ್ಟೇ ಎತ್ತರಕ್ಕೆ ಬೆಳೆದರೂ, ಬೆಳೆದು ಬಂದ ದಾರಿಯನ್ನು ಮರೆಯಬಾರದು ಎಂದು ಸಿದ್ದರಾಮಯ್ಯನವರಿಗೆ ಕಿವಿಮಾತು ಹೇಳಿದ ಶ್ರೀರಾಮುಲು, ಅವರಿಗಿರೋ ಅಹಂಕಾರ ಅವರನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತೋ ಗೊತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯನವರ ರೀತಿಯಲ್ಲಿ ಬೆಳೆದು ಬಂದ ದಾರಿಯನ್ನು ಮರೆತವರನ್ನು ಬಹಳಷ್ಟು ಜನರನ್ನು ನೋಡಿದ್ದೇನೆ. ಇಂತವರೆಲ್ಲಾ ತಮ್ಮೆಲ್ಲಾ ಅಧಿಕಾರಗಳನ್ನು ಕಳೆದುಕೊಂಡರು ಎಂದು ಶ್ರೀರಾಮುಲು ಹೇಳಿದರು.

ಕೆಪಿಸಿಸಿ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಒಬ್ಬ 'ಬಫೂನ್', ಸಿದ್ದರಾಮಯ್ಯ ಸೊಕ್ಕಿನ ಮನುಷ್ಯ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಹಿನ್ನಡೆಯಾದರೆ, ಅದಕ್ಕೆ ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ಅವರೇ ಕಾರಣ ಎನ್ನುವ ಹೇಳಿಕೆಯನ್ನು ರೋಷನ್ ಬೇಗ್ ನೀಡಿದ್ದರು.
ಸಮಯ, ಸಂದರ್ಭ ನೋಡಿ ನಾವು (ಮುಸ್ಲಿಮರು) ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ, ಅವಶ್ಯಕತೆಬಿದ್ದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟಕ್ಕೆ ಬೆಂಬಲಿಸಲು ನಾವು ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆಯನ್ನು ರೋಷನ್ ಬೇಗ್ ನೀಡಿದ್ದರು.
ರೋಷನ್ ಬೇಗ್ ಟೀಕೆಗೆ ಕೆಪಿಸಿಸಿ ಶೋಕಾಸ್ ನೊಟೀಸ್ ಜಾರಿ ಮಾಡಿತ್ತು. ಅದಕ್ಕೆ ಬೇಗ್, ಖಡಕ್ಕಾದ ಪ್ರತಿಕ್ರಿಯೆಯನ್ನು ನೀಡಿದ್ದರು.












Click it and Unblock the Notifications