ಪ್ರತಿ ಭಾರತೀಯನೂ ತೆರಿಗೆದಾರ, ಉಚಿತ ಕೊಡುಗೆಗಳಿಂದ ಬಡವರಿಗೆ ಉತ್ತೇಜನ: ಶ್ರೀಮಂತರು ಕಟ್ಟಿಕೊಡುತ್ತಿರುವುದು ಸುಳ್ಳು ನಿರೂಪಣೆ
ಕರ್ನಾಟಕದ ಚುನಾವಣಾ ಫಲಿತಾಂಶಗಳು ಪ್ರಕಟವಾದಾಗಿನಿಂದ, ಆರ್ಥಿಕತೆಯನ್ನು ಹಾಳುಮಾಡುವ ಮತ್ತು ಬಡವರನ್ನು ಸೋಮಾರಿಗಳನ್ನಾಗಿ ಮಾಡುವ ಉಚಿತ ಕೊಡುಗೆಗಳ ಕುರಿತಾದ ಮಾತುಗಳು ಕೆಲವರಿಂದ ಕೇಳಿಬರುತ್ತಿವೆ. ಕಾಂಗ್ರೆಸ್ ಸರ್ಕಾರ ತನ್ನ ಐದು ಚುನಾವಣಾ ಭರವಸೆಗಳನ್ನು ಈಡೇರಿಸಲು ಎಷ್ಟು ಸಾವಿರ ಕೋಟಿ ಬೇಕು ಎಂಬ ಚರ್ಚೆಗಳು ಸುದ್ದಿ ವಾಹಿನಿಗಳಲ್ಲಿ ಮುನ್ನೆಲೆಗೆ ಬಂದಿವೆ. ಉಚಿತ ಕೊಡುಗೆಗಳು ರಾಜ್ಯದ ಆರ್ಥಿಕತೆಯ ಮೇಲೆ ಭಾರಿ ಹೊರೆ ಎಂದು ಬಿಂಬಿಸುತ್ತಿವೆ. ಈ ವಿಚಾರವಾಗಿ 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯು ಪ್ರಕಟಗೊಳಿಸಿರುವ ಈ ವರದಿಯನ್ನು ಓದಿ.
ಸಾಮಾಜಿಕ ಮಾಧ್ಯಮಗಳಲ್ಲಿ ಉಚಿತ ಕೊಡುಗೆಗಳಿಂದ ತೆರಿಗೆದಾರರ ಹಣ ದುರುಪಯೋಗವಾಗುವುದರ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಉಚಿತ ಕೊಡುಗೆಗಳು' ಮತ್ತು 'ತೆರಿಗೆದಾರರ ಹಣ' ಕೆಲವರು ನೆಚ್ಚಿನ ಪದಗಳಾಗಿ ಮಾರ್ಪಟ್ಟಿವೆ. ಈ ರಾಜಕೀಯ ವ್ಯಾಖ್ಯಾನಗಳನ್ನು ಕೆಲವರು ಟ್ರೋಲ್ ಮಾಡುವ ಮನರಂಜನಾ ಹವ್ಯಾಸವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ, ಈ ಎಲ್ಲಾ ಬೆಳವಣಿಗೆಗಳ ಬಗೆಗಿನ ನಿರೂಪಣೆಯು ಸಮಸ್ಯಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ.

ಈ ವಾದವನ್ನು ಬಲಪಡಿಸಲು ಮತ್ತು ಸಮರ್ಥಿಸಿಕೊಳ್ಳಲು ಒಂದು ಸಾಮಾನ್ಯ ತಪ್ಪು ಕಲ್ಪನೆಯನ್ನು ಹರಡಲಾಗುತ್ತಿದೆ. ಕೇವಲ 3 ಪ್ರತಿಶತದಷ್ಟು ಭಾರತೀಯರು ಮಾತ್ರ ತೆರಿಗೆ ಪಾವತಿಸುತ್ತಾರೆ. ಉಳಿದವರು (97 ಪ್ರತಿಶತ) ನೇರ ತೆರಿಗೆ ಪಾವತಿಸುವುದಿಲ್ಲವೆಂದು ಆರೋಪಿಸಲಾಗಿದೆ.
ಆದರೆ, ವಾಸ್ತವದಲ್ಲಿ ಪ್ರತಿಯೊಬ್ಬ ಭಾರತೀಯನೂ ತೆರಿಗೆದಾರನಾಗಿದ್ದಾನೆ. ಉಲ್ಲೇಖಿಸಿರುವ ಶೇಕಡಾ 3 ಅಂಕಿಅಂಶವು ಆದಾಯ ತೆರಿಗೆಯನ್ನು ಪಾವತಿಸುವ ಜನಸಂಖ್ಯೆಯ ಅಂದಾಜು ಪಾಲಾಗಿದ್ದು. ಇದು ಭಾರತದಲ್ಲಿ ತೆರಿಗೆಗಳನ್ನು ಸಂಗ್ರಹಿಸುವ ಹತ್ತಾರು ವಿಧಾನಗಳಲ್ಲಿ ಒಂದಾಗಿದೆ. ತೆರಿಗೆಯ ಸಂಪೂರ್ಣ ಪಟ್ಟಿ ಮತ್ತು ವಿವರಣೆಯು ಈ ಲೇಖನದ ವ್ಯಾಪ್ತಿಯನ್ನು ಮೀರಿದೆಯಾದರೂ, ಈ ತಪ್ಪು ಕಲ್ಪನೆಯನ್ನು ಹೊಡೆದುಹಾಕಲು ಒಂದೆರಡು ಉದಾಹರಣೆಗಳು ಸಾಕು.
ಮನೆಗೆಲಸದಲ್ಲಿ ತೊಡಗಿಕೊಂಡಿರುವ ಮಹಿಳೆಯು ನಿಯಮಿತವಾಗಿ ಖರೀದಿಸುವ ಆಹಾರ ಮತ್ತು ದಿನಸಿಗಳಿಂದ ಹಿಡಿದು ಸಾಬೂನು ಮತ್ತು ಟೂತ್ಪೇಸ್ಟ್ವರೆಗೆ ಆಕೆ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿಸುತ್ತಾಳೆ. ಲಕ್ಷಾಂತರ ಕ್ಯಾಬ್ ಡ್ರೈವರ್ಗಳು ಮತ್ತು ಆಹಾರ ವಿತರಣಾ ಕೆಲಸಗಾರರು ನಮ್ಮ ನಗರಗಳಲ್ಲಿ ಸುತ್ತಾಡುತ್ತಾರೆ. ನಮ್ಮನ್ನು ಕೆಲಸಕ್ಕೆ ಕರೆದೊಯ್ಯುತ್ತಾರೆ ಮತ್ತು ನಮಗೆ ಆಹಾರವನ್ನು ತರುತ್ತಾರೆ.

ಪ್ರತಿದಿನ, ಅವರು ತಮ್ಮ ವಾಹನಗಳಿಗೆ ನೂರಾರು ರೂಪಾಯಿ ಮೌಲ್ಯದ ಇಂಧನವನ್ನು ತುಂಬುತ್ತಾರೆ. ಅದರಲ್ಲಿ ಗಣನೀಯ ಪಾಲನ್ನು ರಾಜ್ಯಗಳು ಅಬಕಾರಿಯಾಗಿ ಮತ್ತು ಕೇಂದ್ರ ಸರ್ಕಾರದಿಂದ ಸೆಸ್ ಸಂಗ್ರಹಿಸಲಾಗುತ್ತದೆ (ಪ್ರತಿ ರೂ 100 ಮೌಲ್ಯದ ಪೆಟ್ರೋಲ್ಗೆ ರೂ 55; ಪ್ರತಿ ರೂ 100 ಗೆ ರೂ 50 ಮೌಲ್ಯದ ಡೀಸೆಲ್). ಇದು ಒಂದು ವರ್ಷಕ್ಕೆ ಎಷ್ಟು ಸೇರುತ್ತದೆ ಎಂಬುದನ್ನು ಲೆಕ್ಕ ಹಾಕಬೇಕಿದೆ. ಪ್ರತಿ ವರ್ಷ ತಮ್ಮ ವಾಹನ ವಿಮೆಯನ್ನು ನವೀಕರಿಸುವಾಗ ಅವರು ಜಿಎಸ್ಟಿಯನ್ನು ಸಹ ಪಾವತಿಸುತ್ತಾರೆ.
ಅವರು ಹೊಂದಿರುವ ಆಸ್ತಿ, ಅವರು ಖರೀದಿಸುವ ಸರಕುಗಳು ಮತ್ತು ಸೇವೆಗಳು, ಅವರು ಸೇವಿಸಬಹುದಾದ ಮದ್ಯ, ಇತ್ಯಾದಿಗಳ ಮೇಲೆ ಅವರು ಪಾವತಿಸುವ ಅನೇಕ ಇತರ ತೆರಿಗೆಗಳನ್ನು ಕಟ್ಟುತ್ತಾರೆ. ಈ ಎಲ್ಲಾ ತೆರಿಗೆಯನ್ನು ಪಾವತಿಸಿದ ನಂತರವೂ, ಅವರ ಕಲ್ಯಾಣಕ್ಕಾಗಿ ತಂದಿರುವ ಯೋಜನೆಗಳನ್ನು ಉಚಿತ ಕೊಡುಗೆಗಳು ಎಂದು ಹೀಯಾಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳಬೇಕಿದೆ.
ಪ್ರತಿಯೊಬ್ಬ ಭಾರತೀಯರು ( ಕನಿಷ್ಠ ಸರಕು ಮತ್ತು ಸೇವೆಗಳನ್ನು ಖರೀದಿಸುವವರು ) ತೆರಿಗೆಯನ್ನು ಪಾವತಿಸುತ್ತಾರೆ. ಕೇವಲ ನೇರ ತೆರಿಗೆದಾರರು ಸರ್ಕಾರಕ್ಕೆ ತೆರಿಗೆ ಕಟ್ಟುವುದಿಲ್ಲ. ಉಚಿತ ಕೊಡುಗೆ ಎಂದು ಸಮರ್ಥಿಸಲು ಸಾಧ್ಯವಿಲ್ಲ. ನೇರ ತೆರಿಗೆ ಪಾವತಿಸಲು ಸಾಕಷ್ಟು ಆದಾಯವಿಲ್ಲದವರ ಮೇಲೆ ಸರ್ಕಾರ ವಿಶೇಷವಾಗಿ ಖರ್ಚು ಮಾಡುವುದು ಕಲ್ಯಾಣ ರಾಜ್ಯದ ( ವೆಲ್ಫೇರ್ ಸ್ಟೇಟ್ ) ಪರಿಕಲ್ಪನೆಯಾಗಿದೆ.

ಶ್ರೀಮಂತರಲ್ಲಿರುವ ಇನ್ನೊಂದು ಅಗಾಧ ನಂಬಿಕೆಯೆಂದರೆ, ಸರ್ಕಾರದ ಕಲ್ಯಾಣ ಯೋಜನೆಗಳು ಕಾರ್ಮಿಕ ವರ್ಗದವರನ್ನು ದುಡಿಯದಂತೆ ಮಾಡುತ್ತವೆ. ಆದರೆ, ಅದು ಪೂರ್ಣ ಸತ್ಯವಲ್ಲ. ಕಲ್ಯಾಣ ಯೋಜನೆಗಳಿಂದ ಬಡವರಿಗೆ ಸುರಕ್ಷತೆಯನ್ನು ನೀಡಿದಂತಾಗುತ್ತದೆ. ಅವರು ಶ್ರೀಮಂತರ ಶೋಷಣೆಗಳಿಂದ ಹೊರಬರಬಹುದು. ಬಡವರನ್ನು ಮಹತ್ವಕಾಂಕ್ಷಿಗಳನ್ನಾಗಿ ಮಾಡುತ್ತದೆ.
ಬಲಪಂಥಿಯ ಚಿಂತನೆಗಳನ್ನು ಹೊಂದಿರುವ ಬಿಜೆಪಿಗೆ ಉಚಿತ ಕೊಡುಗೆಗಳ ಬಗ್ಗೆ ಗೌರವವಿಲ್ಲ. ಆದರೆ, ಎಡಪಂಥೀಯ ಒಲವುಳ್ಳ ಕಾಂಗ್ರೆಸ್ ಮತ್ತು ಜೆಡಿ(ಎಸ್) - ಕಲ್ಯಾಣ ಯೋಜನೆಗಳ ಬಗ್ಗೆ ಪ್ರಚಾರ ಮಾಡಿವೆ. ಬಡ ಮತ್ತು ಕಡಿಮೆ ವಿದ್ಯಾವಂತ ವರ್ಗಗಳಿಗೆ ಈ ಯೋಜನೆಗಳು ಬೆಂಬಲವನ್ನು ನೀಡುತ್ತದೆ. ಕರ್ನಾಟಕದ ಚುನಾವಣೆಯಲ್ಲಿ ಇದು ಬಹಿರಂಗವಾಗಿದೆ. ಕರಾವಳಿಯನ್ನು ಬಿಟ್ಟರೆ ಉಳಿದೆಡೆಗಳಲ್ಲಿ ಬಿಜೆಪಿ ನೆಲಕಚ್ಚಿದೆ. ಕಲ್ಯಾಣ ಯೋಜನೆಗಳಿಂದ ಉಳಿದ ಭಾಗಗಳಲ್ಲಿ ಕಾಂಗ್ರೆಸ್ ಜಯಗಳಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ.












Click it and Unblock the Notifications