ಈಶ್ವರಪ್ಪ ಪಿಎ ಅಪಹರಣ ಕೇಸ್, ಬಿಎಸ್ವೈ ವಿಚಾರಣೆಗೆ ಗೈರು
ಬೆಂಗಳೂರು, ಸೆಪ್ಟೆಂಬರ್ 29 : ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಪೊಲೀಸರ ವಿಚಾರಣೆಗೆ ಗೈರು ಹಾಜರಾಗಿದ್ದಾರೆ. ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಯಡಿಯೂರಪ್ಪ ಅವರಿಗೆ ನೋಟಿಸ್ ಜಾರಿಗೊಳಿಸಿದ್ದರು.
ಮಲ್ಲೇಶ್ವರಂ ಎಸಿಪಿ ಎ.ಆರ್.ಬಡಿಗೇರ್ ಮುಂದೆ ಯಡಿಯೂರಪ್ಪ ಅವರು ಸೆ.28ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಅವರು ಗೈರು ಹಾಜರಾಗಿದ್ದು, ವಕೀಲರ ಮೂಲಕ ಪೊಲೀಸರಿಗೆ ಪತ್ರವನ್ನು ಕಳಿಸಿದ್ದಾರೆ.

ಪತ್ರದಲ್ಲಿ ಏನಿದೆ? : ಬಿ.ಎಸ್.ಯಡಿಯೂರಪ್ಪ ಅವರು ಪೊಲೀಸರಿಗೆ ಬರೆದಿರುವ ಪತ್ರದಲ್ಲಿ, 'ಠಾಣೆಗೆ ಹಾಜರಾಗಲು ಸಾಧ್ಯವಿಲ್ಲ. ವಿಚಾರಣೆಗೆ ಬರುವಂತೆ ನೀಡಿದ ನೋಟಿಸ್ನಲ್ಲಿ ಯಾವ ದಾಖಲೆ ಬೇಕು? ಎಂದು ನೀವು ತಿಳಿಸಿಲ್ಲ. ನೀವು ಬಯಸಿದ ದಾಖಲೆ ನನ್ನ ಬಳಿ ಇದ್ದರೆ ನೀಡುತ್ತೇನೆ' ಎಂದು ಹೇಳಿದ್ದಾರೆ.
'65 ವರ್ಷದ ನನಗೆ ಠಾಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸಿಆರ್ಪಿಸಿ ಕಲಂ 160ರ ಅನ್ವಯ ವಯಸ್ಸಾದ ವ್ಯಕ್ತಿಯ ವಿಳಾಸಕ್ಕೆ ತನಿಖಾಧಿಕಾರಿಯೇ ಭೇಟಿ ನೀಡಿ ಮಾಹಿತಿ ಪಡೆಯಬೇಕು. ಹಾಗಾಗಿ ನಾನು ಠಾಣೆಗೆ ಬರುವುದಿಲ್ಲ. ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಾಗಿದೆ. ತನಿಖಾಧಿಕಾರಿಯಾದ ನೀವೇ ನನ್ನ ಬಳಿ ಬಂದರೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಯಡಿಯೂರಪ್ಪ ಆಪ್ತ ಸಹಾಯಕ ಎನ್.ಆರ್.ಸಂತೋಷ್ ಪ್ರಮುಖ ಆರೋಪಿ. ಹಿಂದೆ ಎನ್.ಆರ್.ಸಂತೋಷ್ ಗಾಗಿ ಹುಡುಕಾಟ ನಡೆಸಿದ್ದ ಪೊಲೀಸರು ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಯಡಿಯೂರಪ್ಪ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು.












Click it and Unblock the Notifications