ಪತ್ರಕರ್ತರಿಗೆ ಶಿಕ್ಷೆ, ಆದೇಶಕ್ಕೆ ದಿನೇಶ್ ಗುಂಡೂರಾವ್ ಅಸಮಾಧಾನ
ಬೆಂಗಳೂರು, ಜೂನ್ 26: ಶಾಸಕರ ವಿರುದ್ಧ ಮಾನಹಾನಿ ಆಗುವಂಥ ವರದಿ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ವಿಧಾನ ಮಂಡಲದಿಂದ ಪತ್ರಕರ್ತರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಿರುವುದಕ್ಕೆ ಕಾಂಗ್ರೆಸ್ ಸರಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.
ಪತ್ರಕರ್ತರ ವಿರುದ್ಧ ಇಂಥ ಕ್ರಮಕ್ಕೆ ಎಡಿಟರ್ಸ್ ಗಿಲ್ಡ್ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೇ ಎಐಸಿಸಿ ವಕ್ತಾರ ಮತ್ತು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್, ಈ ಕ್ರಮ ಸರಿಯಾದುದಲ್ಲ ಎಂದಿದ್ದಾರೆ. "ಸಮಿತಿಯು ಪತ್ರಕರ್ತರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿರುವುದು ತಪ್ಪು. ಕರ್ನಾಟಕ ವಿಧಾನಮಂಡಲವು ಈ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು" ಎಂದಿದ್ದಾರೆ.

ವಿಧಾನಮಂಡಲದ ತೀರ್ಮಾನದ ವಿರುದ್ದ್ಗ ಧ್ವನಿ ಎತ್ತಿರುವ ಮೊದಲ ಕಾಂಗ್ರೆಸ್ಸಿಗ ದಿನೇಶ್ ಗುಂಡೂರಾವ್. ಕರ್ನಾಟಕ ವಿಧಾನಮಂಡಲದ ತೀರ್ಮಾನಕ್ಕೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಪ್ರಬಲ ಆಕ್ಷೇಪ ಬಂದ ಒಂದು ದಿನಕ್ಕೆ ದಿನೇಶ್ ಗುಂಡೂರಾವ್ ಅವರ ಹೇಳಿಕೆ ಬಂದಿದೆ.
ಸಂವಿಧಾನ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಪತ್ರಿಕಾ ಸ್ವಾತಂತ್ರ್ಯವನ್ನು ಈ ತೀರ್ಮಾನದ ಮೂಲಕ ಧಿಕ್ಕರಿಸಲಾಗಿದೆ. "ಶಾಸಕರಿಗೆ ಇರುವ ವಿಶೇಷ ಅಧಿಕಾರದ ದುರುಪಯೋಗ ಇದು. ಈ ಕೂಡಲೇ ವಿಧಾನಮಂಡಲದ ತೀರ್ಪನ್ನು ವಾಪಸ್ ಪಡೆಯಬೇಕು" ಎನ್ನಲಾಗಿದೆ.
ಜೂನ್ ಇಪ್ಪತ್ತೆರಡರಂದು ವಿಧಾನಸಭೆ ಅಧ್ಯಕ್ಷ ಕೆಬಿ ಕೋಳಿವಾಡ ಅವರು, ಪತ್ರಕರ್ತರಾದ ರವಿ ಬೆಳಗೆರೆ ಹಾಗೂ ಅನಿಲ್ ರಾಜ್ ಎಂಬುವರಿಗೆ ಒಂದು ವರ್ಷ ಜೈಲು ಹಾಗೂ ಹತ್ತು ಸಾವಿರ ದಂಡ ವಿಧಿಸಿದ್ದರು. ಶಾಸಕರು ನೀಡಿದ್ದ ದೂರಿನ ಅನ್ವಯ ಹಕ್ಕು ಬಾಧ್ಯತಾ ಸಮಿತಿ ಈ ಶಿಕ್ಷೆಗೆ ಶಿಫಾರಸು ಮಾಡಿತ್ತು.
ಯಾವುದೇ ಪತ್ರಕರ್ತರಿಗೆ ಮಾನಹಾನಿ ಪ್ರಕರಣದಲ್ಲಿ ಶಿಕ್ಷೆ ವಿಧಿಸುವುದು ಕೋರ್ಟ್ ಗೆ ಬಿಟ್ಟಿದ್ದು. ಕರ್ನಾಟಕ ವಿಧಾನಮಂಡಲ ಅದಕ್ಕಿರುವ ವಿಶೇಷ ಹಕ್ಕನ್ನು ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳಬಾರದು ಹಾಗೂ ಯಾರ ವಿಚಾರಣೆ ನಡೆಸಿ, ಶಿಕ್ಷೆ ವಿಧಿಸಬಾರದು ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.












Click it and Unblock the Notifications