ಸಿದ್ದು ಸರಕಾರದಿಂದ ಮತ್ತೊಂದು ’ಭಾಗ್ಯ’ ಯೋಜನೆ
ಬೆಂಗಳೂರು, ಅ 21: ಅನ್ನಭಾಗ್ಯ, ಶಾದಿಭಾಗ್ಯ ಯೋಜನೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರದಿಂದ ಮತ್ತೊಂದು ಭಾಗ್ಯ ಯೋಜನೆ ಜಾರಿಗೆ ಬರಲಿದೆ. ಇದು ಆಹಾರ ಮತ್ತು ನಾಗರೀಕ ಇಲಾಖೆಗೆ ಸಂಬಂಧಪಟ್ಟ ಮತ್ತೊಂದು ಯೋಜನೆ.
ಒಂದು ರೂಪಾಯಿ ಅಕ್ಕಿಯ ಅನ್ನಭಾಗ್ಯ ಸ್ಕೀಮ್ ಫಲಾನುಭವಿಗಳಿಗಿಂತ 'ಉಳ್ಳವರೇ ಉಂಡಿದ್ದು ಹೆಚ್ಚು' ಎನ್ನುವ ಆರೋಪಗಳ ನಡುವೆ, ಆಹಾರ ಇಲಾಖೆ ನಕಲಿ ಬಿಪಿಎಲ್ ಕಾರ್ಡ್ ಹಾವಳಿ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದೆ.
ಇಲಾಖೆಗೆ ತಲೆನೋವಾಗಿ ಪರಿಣಮಿಸಿರುವ ನಕಲಿ ಕಾರ್ಡ್ ಹೊಂದಿರುವವರನ್ನು ಮಟ್ಟಹಾಕಲು ಇಲಾಖೆ 'ಬಹುಮಾನ ಭಾಗ್ಯ' ಯೋಜನೆ ಜಾರಿಗೆ ತರಲು ಮುಂದಾಗಿದೆ. (ಅನ್ನಭಾಗ್ಯ ಬಗ್ಗೆ ದೂರಿದ್ದರೆ ಕರೆ ಮಾಡಿ)
ನಕಲಿ ಕಾರ್ಡ್ ಹೊಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವ ಯೋಜನೆ ನವೆಂಬರ್ ತಿಂಗಳಾಂತ್ಯದೊಳಗೆ ಜಾರಿಗೆ ಬರಲಿದೆ ಎಂದು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ದಿನೇಶ್ ಗುಂಡೂರಾವ್, ಇನ್ನೊಂದು ತಿಂಗಳಲ್ಲಿ ನಕಲಿ ಕಾರ್ಡ್ ಹೊಂದಿರುವವರು ಇಲಾಖೆಗೆ ಕಾರ್ಡನ್ನು ವಾಪಸ್ ಮಾಡಿ, ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಿ ಎಂದು ಎಚ್ಚರಿಸಿದ್ದಾರೆ.
ನಕಲಿ ಕಾರ್ಡ್ ಹೊಂದಿರುವವರ ಬಗ್ಗೆ ಮಾಹಿತಿ ನೀಡುವವರಿಗೆ ನೀಡುವ ಬಹುಮಾನದ ಮೊತ್ತವನ್ನು ಬರುವ ತಿಂಗಳು ಪ್ರಕಟಿಸಲಾಗುವುದು. ಅನ್ನಭಾಗ್ಯ ಯೋಜನೆಯಡಿಯಲಿ ಫಲಾಲುಭವಿಗಳಿಗೆ ಮಾತ್ರ ಅಕ್ಕಿ ತಲುಪುವಂತಾಗಲು ಸಾರ್ವಜನಿಕರ ಸಹಕಾರ ಕೂಡಾ ಅವಶ್ಯ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅನ್ನಭಾಗ್ಯ ಯೋಜನೆಯಡಿಯ ಅಕ್ಕಿ ಮೂಟೆಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿದ್ದ ಹಲವು ಘಟನೆಗಳು ವರದಿಯಾಗುತ್ತಲೇ ಇವೆ. ಎರಡು ದಿನದ ಹಿಂದೆ ಬಿಜಾಪುರ ಜಿಲ್ಲೆ ಇಂಡಿ ತಾಲೂಕಿನಲ್ಲಿ ಗುಜರಾತಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 160 ಕ್ವಿಂಟಲ್ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. (ಮದ್ದೂರು ಲಕ್ಷ್ಮಮ್ಮನ ಹಸಿವು ನೀಗಿದ ಅನ್ನಭಾಗ್ಯ)
ಕಳೆದ ವರ್ಷ ಜುಲೈ ಹತ್ತರಂದು ಆರಂಭವಾದ ವಾರ್ಷಿಕ ಸುಮಾರು 4200 ಕೋಟಿ ವೆಚ್ಚದ 'ಅನ್ನಭಾಗ್ಯ' ಯೋಜನೆ 98 ಲಕ್ಷ ಜನ ಫಲಾಲುಭವಿಗಳನ್ನು ತಲುಪುವ ಗುರಿಯನ್ನು ಹೊಂದಿತ್ತು. ಇದರಲ್ಲಿ 86.89 ಲಕ್ಷ ಜನ ಬಿಪಿಎಲ್ ಕಾರ್ಡುದಾರರಾದರೆ 11.11 ಅಂತ್ಯೋದಯ ಅನ್ನ ಯೋಜನೆಯ ಕಾರ್ಡುದಾರರು.