ಡಿಕೆ ಶಿವಕುಮಾರ್ ಒಳಗಿಂದ ಮೊಳಗಿದ ಹಿಂದುತ್ವ: ಟೀಕೆ ಮಾಡಿದವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ರಾ ಡಿಸಿಎಂ
ಬೆಂಗಳೂರು, ಫೆಬ್ರವರಿ 28: ಈಶಾ ಫೌಂಡೇಶನ್ ಮಹಾಶಿವರಾತ್ರಿ ಕಾರ್ಯಕ್ರಮದಲ್ಲಿ ಡಿಸಿಎಂ ಉಪಮುಖ್ಯಮಂತ್ರಿ ಪಾಲ್ಗೊಂಡ ಬಳಿಕ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗಳು ಜೋರಾಗಿದೆ. ಡಿಕೆ ಶಿವಕುಮಾರ್ ಹಿಂದುತ್ವದ ನಡೆ ಹಾಗೂ ಮಾತುಗಳು ಕಾಂಗ್ರೆಸ್ನ ಕೆಲವರಲ್ಲಿ ತಳಮಳ ಸೃಷ್ಟಿಸಿದೆ. ಈಶಾ ಯೋಗ ಕೇಂದ್ರದಲ್ಲಿ ಮಹಾಶಿವರಾತ್ರಿಯಲ್ಲಿ ಪಾಲ್ಗೊಂಡ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು, "ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ ಎಂಬ ನಿಮ್ಮ ಹೇಳಿಕೆಯನ್ನು ಬಿಜೆಪಿಯವರು ಸ್ವಾಗತಿಸುತ್ತಿದ್ದಾರೆ.
ಈ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾನು ಬೇರೆ ಧರ್ಮಕ್ಕೆ ಯಾಕೆ ಹೋಗಲಿ. ನನಗೆ ಎಲ್ಲಾ ಧರ್ಮಗಳ ಬಗ್ಗೆ ಪ್ರೀತಿ ಇದೆ. ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಲಿ ಎಂಬುದನ್ನು ನಾನು ನಂಬಿದ್ದೇನೆ. ನಾವು ಇಂತಹ ಧರ್ಮದಲ್ಲೇ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡಿರಲಿಲ್ಲ. ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಹುಟ್ಟಿ ಬೌದ್ಧ ಧರ್ಮಕ್ಕೆ ಸೇರಿದರು. ಅದು ಅವರ ವೈಯಕ್ತಿಕ ನಿರ್ಧಾರ. ನನ್ನ ವಿಚಾರವನ್ನೂ ಎಲ್ಲರೂ ಚರ್ಚೆ ಮಾಡಲಿ ಬಿಡಿ ಎಂದರು.

ನಾನು ನೊಣವಿನಕೆರೆ ಮಠಕ್ಕೆ ಹೋಗುತ್ತೇನೆ. ಅದಕ್ಕೆ ನಮ್ಮವರು, 'ನೀವು ನಮ್ಮ ಮಠಕ್ಕೆ ಬರುವುದಿಲ್ಲ, ಅಲ್ಲಿಗೆ ಹೋಗುತ್ತೀರಲ್ಲಾ' ಎಂದು ಕೇಳುತ್ತಾರೆ. ನನ್ನ ನಂಬಿಕೆ ಇದ್ದ ಕಡೆ ನಾನು ಹೋಗುತ್ತೇನೆ. ನನಗೆ ಎಲ್ಲಿ ಒಳ್ಳೆಯದಾಗುತ್ತದೆ ಎಂದು ಅನಿಸುತ್ತದೆಯೋ ಅಲ್ಲಿಗೆ ಹೋಗುತ್ತೇನೆ. ನನ್ನ ನಂಬಿಕೆ ನನ್ನದು ಎಂದು ಹೇಳಿದರು. ನನ್ನ ಕ್ಷೇತ್ರದಲ್ಲಿ ನನಗೆ ಮತ ಹಾಕಿರುವವರಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಹೆಚ್ಚಾಗಿದ್ದಾರೆ. ನನ್ನ ಕ್ಷೇತ್ರದಲ್ಲಿ ಶೇಕಡಾ 99 ರಷ್ಟು ಬ್ರಾಹ್ಮಣ ಸಮುದಾಯದವರು ನನಗೆ ಮತ ಹಾಕುತ್ತಾರೆ. ಹೀಗಾಗಿ ಬ್ರಾಹ್ಮಣರೆಲ್ಲರೂ ಬಿಜೆಪಿಗೇ ಮತ ಹಾಕುತ್ತಾರೆ ಎಂದು ಹೇಳಲು ಸಾಧ್ಯವೇ? ನಾನು ಎಂದಿಗೂ ಜಾತಿ ಮೇಲೆ ರಾಜಕಾರಣ ಮಾಡುವುದಿಲ್ಲ. ನೀತಿ ಮೇಲೆ ರಾಜಕಾರಣ ಮಾಡುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಎಂದರೆ ಎಲ್ಲಾ ಧರ್ಮಗಳ ಸಮಾಗಮ. ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವುದು ನಮ್ಮ ಪಕ್ಷದ ಸಿದ್ಧಾಂತ. ನಾವು ಅಧಿಕಾರ, ಸ್ಥಾನಮಾನ ನೀಡುವಾಗ ಎಲ್ಲರನ್ನು ಪರಿಗಣಿಸಿಯೇ ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರದಲ್ಲಿದೆ. ಹಾಗೆಂದು ನಾವು ಧಾರ್ಮಿಕ ದತ್ತಿ ಇಲಾಖೆ ಮುಚ್ಚಿದ್ದೇವೆಯೇ? ಬಿಜೆಪಿ ಅಧಿಕಾರದಲ್ಲಿ ಇದ್ದಾಗ ವಕ್ಫ್ ಬೋರ್ಡ್ ಮುಚ್ಚಲಿಲ್ಲ ಯಾಕೆ? ಅವರು ಬೇರೆಯವರಿಗೆ ಟಿಕೆಟ್ ನೀಡದೆ ಇರಬಹುದು, ಆದರೆ ಕ್ರೈಸ್ತ ಅಭಿವೃದ್ಧಿ ಮಂಡಳಿ ಮುಚ್ಚಿದ್ದಾರಾ? ಇಲ್ಲ. ಇದಕ್ಕೆ ಕಾರಣ ನಮ್ಮ ಸಂವಿಧಾನ. ನಮ್ಮ ದೇಶದಲ್ಲಿ ಎಲ್ಲಾ ಧರ್ಮಕ್ಕೂ ಸಮಾನ ಅವಕಾಶ ನೀಡಲಾಗಿದೆ. ಅವರೆಲ್ಲ ಬೇರೆ ನೀರು ಕುಡಿಯಲು ಸಾಧ್ಯವೇ? ಈ ಭೂಮಿಗೆ, ಗಾಳಿಗೆ ಜಾತಿ, ಧರ್ಮದ ತಾರತಮ್ಯ ಇದೆಯೇ? ಎಂದು ಪ್ರಶ್ನಿಸಿದರು.
ಈ ಹಿಂದೆ ಎಸ್ ಎಂ ಕೃಷ್ಣ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಿದಾಗ ಚುನಾವಣೆ ಯಾತ್ರೆಗೆ 'ಪಾಂಚಜನ್ಯ' ಎಂದು ಹೆಸರು ಇಟ್ಟಿದ್ದೆವು. ಆಗ ಕೆಲವರು ಸೋನಿಯಾ ಗಾಂಧಿ ಅವರ ಬಳಿ ಹೋಗಿ ದೂರು ಕೊಟ್ಟರು. ಆದರೆ ಅವರು ಅದಕ್ಕೆ ತಡೆ ನೀಡಲಿಲ್ಲ. ಹಿಂದೂಗಳನ್ನು ಬಿಜೆಪಿ ಹಾಗೂ ಆರ್ ಎಸ್ ಎಸ್ ನವರಿಗೆ ಬಿಟ್ಟುಕೊಟ್ಟಿದ್ದೇವಾ? ದೇವರ ಹೆಸರು ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹಾಗೂ ನನ್ನ ಹೆಸರು ಬದಲಿಸಲು ಆಗುತ್ತದೆಯೇ? ನಮ್ಮ ನಾಯಕ ರಾಹುಲ್ ಗಾಂಧಿ ಅವರು ದೊಡ್ಡ ಶಿವಭಕ್ತರು. ಮುರುಘಾ ಮಠದಲ್ಲಿ ಅವರು ಲಿಂಗ ದೀಕ್ಷೆ ಸ್ವೀಕರಿಸಿದರು ಎಂದು ವಿವರಿಸಿದರು.
ಕುಂಭಮೇಳಕ್ಕೂ ಇದಕ್ಕೂ ಏನು ಸಂಬಂಧ? ನೀರಿಗೆ ಜಾತಿ, ಧರ್ಮ ಇದೆಯಾ? ಕುಂಭಮೇಳ, ಗಂಗಾ, ಕಾವೇರಿ ನಮ್ಮ ಪಾಲಿನ ಪವಿತ್ರ ನದಿಗಳು. ಮೊದಲಿನಿಂದಲೂ ಆಚರಣೆ ಮಾಡಿಕೊಂಡು ಬಂದಿರುವ ಪದ್ಧತಿ ಇದು. ಇದರಲ್ಲಿ ಯಾವುದೇ ರಾಜಕಾರಣ ಇಲ್ಲ. ಧರ್ಮ, ನಂಬಿಕೆ ವಿಚಾರದಲ್ಲಿ ರಾಜಕೀಯ ಬೆರೆಸುವುದು ಬೇಡ. ನಮ್ಮ ಸ್ಪೀಕರ್ ಸಹ ಕುಂಭಮೇಳಕ್ಕೆ ಹೋಗಬೇಕು ಎಂದು ಹೇಳಿದ್ದರು. ನಾನು ಕುಂಭ ಮೇಳದ ಆಯೋಜನೆಯನ್ನು ನೋಡಿಕೊಂಡು ಬಂದಿದ್ದೇನೆ. ನಾವು ಕಾವೇರಿ ಆರತಿ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಈ ಹಿನ್ನೆಲೆಯಲ್ಲೂ ಇದನ್ನು ಗಮನಿಸಿದ್ದೇನೆ ಎಂದು ತಿಳಿಸಿದರು.












Click it and Unblock the Notifications