ಟೊಯೋಟ ಹಗ್ಗ-ಜಗ್ಗಾಟ ಅಂತ್ಯ, ಇತರ ಜಿಲ್ಲಾಸುದ್ದಿಗಳು
ಬೆಂಗಳೂರು. ಏ 22 : ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆ ಮತ್ತು ಕಾರ್ಮಿಕರ ನಡುವಿನ ಹಗ್ಗ ಜಗ್ಗಾಟ ಕಡೆಗೂ ಅಂತ್ಯಗೊಂಡಿದ್ದು, ಮಂಗಳವಾರದಿಂದ ಮುಷ್ಕರ ಅಂತ್ಯಗೊಳಿಸಿ ಕೆಲಸಕ್ಕೆ ಮರಳಲು ಕಾರ್ಮಿಕರು ತೀರ್ಮಾನಿಸಿದ್ದಾರೆ. ಇದರಿಂದ 20ಕ್ಕೂ ಅಧಿಕ ದಿನದಿಂದ ನಡೆಯುತ್ತಿದ್ದ ಕಾರ್ಮಿಕರ ಮುಷ್ಕರ ಅಂತ್ಯಗೊಂಡಂತಾಗಿದೆ.
ರಾಮನಗರದ ಬಿಡದಿಯಲ್ಲಿರುವ ಟೊಯೋಟ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಆಡಳಿತ ಮಂಡಳಿ ಮತ್ತು 4 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಾರ್ಮಿಕರ ನಡುವೆ ಬಿಕ್ಕಟ್ಟು ತಲೆದೋರಿತ್ತು. ಸದ್ಯ ಅದು ತಾತ್ಕಾಲಿಕವಾಗಿ ಶಮನಗೊಂಡಿದೆ. ಸರ್ಕಾರ ಎಲ್ಲಾ ಘಟಕಗಳನ್ನು ತೆರೆದು ಉತ್ಪಾದನೆ ಆರಂಭಿಸುವಂತೆ ಕಾರ್ಖಾನೆಗೆ ಸೂಚನೆ ನೀಡಿದೆ. [ಲಾಕೌಟ್ ಘೋಷಿಸಿದ ಟೊಯೋಟಾ]
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದರು. ಕಾರ್ಮಿಕರ ಹೋರಾಟದಿಂದ ಅಸಮಾಧಾನಗೊಂಡ ಆಡಳಿತ ಮಂಡಳಿ ಲಾಕೌಟ್ ಘೋಷಿಸಿ ಕಾರ್ಮಿಕರಿಗೆ ಶಾಕ್ ನೀಡಿತ್ತು. ನಂತರ ಲಾಕೌಟ್ ತೆರವುಗೊಳಿಸಿದರೂ 30 ನೌಕರರ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಕಾರ್ಮಿಕರು ಕಾರ್ಖಾನೆ ಎದುರು ಅಹೋರಾತ್ರಿ ಧರಣಿ, ನಡೆಸುತ್ತಿದ್ದರು.

ಟೊಯೋಟಾ ಹಗ್ಗ ಜಗ್ಗಾಟ ಅಂತ್ಯ
ರಾಮನಗರದ ಬಿಡದಿಯಲ್ಲಿರುವ ಟೊಯೋಟ ಕಿರ್ಲೋಸ್ಕರ್ ಮೋಟಾರ್ ಕಾರ್ಖಾನೆಯಲ್ಲಿನ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವಿನ ಹಗ್ಗ ಜಗ್ಗಾಟ ಕಡೆಗೂ ಅಂತ್ಯಗೊಂಡಿದ್ದು, ಮಂಗಳವಾರದಿಂದ ಮುಷ್ಕರ ಅಂತ್ಯಗೊಳಿಸಿ ಕೆಲಸಕ್ಕೆ ಮರಳಲು ಕಾರ್ಮಿಕರು ತೀರ್ಮಾನಿಸಿದ್ದಾರೆ. ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದರು. ಇದರಿಂದ ಕಾರ್ಖಾನೆಯಲ್ಲಿ ಕಳೆದ 20ಕ್ಕೂ ಹೆಚ್ಚು ದಿನಗಳಿಂದ ಉತ್ಪಾದನೆಗೆ ಅಡಚಣೆ ಉಂಟಾಗಿತ್ತು.

ಅಹವಾಲು ಸಲ್ಲಿಸಲು ಅವಕಾಶ
ಬೀದರ್ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ವಿವಿಧ ತಾಲೂಕುಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದು, ಸಾರ್ವಜನಿಕರಿಂದ ಲಂಚಗುಳಿತನ, ದುರಾಡಳಿತ, ಕಾಮಗಾರಿಗಳಲ್ಲಿನ ಅವ್ಯವಹಾರ ಕುರಿತು ಅಹವಾಲುಗಳನ್ನು ಪಡೆಯಲಿದ್ದಾರೆ. ದೂರು ಸಲ್ಲಿಸಲು ಅವಶ್ಯಕವಾದ ಪ್ರಪತ್ರ 1 ಮತ್ತು 2 ಅರ್ಜಿ ನಮೂನೆಗಳನ್ನು ಸ್ಥಳದಲ್ಲಿಯೇ ನೀಡಲಾಗುತ್ತದೆ. ಏ.26 ರಂದು ಬಸವಕಲ್ಯಾಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಏ.28ರಂದು ಹುಮನಾಬಾದ್ ಪಟ್ಟಣದ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ, ಏ.29ರಂದು ಭಾಲ್ಕಿ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ, ಏ.30ರಂದು ಔರಾದ್(ಬಿ) ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ, ಏ.30 ರಂದು ಲೋಕಾಯುಕ್ತ ಕಚೇರಿ ಆವರಣದಲ್ಲಿ ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ.

ಮೊದಲ ಹಂತದ ಗಡಿ ಸರ್ವೆ ಪೂರ್ಣ
ಬಳ್ಳಾರಿಯಲ್ಲಿ ಕರ್ನಾಟಕ, ಆಂಧ್ರಪ್ರದೇಶಗಳ ನಡುವಿನ ಗಡಿ ಸರ್ವೆ ಕಾರ್ಯಕ್ಕೆ ಆಗಮಿಸಿದ್ದ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಮೊದಲ ಹಂತದ ಕಾರ್ಯವನ್ನು ಸೋಮವಾರ ಪೂರ್ಣಗೊಳಿಸಿದ್ದಾರೆ. ಎರಡನೇ ಹಂತದ ಗಡಿ ಗುರುತಿಸುವಿಕೆಯ ಕಾರ್ಯ ಏ.31ಕ್ಕೆ ಆರಂಭವಾಗಲಿದ್ದು, ಸರ್ವೇ ಉಪಕರಣಗಳೊಂದಿಗೆ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳು, ತಜ್ಞರು ಆಗಮಿಸಿ ಗಡಿ ಗುರುತಿಸುವಿಕೆ ಕಾರ್ಯ ನಡೆಸಲಿದ್ದಾರೆ. ಸೋಮವಾರ ಬಳ್ಳಾರಿ ತಾಲೂಕಿನ ತುಮಟಿ, ಹಲಕುಂದಿ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸರ್ವೆ ಕಾರ್ಯ ನಡೆಸಲಾಗಿದೆ.

ರಾಯಚೂರಿನಲ್ಲಿ ಕೃಷ್ಣೆಯ ಒಡಲು ಬರಿದು
ಬಸವಸಾಗರ (ನಾರಾಯಣಪುರ) ಜಲಾಶಯ ಸೇರಿದಂತೆ ಕೃಷ್ಣಾ ನದಿ ನೀರನ್ನು ಬಳಸಿಕೊಂಡು ಉತ್ಪಾದಿಸಲಾಗುತ್ತಿದ್ದ ಒಟ್ಟು 5 ಜಲ ವಿದ್ಯುತ್ ಉತ್ಪಾದನೆ ಘಟಕಗಳನ್ನು ನೀರಿನ ಅಭಾವದಿಂದ ಸ್ಥಗಿತಗೊಳಿಸಲಾಗಿದೆ. ಜಲಾಶಯದ ಎಡದಂಡೆ ಕಾಲುವೆಯ ಹತ್ತಿರ ನಿರ್ಮಿಸಿದ ಮುರುಡೇಶ್ವರ ಪವರ್ ಕಾರ್ಪೋರೇಷನ್ ಜಲಾಶಯದ ಹಿನ್ನೀರನ್ನು ಬಳಸಿಕೊಂಡು 11.60 ಮೆ.ವ್ಯಾ. ವಿದ್ಯುತ್ ಉತ್ಪಾದಿಸಲಾಗುತ್ತಿತ್ತು ಈ ಎರಡೂ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.











Click it and Unblock the Notifications