ಕರ್ನಾಟಕ ಜಿಲ್ಲಾ ಸುದ್ದಿಗಳತ್ತ ಒಂದು ನೋಟ
ಚಿತ್ರದುರ್ಗ, ಅ.೩೧: ರಾಜ್ಯ ಸರ್ಕಾರ ಚಿತ್ರದುರ್ಗದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಖಾಸಗಿ ವ್ಯಕ್ತಗಳಿಂದ ಹಣ ಪಡೆದ ಸಿಎಂ ಸಿದ್ದರಾಮಯ್ಯ ಕಾರ್ಖನೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಆರೋಪಿಸಿದ್ದಾರೆ.
ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾರಾಟ ಪ್ರಕ್ರಿಯ ನಿಲ್ಲಿಸುವಂತೆ ಒತ್ತಾಯಿಸಿ ಹಿರಿಯೂರು ತಾಲೂಕು ಜೆಡಿಎಸ್ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ,ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಒತ್ತಾಯಿಸಿದರು.
ಸುಮಾರು 270 ಎಕರೆ ವಿಶಾಲ ಭೂ ಪ್ರದೇಶವುಳ್ಳ ಕಾರ್ಖಾನೆಯನ್ನು ಕೇವಲ 30 ಕೋಟಿಯಷ್ಟು ಮೊತ್ತಕ್ಕೆ ಮೌಲ್ಯಮಾಪನ ಮಾಡಿ ಸರ್ಕಾರ ಮಾರಾಟ ಮಾಡಲು ಹೊರಟಿದೆ. ತಾಲೂಕಿನ ವಿವಿಧ ಭಾಗಗಳಲ್ಲಿ ರೈತರ ಭೂಮಿಯನ್ನು ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಹೆಸರಲ್ಲಿ ಅಗ್ಗದ ದರಕ್ಕೆ ವಶಪಡಿಸಿಕೊಳ್ಳಲಾಗಿದ್ದು, ಆ ನಂತರ ಖಾಸಗಿ ಅವರಿಗೆ ಮಾರಾಟ ಮಾಡಲು ಸರ್ಕಾರ ಹುನ್ನಾರ ನಡೆಸಿದೆ ಎಂದು ಕೃಷ್ಣಪ್ಪ ಆರೋಪಿಸಿದರು. (ಕರ್ನಾಟಕದ ಇತರ ಜಿಲ್ಲಾ ಸುದ್ದಿಗಳು)

ಸಕ್ಕರೆ ಕಾರ್ಖನೆ ಮಾರಾಟಕ್ಕೆ ವಿರೋಧ
ರಾಜ್ಯ ಸರ್ಕಾರ ಚಿತ್ರದುರ್ಗದ ವಾಣಿ ವಿಲಾಸ ಸಕ್ಕರೆ ಕಾರ್ಖಾನೆಯನ್ನು ಮಾರಾಟ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಖಾಸಗಿ ವ್ಯಕ್ತಗಳಿಂದ ಹಣ ಪಡೆದ ಸಿಎಂ ಸಿದ್ದರಾಮಯ್ಯ ಕಾರ್ಖನೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಆರೋಪಿಸಿದ್ದಾರೆ. ವಾಣಿ ವಿಲಾಸ ಸಹಕಾರಿ ಸಕ್ಕರೆ ಕಾರ್ಖಾನೆಯ ಮಾರಾಟ ಪ್ರಕ್ರಿಯ ನಿಲ್ಲಿಸುವಂತೆ ಒತ್ತಾಯಿಸಿ ಹಿರಿಯೂರು ತಾಲೂಕು ಜೆಡಿಎಸ್ ಘಟಕ ಬೃಹತ್ ಪ್ರತಿಭಟನೆ ನಡೆಸಿತು. ಸರ್ಕಾರ ಮಾರಾಟ ಪ್ರಕ್ರಿಯೆಯನ್ನು ತಕ್ಷಣ ನಿಲ್ಲಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ,ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಒತ್ತಾಯಿಸಿದರು.

ಅನ್ನಭಾಗ್ಯ ಅಕ್ಕಿ ವಶ
ಬಳ್ಳಾರಿ ನಗರದ ಹೊರವಲಯದಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 240 ಕ್ವಿಂಟಲ್ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಬೆಂಗಳೂರು ರಸ್ತೆಯಲ್ಲಿರುವ ಮುಂಡ್ರಿಗಿ ಕೈಗಾರಿಕಾ ಪ್ರದೇಶದಲ್ಲಿನ ಬಾಲಾಜಿ ಇಂಡಸ್ಟ್ರೀಸ್ಗೆ ಸೇರಿದ ಈ ಗೋದಾಮನ್ನು ಶ್ರೀನಿವಾಸ ಎಂಬುವವರು ಬಾಡಿಗೆಗೆ ಪಡೆದಿದ್ದರು. ಅವರ ವಿರುದ್ಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವು ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ತಂದಿದ್ದ ಅಕ್ಕಿಇರಬಹುದು ಎಂದು ಶಂಕಿಸಲಾಗಿದೆ. ಆದರೆ, ಸುಮಾರು 4.30 ಲಕ್ಷ ಮೌಲ್ಯದ ಈ ಅಕ್ಕಿಯನ್ನು ಸೂಕ್ತ ದಾಖಲೆಗಳಿಲ್ಲದೆ ಸಂಗ್ರಹಿಸಲಾಗಿತ್ತು.

ವಿದಾಯ್ ಗೆ ವಿರೋಧ
ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಿಗೆ ಮಾತ್ರ ಅನ್ವಯವಾಗುವಂತೆ 'ವಿದಾಯ್' ಹೆಸರಿನ ಶಾದಿ ಭಾಗ್ಯ ಯೋಜನೆ ಜಾರಿಗೊಳಿಸಿರುವುದನ್ನು ವಿಶ್ವ ಹಿಂದು ಪರಿಷತ್, ಬಜರಂಗದಳ ತೀವ್ರವಾಗಿ ಖಂಡಿಸಿವೆ. ಎಲ್ಲ ವರ್ಗ, ಜಾತಿಗಳ ಬಡ ಜನತೆಗೂ ಈ ಯೋಜನೆಯನ್ನು ವಿಸ್ತರಿಸಬೇಕು ಎಂದು ಒತ್ತಾಯಿಸಿವೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಿಶ್ವ ಹಿಂದೂ ಪರಿಷತ್ನ ಪ್ರಾಂತ್ಯ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ಅನ್ವಯಿಸುವಂತೆ ಜಾರಿಗೊಳಿಸಿದರೆ ಅದು ಜಾತ್ಯಾತೀತತೆ ಆಗುವುದಿಲ್ಲ. ಆದ್ದರಿಂದ ಎಲ್ಲಾ ವರ್ಗಗಳಿಗೂ ಇದನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಎಟಿಎಂ ದರೋಡೆ
ಎಟಿಎಂ ಯಂತ್ರ ಧ್ವಂಸಗೊಳಿಸಿರುವ ಡಕಾಯಿತರ ತಂಡ ಹಣ ಕಳ್ಳತನ ಮಾಡಿರುವ ಘಟನೆ ತುಮಕೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ಮುಂಜಾನೆ ನಡೆದಿದೆ. ಸರಸ್ವತಿಪುರಂನ ದೇವರಾಜ ರಸ್ತೆಯಲ್ಲಿರುವ ಇಂಡಿಕ್ಯಾಶ್ ಎಟಿಎಂನಲ್ಲಿ ಹಣವನ್ನು ಕಳ್ಳರು ಕದ್ದು, ಪರಾರಿಯಾಗಿದ್ದಾರೆ. 6-7 ಜನರ ತಂಡ ಎಟಿಎಂಗೆ ಬಂದು ಸಿಸಿಟಿವಿ ಧ್ವಂಸಗೊಳಿಸುರುವ ದೃಶ್ಯಗಳು ಸೆರೆಯಾಗಿವೆ. ಆದರೆ, ಎಟಿಎಂನಲ್ಲಿ ಎಷ್ಟು ಹಣವಿತ್ತು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಕಿ ಆಕಸ್ಮಿಕ
ರದ್ದಿ ಕಾಗದ ತುಂಬಿದ್ದ ಗೋಡನ್ಗೆ ಬೆಂಕಿ ಬಿದ್ದು ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಗುರುವಾರ ಬೆಳಗ್ಗೆ ಮೈಸೂರಿನ ಎನ್.ಆರ್.ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಪಿ.ವಿ.ರಸ್ತೆಯಲ್ಲಿದ್ದ ಭಾರತ್ ಟ್ರೇಡರ್ಸ್ ಗೆ ಸೇರಿದ ಗೋಡನ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿಕೊಂಡು ಸಂಪೂರ್ಣ ಸುಟ್ಟುಹೋಗಿವೆ. ಬೆಳಿಗ್ಗೆ 6.30ರ ಸಮಯದಲ್ಲಿ ಈ ಮಾರ್ಗವಾಗಿ ಹೋಗುತ್ತಿದ್ದ ಸಾರ್ವಜನಿಕರು ಗೋಡನ್ನಿಂದ ಹೊಗೆ ಬರುತ್ತಿರುವುದನ್ನು ಕಂಡು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ಜನತಾ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ
ಕಾನೂನು ಸಾಕ್ಷರತಾ ರಥದ ಮೂಲಕ ಜನತಾ ನ್ಯಾಯಾಲಯದಲ್ಲಿ ವಿವಿಧ ಬಗೆಯ 50 ಪ್ರಕರಣಗಳು ಇತ್ಯರ್ಥಗೊಂಡಿವೆ ಎಂದು ಹಾಸನ ಜಿಲ್ಲೆ ಅರಕಲಗೋಡು ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್ ಹೇಳಿದ್ದಾರೆ. ಜನತಾ ನ್ಯಾಯಾಲಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಮೀನು, ಚೆಕ್ ಬೌನ್ಸ್ ಇತರೆ ಪ್ರಕರಣಗಲ್ಲಿನ ಇಬ್ಬರು ವ್ಯಕ್ತಿಗಳನ್ನು ವಕೀಲರ ಮೂಲಕ ಆಹ್ವಾನಿಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.

ಚಾಮರಾಜನಗರದಲ್ಲಿ ಚಲನಚಿತ್ರೋತ್ಸವ
ಚಾಮರಾಜನಗರ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ. ಖಾಸಗಿಯಾಗಿ ಚಲನಚಿತ್ರೋತ್ಸವ ಸಮಿತಿ ರಚಿಸಿಕೊಂಡು ಈ ಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ನ. 8, 9 ಹಾಗೂ 10 ರಂದು ಮೂರು ದಿನಗಳ ಕಾಲ ಉತ್ಸವ ನಡೆಯಲಿದೆ. ಗಿರೀಶ್ ಕಾಸರವಳ್ಳಿ, ಟಿ.ಎಸ್. ನಾಗಾಭರಣ ಹಾಗೂ ಬರಗೂರು ರಾಮಚಂದ್ರಪ್ಪ ಅವರ ಅಯ್ದ ಚಿತ್ರಗಳು ನಗರದ ಸಿಂಹ ಮೂವೀ ಪ್ಯಾರಡೈಸ್ ಚಿತ್ರ ಮಂದಿರದಲ್ಲಿ ಪ್ರದ ರ್ಶನಗೊಳ್ಳಲಿವೆ. ಮೂರು ದಿನಗಳ ಕಾಲ ಪ್ರದರ್ಶನ ಗೊಳ್ಳುವ 9 ಚಿತ್ರಗಳಿಗೂ ಪ್ರವೇಶ ಉಚಿತ.

ಕಾಫಿ ಬೆಳೆಗಾರರ ಬೃಹತ್ ಸಮಾವೇಶ
ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟ 27 ವಸಂತಗಳನ್ನು ಪೂರೆಸಿದ ಹಿನ್ನೆಲೆಯಲ್ಲಿ ನ.22ರಂದು ಚಿಕ್ಕಮಗಳೂರಿನಲ್ಲಿ ಕಾಫಿ ಬೆಳೆಗಾರರ ಬೃಹತ್ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆ ಆಯೋಜಿಲಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಡಾ. ಎನ್.ಕೆ. ಪ್ರದೀಪ್ ಹೇಳಿದ್ದಾರೆ. ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಮಾವೇಶ ನಡೆಯಲಿದ್ದು ಕೇಂದ್ರ ಸಚಿವ ವೀರಪ್ಪಮೊಯ್ಲಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ, ಕಾಫಿ ಬೆಳೆಗಾರರ ಸಮಸ್ಯೆ ಕುರಿತಂತೆ ಸಮಾವೇಶದಲ್ಲಿ ಚರ್ಚೆ ನಡೆಯಲಿದೆ.












Click it and Unblock the Notifications