Karnataka Rain: ತಮಿಳುನಾಡಿಗೆ ಕಳೆದ ವರ್ಷ ಕರ್ನಾಟಕ ಹರಿಸಿದ ಹೆಚ್ಚುವರಿ ನೀರು ಎಷ್ಟು ಗೊತ್ತಾ?
ತಮಿಳುನಾಡು & ಕರ್ನಾಟಕ ನಡುವೆ ಕಾವೇರಿ ವಿವಾದ ನೂರಾರು ವರ್ಷದಿಂದಲೂ ಇದೆ. ಎರಡೂ ರಾಜ್ಯಗಳ ಮಧ್ಯೆ ನೀರಿಗೆ ಪ್ರತಿವರ್ಷ ಕಿತ್ತಾಟ ನಡೆಯುತ್ತಿದೆ. ಪರಿಸ್ಥಿತಿ ಕಠಿಣವಾದ ಸಂದರ್ಭದಲ್ಲೂ, ತನಗೆ ಕಷ್ಟವಿದ್ದರೂ ಕರ್ನಾಟಕ ಮಾತ್ರ ನೀರು ಹರಿಸಿದೆ. ಆದರೆ ಕಳೆದ ವರ್ಷ ಅಂದ್ರೆ 2022ರಲ್ಲಿ ತಮಿಳುನಾಡಿಗೆ ನಮ್ಮಿಂದ ಹರಿಸಿದ ಹೆಚ್ಚುವರಿ ನೀರಿನ ಪ್ರಮಾಣ ಎಷ್ಟು ಗೊತ್ತಾ? ಸ್ಫೋಟಕ ಮಾಹಿತಿ ಇಲ್ಲಿದೆ ತಿಳಿಯಿರಿ.
ಭಾರತದಲ್ಲಿ ಎಲ್ಲಾ ವಿಚಾರಕ್ಕೂ ರಾಜಕೀಯವನ್ನೇ ಎಳೆದು ತರುತ್ತಾರೆಂಬ ಆರೋಪವಿದೆ. ಅದರಲ್ಲೂ ತಮಿಳುನಾಡಿನ ರಾಜಕೀಯ ನಿಂತಿರುವುದೇ ಕಾವೇರಿ ವಿವಾದದ ಮೇಲೆ. ಹೀಗೆ ವರ್ಷದಿಂದ ವರ್ಷಕ್ಕೆ ರಾಜಕೀಯದ ಕಾರಣಕ್ಕೆ ತಮಿಳುನಾಡು ಮತ್ತು ಕರ್ನಾಟಕದ ಸ್ನೇಹ ಹಳಸುತ್ತಾ ಸಾಗುತ್ತಿದೆ. ಅದ್ರಲ್ಲೂ ಕರ್ನಾಟಕದಲ್ಲಿ ಮಳೆ ಬರದೇ ಇದ್ದರೂ ಕಾವೇರಿ ನೀರು ಬಿಡಲೇಬೇಕು ಎಂಬ ಕಟ್ಟಪ್ಪಣೆ ಕನ್ನಡಿಗರನ್ನ ಆಗಾಗ ರೊಚ್ಚಿಗೆಬ್ಬಿಸುತ್ತೆ. ಕರ್ನಾಟಕದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗಿ ಪರಿಸ್ಥಿತಿ ಸುಧಾರಿಸಿದೆ, ಅಕಸ್ಮಾತ್ ಈ ವರ್ಷವೂ ಬರ ಎದುರಾಗಿದ್ದರೆ ತಮಿಳುನಾಡು & ಕರ್ನಾಟಕದಲ್ಲಿ ಕಿಚ್ಚು ಹಚ್ಚುವ ಭಯ ಕಾಡಿತ್ತು. ಇನ್ನು 2022ರಲ್ಲಿ ಕರ್ನಾಟಕ ತಮಿಳುನಾಡಿಗೆ ಎಷ್ಟು ಹೆಚ್ಚುವರಿ ನೀರು ಹರಿಸಿದೆ ಗೊತ್ತಾ?

ತಮಿಳುನಾಡಿಗೆ ಕರ್ನಾಟಕದಿಂದ ಬಂಪರ್!
1) ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿರುವ ಅತಿದೊಡ್ಡ ಅಣೆಕಟ್ಟುಗಳಲ್ಲಿ ಒಂದಾದ ಮೆಟ್ಟೂರು ಡ್ಯಾಂ ತಮಿಳುನಾಡಿನ ಜೀವನಾಡಿ. ಕರ್ನಾಟಕದಲ್ಲಿ ನೀರು ಬಿಡುಗಡೆಯಾದರೆ ಮೆಟ್ಟೂರು ಡ್ಯಾಂನಲ್ಲಿ ಶೇಖರಣೆ ಆಗುತ್ತದೆ. ಕಳೆದ ವರ್ಷ ಇಲ್ಲಿ ಭಾರಿ ಮಳೆಯಾಗಿ ಕರ್ನಾಟಕ ಎಷ್ಟು ಪ್ರಮಾಣದಲ್ಲಿ ಹೆಚ್ಚುವರಿ ನೀರು ಹರಿಸಿತ್ತು ಗೊತ್ತಾ?
2) ಕಳೆದ ವರ್ಷ ಅಂದರೆ 2022ರಲ್ಲಿ ಕರ್ನಾಟಕ ಬರೋಬ್ಬರಿ 472.6 ಟಿಎಂಸಿ ನೀರನ್ನು ಕರ್ನಾಟಕದಿಂದ ಹೆಚ್ಚುವರಿಯಾಗಿ ಬಿಡಲಾಗಿತ್ತು. ಈ ಮೂಲಕ ಒಟ್ಟು 682 ಟಿಎಂಸಿ ನೀರನ್ನು ಹೊರಬಿಡಲಾಗಿತ್ತು. ಹೀಗಾಗಿ ಕಳೆದ ವರ್ಷ ತಮಿಳುನಾಡಿಗೆ ಬಂಪರ್ ನೀರು ಸಿಕ್ಕಿತ್ತು.

3) ಕಳೆದ ವರ್ಷ ಮುಂಗಾರು (Mansoon Rain) ಅಬ್ಬರದಿಂದ, ಮೆಟ್ಟೂರು ಡ್ಯಾಂನಿಂದ 472.6 ಟಿಎಂಸಿ ಹೆಚ್ಚುವರಿ ನೀರನ್ನು ಹೊರಬಿಡಲಾಗಿತ್ತು. 62 ವರ್ಷದ ನಂತರ ಇಷ್ಟೊಂದು ಪ್ರಮಾಣದಲ್ಲಿ ನೀರನ್ನು ಹೊರಬಿಟ್ಟಿದ್ದು, ಗಮನ ಸೆಳೆದಿತ್ತು. 1961ರಲ್ಲಿ 321 ಟಿಎಂಸಿ ನೀರನ್ನು ಬಿಡಲಾಗಿತ್ತು. ಹೀಗೆ ನೂರಾರು ಟಿಎಂಸಿ ನೀರು ವ್ಯರ್ಥವಾಗಿ ತಮಿಳುನಾಡು ಮೂಲಕ ಸಮುದ್ರ ಸೇರಿತ್ತು.
4) ಮೆಟ್ಟೂರು ಡ್ಯಾಂ ಮೂಲಕ ರಿಲೀಸ್ ಆಗುವ ನೀರು ಈರೋಡ್ ಸೇರಿದಂತೆ ತಿರುಚ್ಚಿ & ತಿರುವರೂರ್, ನಾಗಪಟ್ಟಣಂ, ಕಡಲೂರು, ಕರೂರ್, ಪೆರಂಬಲೂರು, ತಂಜಾವೂರು ಮತ್ತು ಪುದುಕ್ಕೊಟ್ಟೈ ಜಿಲ್ಲೆಗಳ ಕೃಷಿಭೂಮಿಗಳನ್ನು ಹಸಿರಾಗಿಸುತ್ತದೆ. ಹೀಗಾಗಿಯೇ ಇದೀಗ ಮೆಟ್ಟೂರು ಡ್ಯಾಂನಿಂದ ನೀರು ಹೊರಬಿಡಲಾಗುತ್ತಿದೆ.
5) ಮೆಟ್ಟೂರು ಡ್ಯಾಂನ ಒಟ್ಟಾರೆ 89 ವರ್ಷಗಳ ಇತಿಹಾಸದಲ್ಲಿ 1961ರಲ್ಲಿ ರಿಲೀಸ್ ಆಗಿದ್ದ 321 ಟಿಎಂಸಿ ಹಿಂದಿನ ದಾಖಲೆ ಆಗಿತ್ತು. ಆದರೆ ಕಳೆದ ವರ್ಷ ಆ ದಾಖಲೆ ಮುರಿದಿತ್ತು. 1 ವರ್ಷದ ನಂತರ ನೀರಿಗಾಗಿ ಮತ್ತೆ ಕಾದಾಟ ಶುರುವಾಗಿದೆ.
6) ತಮಿಳುನಾಡಿನ ಧರ್ಮಪುರಿ ಜಿಲ್ಲೆಯಲ್ಲಿ ಕಾವೇರಿ ನದಿಗೆ ಅಡ್ಡವಾಗಿ ಕಟ್ಟಿರುವ ಮೆಟ್ಟೂರು ಡ್ಯಾಂನ ಒಟ್ಟು ಸಾಮರ್ಥ್ಯ 120. ಇಲ್ಲಿ 93.47 ಟಿಎಂಸಿ ನೀರು ಸಂಗ್ರಹಿಸಬಹುದಾಗಿದ್ದು, ಇದೀಗ ಮೆಟ್ಟೂರು ಜಲಾಶಯದಲ್ಲಿ 63.5 ಟಿಎಂಸಿ ನೀರಿದ್ದು, 10,000 ಕ್ಯುಸೆಕ್ ನೀರನ್ನ ಹೊರಗೆ ಬಿಡಲಾಗುತ್ತಿದೆ. ಒಳಹರಿವು 454 ಕ್ಯುಸೆಕ್ ಇದ್ದು, ಈ ಬಾರಿ ಕರ್ನಾಟಕದ ಜೊತೆ ತಮಿಳುನಾಡು ಮತ್ತೆ ನೀರಿಗಾಗಿ ಕಿರಿಕ್ ತೆಗೆಯುತ್ತಾ? ಅನ್ನೋ ಅನುಮಾನ ಕಾಡುತ್ತಿದೆ.
ಮೇಕೆದಾಟು ಡ್ಯಾಂನಿಂದ ಪ್ರಾಬ್ಲಂ ಕ್ಲಿಯರ್!
1) ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಮಳೆಗಾಲದಲ್ಲಿ ಸುಮ್ಮನೆ ವ್ಯರ್ಥವಾಗುತ್ತಿರುವ ನೀರನ್ನು, ಕರ್ನಾಟಕ & ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗೆ ಬಳಸಿಕೊಳ್ಳಲು ಸಾಧ್ಯ.
2) ಮೇಕೆದಾಟು ಜಲಾಶಯದಲ್ಲಿ ನೀರು ಸಂಗ್ರಹವಾದರೆ 65-66 ಟಿಎಂಸಿ ಹೆಚ್ಚುವರಿ ನೀರು ತಮಿಳುನಾಡಿಗೆ ಹರಿದು ಸಮುದ್ರದ ಪಾಲಾದಂತೆ ತಡೆಯಬಹುದು. ಇದ್ರಿಂದ ತಮಿಳುನಾಡು ಕೂಡ ಉಪಯೋಗ ಪಡೆಯಲಿದೆ.
3) ಬೆಂಗಳೂರು ಸುತ್ತಮುತ್ತ ಕುಡಿಯುವ ನೀರು ಒದಗಿಸುವ ಜೊತೆಗೆ, ಕರ್ನಾಟಕಕ್ಕೂ ಅಗತ್ಯ ಇರುವ ವಿದ್ಯುತ್ ಉತ್ಪಾದನೆಗೆ ಸಹಕಾರಿ. ಹಾಗೇ ತಮಿಳುನಾಡು ಕೂಡ ಇದರಿಂದ ಲಾಭ ಪಡೆಯಬಹುದು.
4) ಮೇಕೆದಾಟು ಯೋಜನೆ ಪೂರ್ಣಗೊಂಡರೆ ಬೆಂಗಳೂರು ಹೊರವಲಯದಲ್ಲಿ ನೀರಿನ ಸಮಸ್ಯೆ ಬಹುತೇಕ ಶಮನ. ಮೇಕೆದಾಟು ಯೋಜನೆ ಬರದಲ್ಲಿ ಬೆಂದು ಹೋಗಿರುವ ರಾಮನಗರ ಜಿಲ್ಲೆಗೂ ವರ ನೀಡಬಲ್ಲದು ಎಂಬ ವಿಶ್ವಾಸ.
5) ರಾಮನಗರ ಸುತ್ತಮುತ್ತಲ ಭಾಗದಲ್ಲಿ ಅಂತರ್ಜಲ ಬತ್ತಿ ಹೋಗುತ್ತಿದೆ, ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಅಂತರ್ಜಲ ಮಟ್ಟ ಏರಿಕೆ. ಅನಿಶ್ಚಿತ ಮಳೆ ಕಾರಣ ರಾಮನಗರ & ಬೆಂಗಳೂರು ಹೊರವಲಯದ ರೈತರಲ್ಲಿರುವ ಆತಂಕವನ್ನು ಮೇಕೆದಾಟು ಡ್ಯಾಂ ದೂರ ಮಾಡುತ್ತದೆ.
ಹೀಗೆ ಕಳೆದ ವರ್ಷ ಒಂದೇ ಬಾರಿ 400 ಟಿಎಂಸಿಗೂ ಹೆಚ್ಚು ನೀರು ವ್ಯರ್ಥವಾಗಿದೆ. ಅದೇ ಮೇಕೆದಾಟು ಜಲಾಶಯ ನಿರ್ಮಾಣವಾಗಿದ್ದರೆ, ಮಳೆ ನೀರು ವ್ಯರ್ಥವಾಗಿ ಹೋಗುವುದನ್ನ ತಪ್ಪಿಸಬಹುದಿತ್ತು. ಹೀಗಾಗಿ ಕರ್ನಾಟಕ ಕೂಡ ನಮ್ಮ ನೆಲದಲ್ಲಿ ಮೇಕೆದಾಟು ಬಳಿ ಡ್ಯಾಂ ಕಟ್ಟಲು ಪಣತೊಟ್ಟಿದೆ. ಇದನ್ನ ಅರ್ಥ ಮಾಡಿಕೊಂಡೂ ತಮಿಳುನಾಡು ರಾಜಕಾರಣಿಗಳು ಸುಖಾಸುಮ್ಮನೆ ಕಿರಿಕ್ ಮಾಡ್ತಾ ಇದ್ದಾರೆ ಆನ್ನೋ ಆರೋಪ ಕೇಳಿಬರುತ್ತಿದೆ. ಅಲ್ಲದೆ ಇದೇ ವಿಚಾರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು ಎಂದು ಕರ್ನಾಟಕ ಆಗ್ರಹಿಸಿದೆ.












Click it and Unblock the Notifications