Dharmasthala: ದೇವರ ಹೆಸರಿನಲ್ಲಿ ಬಡ್ಡಿ ದಂಧೆ: ಧರ್ಮಸ್ಥಳ ಸಂಘದ ಮೇಲೆ ಗಂಭೀರ ಆರೋಪ
ಕರ್ನಾಟಕದಲ್ಲಿ ಅತಿ ಹೆಚ್ಚು ಶಿವ ಭಕ್ತರು ಭೇಟಿ ನೀಡುವ ದೇವಸ್ಥಾನ ಧರ್ಮಸ್ಥಳ. ಇದೀಗ ಈ ಧರ್ಮಸ್ಥಳದ ದೇವರ ಹೆಸರಿನಲ್ಲಿ ಬಡ್ಡಿ ದಂಧೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಧರ್ಮಸ್ಥಳದ ಸಂಘ ದೇವರ ಹೆಸರಿನಲ್ಲಿ ಬಡ್ಡಿ ವ್ಯವಹಾರ ಮಾಡುತ್ತಿದೆ. ಈ ಮೂಲಕ ಸಾಕಷ್ಟು ಹಣ ಮಾಡುತ್ತಿದೆ ಎಂದು ವಕೀಲರಾದ ಪುಟ್ಟೇಗೌಡ ಆರೋಪ ಮಾಡಿದ್ದಾರೆ.
ಹೌದು.. ದಕ್ಷಿಣ ಕನ್ನಡ ಜಿಲ್ಲೆಯ ಶಿವನನ್ನು ಆರಾಧಿಸುವ ಪವಿತ್ರ ಧರ್ಮಸ್ಥಳದಲ್ಲಿ ಗಂಭೀರ ಆರೋಪವೊಂದು ಕೇಳಿ ಬಂದಿದೆ. ನಿತ್ಯ ನೂರಾರು ಜನ ಭಕ್ತರು ಭೇಟಿ ನೀಡುವ ಧರ್ಮಸ್ಥಳ ಮಂಜುನಾಥನ ದೇವನಸ್ಥಾನದ ಸಂಘ ದೇವರ ಹೆಸರಿನಲ್ಲಿ ಬಡ್ಡಿ ದಂಧೆ ಮಾಡುತ್ತಿದೆ ಎಂದು ದೂರಲಾಗಿದೆ.

ಧರ್ಮಸ್ಥಳ ಸಂಘದ ಮೇಲೆ ಗಂಭೀರ ಆರೋಪ
ಧರ್ಮಸ್ಥಳದಲ್ಲಿ ಸ್ತ್ರೀ ಶಕ್ತಿ ಸಂಘಗಳನ್ನು ಮಾಡಿಕೊಂಡು ಹೆಣ್ಣು ಮಕ್ಕಳಿಗೆ ಮೈಕ್ರೋ ಫೈನಾನ್ಸ್ ಮಾಡಿಕೊಂಡು ಸಾಲ ಕೊಡುವ ಸಂಘಗಳು ಮೋಸ ಮಾಡುತ್ತಿವೆ. ಈ ಸಂಘಗಳು ಆರ್ಬಿಐ ನೀತಿಗಳನ್ನು ಬದಿಗೊತ್ತು ಹಣ ಮಾಡುತ್ತಿವೆ. ಇಪ್ಪತ್ತು ಜನರ ಗುಂಪು ಮಾಡಿ, ತಲಾ 50 ಸಾವಿರದಂತೆ ಹತ್ತು ಲಕ್ಷ ಸಾಲವನ್ನು ನೀಡಿ ಒಬ್ಬರ ಹೆಸರಿನಲ್ಲಿ ಹತ್ತು ಲಕ್ಷ ಸಾಲ ತೋರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಆರ್ಬಿಐ ನಿಯಮದ ಪ್ರಕಾರ ಹಣದ ವ್ಯವಹಾರ ಮಾಡುವವರು ಬಿಲ್ಗಳನ್ನು ಕೊಡಬೇಕು. ಆದರೆ ಸರ್ಕಾರದ ತೆರಿಗೆಯಿಂದ ಪಾರಾಗಲು ಹಣ ಕೊಡುವಾಗ ಅಕೌಂಟ್ ಮೂಲಕ ನೀಡಿ, ಹಣ ಪಡೆಯುವಾಗ ನೇರವಾಗಿ ಹಣವನ್ನು ಪಡೆಯುತ್ತಿದ್ದಾರೆ. ಧರ್ಮಸ್ಥಳ ಸಂಘ ಆರ್ಬಿಐ ನಿಯಮಗಳನ್ನು ಉಲ್ಲಂಘಿಸಿ ಹಣವನ್ನು ಪಡೆಯುತ್ತಿದೆ ಎಂದು ದೂರಲಾಗಿದೆ.

ಒಂದು ಸಂಘಕ್ಕೆ ಹತ್ತು ಲಕ್ಷ ಸಾಲವನ್ನು ನೀಡಿ ಅದನ್ನು ಮರು ಪಡೆಯುವಾಗ ಮಾತ್ರ ನೇರವಾಗಿ ಹಣವನ್ನು ಪಡೆಯುತ್ತಿದ್ದಾರೆ. ಇದೇ ರೀತಿ ಕರ್ನಾಟಕದಾದ್ಯಂತ ಈ ಸಂಘಗಳು ಹಣ ಮಾಡುತ್ತಿವೆ. ಸರ್ಕಾರದ ತೆರಿಗೆ ತಪ್ಪಿಸಿ ಲಕ್ಷ ಕೋಟಿ ಹಣ ಕೊಳ್ಳೆ ಹೊಡೆಯುತ್ತಿದ್ದಾರೆ. ಇದನ್ನು ಸರ್ಕಾರ ಪ್ರಶ್ನೆ ಮಾಡುತ್ತಿಲ್ಲ. ದೇವರ ಹೆಸರಿನಲ್ಲಿ ನಡೆಯುವ ದಂಧೆಯನ್ನು ಕಂಡಿದ್ದು ಕುರುಡಾಗಿದೆ ಎಂದು ವಕೀಲರಾದ ಪುಟ್ಟೇಗೌಡ ಆರೋಪ ಮಾಡಿದ್ದಾರೆ.
ಸರ್ಕಾರದಿಂದ ತೆರಿಗೆ ವಂಚನೆ
ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿ, ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿ ಯಾವುದೇ ದಾಖಲಾತಿಗಳು ಇಲ್ಲದೆ ವ್ಯವಹಾರಗಳನ್ನು ಮಾಡಿಕೊಂಡು ಹಣ ಕೊಳ್ಳೆ ಹೊಡೆಯಲಾಗುತ್ತಿದೆ. ಕೋರ್ಟ್ಗೆ ಹೋಗಿ ದೂರು ನೀಡೋಣ ಅಂದರೆ ಒಬ್ಬರ ಬಳಿಯೂ ಒಂದು ದಾಖಲಾತಿಗಳು ಇಲ್ಲ. ದುಡ್ಡನ್ನು ಕಟ್ಟಿದ ಮೇಲೆ ಯಾವುದೇ ಬುಕ್ ಅಲ್ಲಿ ನಮೋದಿಸಲಾಗುವುದಿಲ್ಲ. ರಸೀದಿ ಕೂಡ ನೀಡುವುದಿಲ್ಲ.
ವಾರದ ಕಂತಿನ ಮೇಲೆ ಬಡ್ಡಿ, ಚಕ್ರಬಡ್ಡಿ ಹಾಕಿ ಧರ್ಮಸ್ಥಳ ಸಂಘ ಹಣ ಕೊಳ್ಳೆ ಹೊಡೆಯುತ್ತಿದೆ ಎಂದು ಪುಟ್ಟೇಗೌಡ ಆರೋಪಿಸಿದ್ದಾರೆ. ಇಷ್ಟು ಮಾತ್ರವಲ್ಲ ಒಬ್ಬ ಸಾಲ ಪೂರೈಸದೇ ಇದ್ದರೆ ಆ ಸಾಲ ಪಡೆದ ಗುಂಪಿನಲ್ಲಿರುವ ಎಲ್ಲಾ ಜನರು ಸೇರಿಕೊಂಡು ಆ ಸಾಲವನ್ನು ಕಟ್ಟಬೇಕು. ಬೆಳಿಗ್ಗೆ ಏಳು ಗಂಟೆಗೆ ದುಡ್ಡು ವಸೂಲಿ ಮಾಡ್ತಾರೆ. ಇದು ಯಾವ ಕಾನೂನು? ಯಾವ ಕಾನೂನು ಹೀಗೆಂದು ಹೇಳುತ್ತದೆ ಎಂದು ಪುಟ್ಟೇಗೌಡ ಪ್ರಶ್ನೆ ಮಾಡಿದ್ದಾರೆ.
ಆರ್ಬಿಐ ನಿಯಮಗಳನ್ನು ಗಾಳಿಗೆ ತೂರಿದ ಧರ್ಮಸ್ಥಳ ಸಂಘ
ಆರ್ಬಿಐ ಹೇಳುವ ಪ್ರಕಾರ, ಒಬ್ಬ ವ್ಯಕ್ತಿ ಆದಾಯ ನೋಡಿಕೊಂಡು ಅವನ ಆದಾಯದ ಅರ್ಧದಷ್ಟು ಸಾಲ ಕೊಡಲು ಹೇಳುತ್ತದೆ. ಬ್ಯಾಂಕ್ ಅಲ್ಲಿ ಸಾಲ ಪಡೆದರೂ ಕೂಡ ಆದಾಯಕ್ಕೆ 50% ಅಷ್ಟೇ ಸಾಲ ಇರಬೇಕು. ಆದರೆ ಇಲ್ಲಿ ಆದಾಯವೇ ಇಲ್ಲದ ಹೆಣ್ಣುಮಕ್ಕಳಿಗೆ ಸಾಲವನ್ನು ನೀಡಿ, ವ್ಯವಸಾಯ ಮಾಡುವ ಹೆಣ್ಣು ಮಕ್ಕಳಿಗೆ ಸಾಲ ನೀಡಿ ಜನರ ರಕ್ತವನ್ನು ಹೀರುತ್ತಿದ್ದಾರೆ.
ಆ ದೇವರ ಹೆಸರಿನಲ್ಲಿ ಮಾಡುವ ಬಡ್ಡಿ ದಂಧೆಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸೂಕ್ತ ತನಿಖೆ ಆಗಬೇಕು. ಬಡವರ ರಕ್ತ ಹೀರುವ ತಿಗಣೆಗಳಿಗೆ ಪಾಠ ಕಲಿಸಬೇಕು ಎಂದು ವಕೀಲರಾದ ಪುಟ್ಟೇಗೌಡ ಒತ್ತಾಯಿಸಿದ್ದಾರೆ.












Click it and Unblock the Notifications