ಧರ್ಮಗುರುಗಳು ಹಿಂಸೆಯಿಂದ ಧರ್ಮದೆಡೆಗೆ ಮನ ಪರಿವರ್ತಿಸಬೇಕು: ಸಿಎಂ ಬೊಮ್ಮಾಯಿ
ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಭಯೋತ್ಪಾದನೆ ನಡೆಯುತ್ತಿದೆ. ಹೀಗಾಗಿ ಧರ್ಮ ಗುರುಗಳು ಹಿಂಸಿಸುವವರ ಮನ ಪರಿವರ್ತಿಸಿ ಧರ್ಮದೆಡೆಗೆ ಬರುವಂತೆ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಚಿಕ್ಕಮಗಳೂರು, ಮಾರ್ಚ್ 05: ಇಂದಿನ ಸನ್ನಿವೇಶದಲ್ಲಿ ಧರ್ಮದ ಹೆಸರಿನಲ್ಲಿ ಹಿಂಸೆ ಹಾಗೂ ಭಯೋತ್ಪಾದನೆ ನಡೆಯುತ್ತಿದೆ. ಇಂತಹ ಕುಕೃತ್ಯದಲ್ಲಿ ತೊಡಗಿರುವ ಜನರ ಮನವನ್ನು ಹಿಂಸೆಯಿಂದ ಧರ್ಮದೆಡೆಗೆ ಬರುವಂತೆ ಮನ ಪರಿವರ್ತನೆ ಮಾಡಬೇಕು. ಅದು ಧರ್ಮಗುರುಗಳಿಂದ ಮಾತ್ರವೇ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರ ನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಹಾಗೂ 51 ಅಡಿ ಎತ್ತರದ ರೇಣುಕಾಚಾರ್ಯ ಅವರ ಮೂರ್ತಿ ಕಾರ್ಯಾರಂಭಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಉತ್ತರ ಭಾರತದಲ್ಲಿ ಕಾಶಿ ಕ್ಷೇತ್ರವಿದ್ದಂತೆ, ದಕ್ಷಿಣದಲ್ಲಿ ರಂಭಾಪುರಿ ಇದೆ. ಶ್ರೀ ಜಗದ್ಗುರು ರೇಣುಕಾಚಾರ್ಯರ ತತ್ವಾದರ್ಶ, ಸಂಸ್ಕಾರ, ಸಂಸ್ಕೃತಿಗಳು ನಮ್ಮೆಲ್ಲರ ಭವ್ಯ ಭವಿಷ್ಯಕ್ಕೆ ಭದ್ರ ಬುನಾದಿ. ಆತ್ಮಸಾಕ್ಷಿಯಂತೆ, ಸತ್ಯದ ದಾರಿಯಲ್ಲಿ ನಡೆದುಕೊಳ್ಳುವವರು ನಿಜವಾದ ಮಾನವರು. ಸಿದ್ಧಾರ್ಥ ಶಿಖಾಮಣಿಯ ವಿಧಿವಿಧಾನಗಳು ಮನಸ್ಸನ್ನು ಹತೋಟಿಯಲ್ಲಿರಿಸಲು ದಾರಿ ತೋರುತ್ತದೆ. ಇವೆರಡನ್ನೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಜಾತಿಮತಗಳ ಭೇದಗಳನ್ನು ತೊಡೆದು ಹಾಕಲು ಹಾಗೂ ಸಮಾಜದಲ್ಲಿ ಸಾಮರಸ್ಯ ನೆಲೆಸಲು ನಿರಂತರವಾದ ಅಭಿಯಾನ ಕೈಗೊಳ್ಳುತ್ತಿದ್ದಾರೆ ಎಂದು ಬೊಮ್ಮಾಯಿ ರಂಭಾಪುರಿ ಶ್ರೀಗಳು ಕಾರ್ಯವನ್ನು ಹೊಗಳಿದರು.
ಧಾರ್ಮಿಕ ಕ್ಷೇತ್ರ ಅಭಿವೃದ್ಧಿ
ಧರ್ಮದ ವಿಚಾರಗಳನ್ನು ಜಾಗೃತಗೊಳಿಸುವಲ್ಲಿ ಶ್ರೀ ಜಗದ್ಗುರುಗಳು ಬಹುಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಜಾತಿಮತ ಬೇಧವಿಲ್ಲದೇ ರಂಭಾಪುರಿ ಪೀಠದ ಅಭಿವೃದ್ಧಿಗಾಗಿ ಅನುದಾನ, ಕಾಗಿನೆಲೆ ಗುರುಪೀಠ ಅಭಿವೃದ್ಧಿ ಪ್ರಾಧಿಕಾರ, ಕನಕದಾಸರ ಹುಟ್ಟೂರಾದ ಬಾಡಾ ಅಭಿವೃದ್ಧಿ, ಹಜ್ ಭವನಕ್ಕೆ 40 ಕೋಟಿ ಅನುದಾನ ನೀಡಿದ್ದಾರೆ. ಮಠಮಾನ್ಯಗಳು ಶಿಕ್ಷಣ, ಅನ್ನ ದಾಸೋಹ, ಆಶ್ರಯಾದಿಗಳನ್ನು ನೀಡಿ, ರಾಜ್ಯದ ಅಭಿವೃದ್ಧಿಗೆ ಕಾರಣವಾಗಿವೆ ಎಂದು ಅವರು ವಿವರಿಸಿದರು.

ಧರ್ಮದಿಂದ ವಿಶ್ವಶಾಂತಿ ಎಂದು ಅರಿಯಬೇಕು
ಧರ್ಮದಿಂದಲೇ ವಿಶ್ವಶಾಂತಿ ಎಂಬುದನ್ನು ಎಲ್ಲರೂ ಅರಿಯಬೇಕು. ಸಮಾನ ಅವಕಾಶಗಳನ್ನು ನೀಡುವ ಸಮಾಜ ನಿರ್ಮಾಣ ಮಾಡೋಣ.45 ವರ್ಷಗಳ ಸುದೀರ್ಘ ಹಾಗೂ ನಿಸ್ವಾರ್ಥ ಜನಸೇವೆ ಸಲ್ಲಿಸಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸಮಂಜಸವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಾ, ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ, ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಸಿ.ಸಿ ಪಾಟೀಲ್, ಶಾಸಕ ಸಿ.ಟಿ. ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications