ರೈತಪರ, ಅಭಿವೃದ್ಧಿ ಪರ ಬಜೆಟ್ : ಯಡಿಯೂರಪ್ಪ
ಬೆಂಗಳೂರು, ಫೆಬ್ರವರಿ 01 : 'ರೈತಪರ, ಬಡವರಪರ, ಗ್ರಾಮೀಣ ಜನರ ಮತ್ತು ಅಭಿವೃದ್ಧಿಯ ಪರವಾಗಿ ಆಯವ್ಯಯ ಮಂಡಿಸಿದ ವಿತ್ತ ಸಚಿವ ಅರುಣ್ ಜೇಟ್ಲಿಯವರಿಗೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು' ಎಂದು ಬಿ.ಎಸ್.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, 'ದೇಶದ ಪ್ರಗತಿಗೆ ಪೂರಕವಾಗಿರುವ ಈ ಐತಿಹಾಸಿಕ ಬಜೆಟ್, ನವ ಭಾರತದ ಪರಿವರ್ತನೆಯತ್ತ ಮೋದಿ ಸರ್ಕಾರದ ದಿಟ್ಟ ಹೆಜ್ಜೆಯಾಗಿದ್ದು ಇದನ್ನು ನಾನು ಸ್ವಾಗತಿಸುತ್ತೇನೆ' ಎಂದರು.
'ಸಮಗ್ರ ಭಾರತೀಯರ ಆಶೋತ್ತರಗಳನ್ನು ಪ್ರತಿನಿಧಿಸುವ ಜೊತೆಗೆ, ಎಲ್ಲಾ ವರ್ಗದ ಜನರಿಗೆ ಅಭಿವೃದ್ಧಿಯ ಲಾಭ ತಲುಪಬೇಕು ಮತ್ತು ಭವಿಷ್ಯದ ಸಧೃಡ ರಾಷ್ಟ್ರ ನಿರ್ಮಾಣದ ನಿಟ್ಟಿನಲ್ಲಿ ಈ ಬಜೆಟ್ ದಿಟ್ಟ ಹೆಜ್ಜೆಯಾಗಿದೆ' ಎಂದು ಯಡಿಯೂರಪ್ಪ ಬಣ್ಣಿಸಿದರು.

'ಗ್ರಾಮೀಣ ಮೂಲ ಸೌಕರ್ಯದ ಅಭಿವೃದ್ಧಿಗೆ 14.34 ಲಕ್ಷ ಕೋಟಿ ವಿನಿಯೋಗ, ಎಲ್ಲಾ ಬೆಳೆಗಳ ಮೇಲಿನ ಕನಿಷ್ಠ ಬೆಂಬಲ ಬೆಲೆಯನ್ನು ಉತ್ಪಾದನಾ ವೆಚ್ಚದ ಮೇಲೆ 1.5 ಪಟ್ಟು ಹೆಚ್ಚಳ, ಪ್ರಸಕ್ತ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ 11ಲಕ್ಷ ಕೋಟಿ ರೂ ಸಾಲ, ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಸಾವಯವ ಕೃಷಿಗೆ ಉತ್ತೇಜನ ಮೊದಲಾದ ಗ್ರಾಮ ಭಾರತ ಮತ್ತು ರೈತ ಭಾರತ ಪರಿವರ್ತನೆಯ ಕ್ರಮಗಳು ನಮ್ಮ ಬದ್ಧತೆಗೆ ನಿದರ್ಶನವಾಗಿದೆ' ಎಂದು ಯಡಿಯೂರಪ್ಪ ವಿವರಣೆ ನೀಡಿದರು.
'ಬುಡಕಟ್ಟು ಜನಾಂಗಗಳಿಗೆ ಏಕಲವ್ಯ ಶಾಲೆಗಳು ಮೊದಲಾದ ಕ್ರಮಗಳ ಜೊತೆಗೆ ಅತಿ ಸಣ್ಣ ಮತ್ತು ಮಧ್ಯಮ ಉದ್ಯಮ ವಲಯಗಳಿಗೆ ವಿಶೇಷ ಉತ್ತೇಜನ ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ' ಎಂದರು.
'ವಿಶೇಷವಾಗಿ ನಮ್ಮ ಬೆಂಗಳೂರಿನಲ್ಲಿ ಬಹಳ ಕಾಲದ ಬೇಡಿಕೆಯಾಗಿದ್ದ ಸಬ್ ಅರ್ಬನ್ ರೈಲ್ವೆ ನೆಟ್ ವರ್ಕ್ ಗಾಗಿ 17,000 ಕೋಟಿ ರೂ. ಮೀಸಲಿಡಲಾಗಿಡಲಾಗಿದೆ. ಅಭಿವೃದ್ಧಿಯ ನಿಟ್ಟಿನಲ್ಲಿ ಕೂಡ ಈ ಬಾರಿಯ ಬಜೆಟ್ ಸಕಾರಾತ್ಮಕವಾಗಿದೆ' ಎಂದು ಹೇಳಿದರು.
'ಆಯುಷ್ಮಾನ್ ಭಾರತ್ ಯೋಜನೆಯಡಿ 10ಕೋಟಿ ಬಡ ಕುಟುಂಬಗಳ ಅಂದಾಜು 50 ಕೋಟಿ ಜನರಿಗೆ, ವಾರ್ಷಿಕ 5 ಲಕ್ಷದವರೆಗೆ ಆರೋಗ್ಯ ವಿಮೆ ರಕ್ಷೆಯ ಐತಿಹಾಸಿಕ ಕ್ರಮ ಬಡಜನರ ಆರೋಗ್ಯಕ್ಕಾಗಿ ನರೇಂದ್ರ ಮೋದಿ ಸರ್ಕಾರದ ಪ್ರಾಮಾಣಿಕ ಕಾಳಜಿಗೆ ನಿದರ್ಶನವಾಗಿದೆ' ಎಂದು ತಿಳಿಸಿದರು.
ಜನಪ್ರಿಯ ಘೋಷಣೆಗಳಿಗೆ ಜೋತು ಬೀಳದೆ ದೀರ್ಘಕಾಲೀನ ಧನಾತ್ಮಕ ಪರಿಣಾಮ ನಿಷ್ಠವಾಗಿ, ದೇಶದ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿರುವ ಬಜೆಟ್ ಅನ್ನು ಮಂಡಿಸಿರುವುದಕ್ಕೆ ಮತ್ತೊಮ್ಮೆ ಸರ್ಕಾರವನ್ನು ಅಭಿನಂದಿಸುತ್ತೇನೆ' ಎಂದರು.











Click it and Unblock the Notifications