ದೇವೇಗೌಡರ ಹೋರಾಟದ ಕೆಚ್ಚು ನನಗೆ ಪ್ರೇರಣೆ: ಸಿದ್ದರಾಮಯ್ಯ
ಬೆಂಗಳೂರು, ಮೇ 18: ದೇವೇಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಹಲವು ರಾಷ್ಟ್ರ ಹಾಗೂ ರಾಜ್ಯ ನಾಯಕರುಗಳು ದೇವೇಗೌಡ ಅವರಿಗೆ ಶುಭಾಶಯ ಕೋರಿದ್ದಾರೆ. ಸಿದ್ದರಾಮಯ್ಯ ಅವರು ಸಹ ತಮ್ಮ ಒಂದು ಕಾಲದ ರಾಜಕೀಯ ಗುರುವಿಗೆ ಆತ್ಮೀಯವಾಗಿ ಶುಭಾಶಯಗಳನ್ನು ಹೇಳಿದ್ದಾರೆ.
ಇಂದು ಬೆಳಿಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ರೈತರು ಮತ್ತು ಗ್ರಾಮ ಭಾರತದ ಬಗೆಗಿನ ಅವರ ಕಾಳಜಿ ಹಾಗೂ ಇಳಿವಯಸ್ಸಿನಲ್ಲಿಯೂ ದಣಿವರಿಯದ ಹೋರಾಟದ ಕೆಚ್ಚು ನನಗೆ ಸದಾ ಪ್ರೇರಣೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆಗೆ ಮುನ್ನಾ ಹಾವು-ಮುಂಗುಸಿಯಂತೆ ಎಂಬಂತಾಗಿದ್ದ ಸಿದ್ದರಾಮಯ್ಯ-ದೇವೇಗೌಡ ಅವರುಗಳು ಮೈತ್ರಿ ಬಳಿಕ ಪರಸ್ಪರ ಗೌರವದ ಮಾತುಗಳನ್ನಾಡುತ್ತಿದ್ದಾರೆ. ಅದರಲ್ಲಿಯೂ ಸಿದ್ದರಾಮಯ್ಯ ಅವರು ದೇವೇಗೌಡ ಅವರನ್ನು ತಮ್ಮ ಆದರ್ಶಪ್ರಾಯ ಎಂದಿರುವುದು ಸಹಜವಾಗಿಯೇ ಆಶ್ಚರ್ಯ ಮೂಡಿಸಿದೆ.

'ದೇವೇಗೌಡ ಅವರು ನನ್ನ ರಾಜಕೀಯ ಗುರು ಅಲ್ಲ, ಅರಸು ನನ್ನ ರಾಜಕೀಯ ಗುರು' ಸಿದ್ದರಾಮಯ್ಯ ಅವರು ಒಮ್ಮೆ ಹೇಳಿದ್ದರು. ದೇವೇಗೌಡ ಅವರು ನನ್ನನ್ನು ಜೆಡಿಎಸ್ ನಿಂದ ಉಚ್ಛಾಟಿಸಿದರು ಎಂದೂ ಸಹ ಸಿದ್ದರಾಮಯ್ಯ ಅವರು ಇತ್ತೀಚೆಗಷ್ಟೆ ಹೇಳಿದ್ದರು, ಆದರೆ ಹಳೆಯ ರಾಜಕೀಯ ಕಿತ್ತಾಟವನ್ನು ಮರೆತು, ದೇವೇಗೌಡ ಅವರು ಹೋರಾಟವನ್ನು ಇಂದು ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ದೇವೇಗೌಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿರುವ ಸಿದ್ದರಾಮಯ್ಯ, ದೇವೇಗೌಡ ಅವರಿಗೆ ದೇವರು ಆರೋಗ್ಯ, ಆಯುಷ್ಯವನ್ನು ನೀಡಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications