ಪ್ರತ್ಯೇಕ ರಾಜ್ಯದ ಬೇಡಿಕೆ, ಉಲ್ಟಾ ಹೊಡೆದ ಶಾಸಕ ನಡಹಳ್ಳಿ
ಬೆಳಗಾವಿ, ಜುಲೈ 09 : ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂದು ಬೇಡಿಕೆ ಇಟ್ಟಿದ್ದ ದೇವರಹಿಪ್ಪರಗಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಉಲ್ಟಾ ಹೊಡೆದಿದ್ದಾರೆ. ಅಖಂಡ ಕರ್ನಾಟಕಕ್ಕಾಗಿ ನನ್ನ ಹೋರಾಟ ಎಂದು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಗುರುವಾರದ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿದ್ದ ಎ.ಎಸ್.ಪಾಟೀಲ ನಡಹಳ್ಳಿ ಅವರು, 'ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧಿಯಲ್ಲ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕು ಎಂಬುದು ನನ್ನ ಉದ್ದೇಶವಲ್ಲ' ಎಂದರು. [ಪ್ರತ್ಯೇಕ ರಾಜ್ಯ : ಶಾಸಕನ ಅಮಾನತಿಗೆ ಶಿಫಾರಸು]

'ಪತ್ಯೇಕ ರಾಜ್ಯಕ್ಕಾಗಿ ಅಲ್ಲ, ಅಖಂಡ ಕರ್ನಾಟಕಕ್ಕಾಗಿ ನಾನು ಹೋರಾಟ ಮಾಡುತ್ತೇನೆ. ನನ್ನ ಮಾತಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋವಾಗಿದ್ದರೆ ಅವರ ಕ್ಷಮೆ ಕೇಳುವೆ' ಎಂದು ಹೇಳಿ ಅಚ್ಚರಿ ಮೂಡಿಸಿದರು. [ಶಾಸಕ ಎ.ಎಸ್.ಪಾಟೀಲ ಉಚ್ಛಾಟನೆ?]
'ಸರ್ಕಾರ ಉತ್ತರ ಕರ್ನಾಟಕ ಭಾಗವನ್ನು ತಾರತಮ್ಯ ಮಾಡುತ್ತಿದೆ ಎಂದು ನಾನು ಹೋರಾಟ ಆರಂಭಿಸಿದೆ. ಆದರೆ, ಪ್ರತ್ಯೇಕ ರಾಜ್ಯಬೇಕು ಎಂದು ನಾನು ಬೇಡಿಕೆ ಇಡುತ್ತಿಲ್ಲ' ಎಂದು ಎ.ಎಸ್.ಪಾಟೀಲ ಅವರು ಸ್ಪಷ್ಟಪಡಿಸಿದರು. [ಇಂದಿನ ಕಲಾಪದ ಮುಖ್ಯಾಂಶಗಳು]
2015ರ ಏ.8ರಂದು ಎ.ಎಸ್.ಪಾಟೀಲ ಅವರು 'ಸರ್ಕಾರ ಉತ್ತರ ಕರ್ನಾಟಕದ ಅಭಿವೃದ್ಧಿಯನ್ನು ಕಡೆಗಣಿಸುತ್ತಿದೆ. ಆದ್ದರಿಂದ ಪ್ರತ್ಯೇಕ ರಾಜ್ಯ ಮಾಡಿ' ಎಂಬ ಬೇಡಿಕೆ ಇಟ್ಟಿದ್ದರು. ಈ ಹೇಳಿಕೆಯಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದೆ. ತಕ್ಷಣ ಹೇಳಿಕೆ ವಾಪಸ್ ಪಡೆಯಿರಿ ಎಂದು ಪಾಟೀಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿತ್ತು.
ತಮ್ಮ ಹೇಳಿಕೆ ವಾಪಸ್ ಪಡೆಯದ ಮತ್ತು ಶೋಕಾಸ್ ನೋಟಿಸ್ಗೆ ಉತ್ತರ ನೀಡಿದ ಪಾಟೀಲ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಕೆಪಿಸಿಸಿ ಎಐಸಿಸಿಗೆ ಶಿಫಾರಸು ಮಾಡಿತ್ತು. ಇಂದು ಅಚ್ಚರಿ ಎಂಬಂತೆ ಶಾಸಕರು ಯು-ಟರ್ನ್ ತೆಗೆದುಕೊಂಡಿದ್ದಾರೆ.












Click it and Unblock the Notifications