ನೂತನ ಶಾಸಕರ ತರಬೇತಿ ಶಿಬಿರದಲ್ಲಿ ಚುನಾವಣಾ ಟಾರ್ಗೆಟ್ ಗುಟ್ಟು ರಟ್ಟು ಮಾಡಿದ ಡಿಕೆ ಶಿವಕುಮಾರ್?
ಬೆಂಗಳೂರು, ಜೂನ್ 28: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವುವನ್ನ ಕಾಂಗ್ರೆಸ್ ಸಾಧಿಸಿದ್ದು, ಸರ್ಕಾರ ರಚನೆಯ ಒಂದು ತಿಂಗಳ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ಅವರು ಚುನಾವಣಾ ಟಾರ್ಗೆಟ್ನ ಗುಟ್ಟು ರಟ್ಟು ಮಾಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ, ನೆಲಮಂಗಲ ತಾಲ್ಲೂಕಿನ, ಕುಣಿಗಲ್ ಬೈಪಾಸ್ ರಸ್ತೆಯ, ಮಹದೇವಪುರದಲ್ಲಿರುವ ಎಸ್ಡಿಎಂ ಇನ್ಸ್ಟಿಟ್ಯೂಟ್ ಆಫ್ ನ್ಯಾಚುರೋಪತಿ ಅಂಡ್ ಯೋಗಿಕ್ ಸೈನ್ಸಸ್-ಕ್ಷೇಮವನದಲ್ಲಿ 16 ನೇ ವಿಧಾನಸಭೆಯ ನೂತನ ಸದಸ್ಯರು ಏರ್ಪಡಿಸಿದ್ದ ತರಬೇತಿ ಶಿಬಿರದಲ್ಲಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮಗೆ ನೀಡಲಾಗಿದ್ದ ಚುನಾವಣಾ ಟಾರ್ಗೆಟ್ನ ಗುಟ್ಟು ರಟ್ಟು ಮಾಡಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಕೆಲ ಬಿಜೆಪಿ ನಾಯಕ ಕುರಿತು ಹಾಕಿಕೊಂಡಿದ್ದ ಟಾರ್ಗೆಟ್ ಅನ್ನ ಹೇಳಿದ್ದಾರೆ. ಈ ಹಿಂದೆ ಬಿಜೆಪಿ ಡಬಲ್ ಎಂಜಿನ್ ಸರ್ಕಾರವಿತ್ತು, ಬಿಜೆಪಿಯವರು ಏನೇನೋ ಮಾಡಿದ್ದರು. ಆದರೆ, ನಾನು ಟಾರ್ಗೆಟ್ ಶೂಟ್ ಮಾಡಿದೆ, ಅದು ಉತ್ತಮವಾಗಿತ್ತು. ನಮ್ಮ ಪಕ್ಷಕ್ಕೆ ಗೆಲುವು ಸಿಕ್ಕಿತ್ತು. ನಮಗೆ ಇನ್ನೂ ಬಿಜೆಪಿಯ ಮೂರರಿಂದ ನಾಲ್ಕು ಶಾಸಕರ ಟಾರ್ಗೆಟ್ ಇತ್ತು. ಆ ಟಾರ್ಗೆಟ್ ಮಿಸ್ ಆಯಿತು, ಪರವಾಗಿಲ್ಲ ಮುಂದೆ ನೋಡೋಣ ಎಂದು ಶಿಬಿರದಲ್ಲಿ ಶಿವಕುಮಾರ್ ಹೇಳಿದ್ದಾರೆ ಎನ್ನಲಾಗಿದೆ.
ನಮ್ಮ ಪಕ್ಷಕ್ಕೆ ಜನರು ಆಶೀರ್ವಾದ ಮಾಡಿದ್ದಾರೆ. ಜನರಿಗಾಗಿ ಶ್ರಮಿಸಿ, ಜನರ ಸ್ವಾಭಿಮಾನಕ್ಕೆ ಯಾವುದೇ ರೀತಿ ಧಕ್ಕೆ ತರುವಂತಹ ಕೆಲಸವನ್ನ ಮಾಡಬೇಡಿ. ಸ್ವಾಭಿಮಾನಕ್ಕೆ ಧಕ್ಕೆ ತಂದ್ರೆ ಜನರು ನಿಮ್ಮ ಜೊತೆ ನಿಲ್ಲಲ್ಲ ಎಂದು ಡಿಕೆ ಶಿವಕುಮಾರ್ ನೂತನ ಶಾಸಕರಿಗೆ ಕಿವಿ ಮಾತು ಕೇಳಿದ್ದು, ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಜನರಿಗಾಗಿ ಶ್ರಮಿಸಿದರೆ ಅವರು ನಮ್ಮ ಜತೆ ನಿಲ್ಲುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆ ಎಂದರೇ ಅದು ನಾನೇ ಎಂದು ಕಾಂಗ್ರೆಸ್ ನೂತನ ಶಾಸಕರಿಗೆ ಹೇಳಿದ್ದಾರೆ.
ಈ ಹಿಂದೆ ನನ್ನನ್ನು ಜೈಲಿಗೆ ಹಾಕಿಸಿದ್ರು. ನಾನು ಜೈಲಿಗೆ ಹೋದೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದೆ. ಆದರೆ 50 ರಿಂದ 75 ಸಾವಿರ ಜನರು ಬಂದು ನನ್ನ ಮೆರವಣಿಗೆ ಮಾಡಿದರು ಎಂದು ಹೇಳಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮೂರು ದಿನಗಳ ಶಿಬಿರ ಆಯೋಜಿಸಿದ್ದಾರೆ.
ರಾಜಕೀಯ ಪಕ್ಷಗಳ ನಿಲುವು ಏನೇ ಇರ್ಲಿ , ಸಿದ್ದಾಂತಗಳು ಇರ್ಲಿ, ಆದರೆ ಒಟ್ಟು ರಾಜಕೀಯ, ಒಟ್ಟು ರಾಜ್ಯ, ದೇಶವನ್ನ ಕಟ್ಟುವ ಕೆಲಸವನ್ನ ಮಾಡೋಣ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನ ಗಟ್ಟಿ ಮಾಡುವ ಶಕ್ತಿ ನಿಮ್ಮಲಿದೆ , ಆ ಶಕ್ತಿಯನ್ನ ಬಳಕೆ ಮಾಡಿಕೊಳ್ಳಿ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಇನ್ನೂ ಈ ಶಿಬಿರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ.ಎಸ್.ಹೊರಟ್ಟಿ, ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಷರೀದ್, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝಡ್.ಜಮೀರ್ ಅಹಮದ್ ಖಾನ್, ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ, ಶ್ರೀ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಸುರೇಂದ್ರಕುಮಾರ್ ಸೇರಿದಂತೆ ನೂತನ ಶಾಸಕರುಗಳು ಉಪಸ್ಥಿತರಿದ್ದರು.












Click it and Unblock the Notifications