ದಸರಾ ನಿಗದಿ ಮಾಡುವುದು ಹಿಂದೂ ಪಂಚಾಂಗ: ಡಿಸಿಎಂಗೆ ಯದುವೀರ್ ಕೌಂಟರ್
ಚಾಮುಂಡೇಶ್ವರಿ ತಾಯಿ ಹಾಗೂ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದು ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಸಂಸದರೂ ಆದ ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರು ಈ ಹೇಳಿಕೆಯನ್ನು ಖಂಡಿಸಿದ್ದರು. ಬಿಜೆಪಿ ನಾಯಕರು ಕೂಡ ಡಿಕೆಶಿ ಹೇಳಿದ್ದು ತಪ್ಪು, ಚಾಮುಂಡಿ ಬೆಟ್ಟ ಖಂಡಿತವಾಗಿಯೂ ಹಿಂದೂಗಳ ಆಸ್ತಿನೇ ಎಂದಿದ್ದರು. ಬಳಿಕ ಇದನ್ನು ರಾಜಕೀಯ ಮಾಡಬೇಡಿ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದರು. ಟಾಕ್ ವಾರ್ ಮುಂದುವರಿಸಿರುವ ಯದುವೀರ್ ಒಡೆಯರ್, ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.
'ಚಾಮುಂಡಿ ಬೆಟ್ಟ ಎಲ್ಲ ಧರ್ಮ-ಸಮುದಾಯದವರಿಗೂ ಮುಕ್ತವಾಗಿ ತೆರೆದಿದೆ. ತಾಯಿಯನ್ನ ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ-ಧರ್ಮಗಳಲ್ಲಿದ್ದಾರೆ. ಆದರೆ, ಚಾಮುಂಡಿ ಬೆಟ್ಟ ಒಂದು ಶಕ್ತಿಪೀಠ. ತಾಯಿ ಚಾಮುಂಡೇಶ್ವರಿ ಹಿಂದೂ ದೇವಿ, ಆಕೆಯ ಉಲ್ಲೇಖ ಹಿಂದೂ ಗ್ರಂಥವಾದ ಮಾರ್ಕಂಡೇಯ ಪುರಾಣದ ದೇವಿ ಮಹಾತ್ಮ್ಯದಲ್ಲಿದೆ. ಬೇರೆ ಧರ್ಮಗಳ ಗ್ರಂಥಗಳಲ್ಲಿ ಇಲ್ಲ. ಪ್ರತಿದಿನವೂ ಹಿಂದೂ ಶಾಸ್ತ್ರಾನುಸಾರವೇ ಪೂಜೆ-ಪರಂಪರೆ ನಡೆಯುತ್ತಿವೆ. ಇಲ್ಲಿಗೆ ಬರುವ ಎಲ್ಲರೂ ಆಕೆಯನ್ನು ಹಿಂದೂ ದೇವಿಯಾಗಿಯೇ ಆರಾಧಿಸುತ್ತಾರೆ' ಎಂದು ಯದುವೀರ್ ತಿರುಗೇಟು ನೀಡಿದ್ದಾರೆ.

'ದಸರಾ ನಮ್ಮ ನಾಡಿನ ಅತಿದೊಡ್ಡ ಸಾಂಸ್ಕೃತಿಕ ಸಂಭ್ರಮ. ಅಲ್ಲಿ ಎಲ್ಲ ಧರ್ಮದವರು ಪಾಲ್ಗೊಳ್ಳಬಹುದು, ಆದರೆ ಮೂಲತಃ ಅದು ಹಿಂದೂ ಹಬ್ಬ. ಅದರ ದಿನಾಂಕವನ್ನು ನಿಗದಿಪಡಿಸುವುದು ಹಿಂದೂ ಪಂಚಾಂಗ. ಯಾರದೋ ಇಚ್ಛೆ-ಮನೋಭಾವಕ್ಕೆ ಅನುಗುಣವಾಗಿ ಬದಲಾಯಿಸುವ ಹಬ್ಬವಲ್ಲ' ಎಂದು ಕೌಂಟರ್ ಕೊಟ್ಟಿದ್ದಾರೆ.
'ನೀವು ಒಂದು ಕುಟುಂಬವನ್ನೇ ನಿಮ್ಮ ದೇವರನ್ನಾಗಿ ಮಾಡಿಕೊಂಡಿದ್ದೀರಿ. ಹೀಗಿರುವಾಗ, ದೇವಿಯ ಹಿಂದೂ ಸ್ವರೂಪವನ್ನೂ, ದಸರೆಯ ಧಾರ್ಮಿಕ ಪರಂಪರೆಯನ್ನೂ ನಿರಾಕರಿಸುವ ದುಸ್ಸಾಹಸ ಮಾಡಬೇಡಿ. ನಾವು ರಾಜಕೀಯ ಮಾಡುತ್ತಿಲ್ಲ. ನೀವು ಓಲೈಕೆ ರಾಜಕೀಯಕ್ಕಾಗಿ ನಮ್ಮ ಧರ್ಮದ ಮೇಲೆ ದಾಳಿ ಮಾಡಿದಾಗ, ಅದನ್ನು ರಕ್ಷಿಸಲು ನಾವು ಎದ್ದು ನಿಂತಿದ್ದೇವೆ' ಎಂದಿದ್ದಾರೆ.
'ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು!'
'ತಮ್ಮ ಹೇಳಿಕೆಗೆ ವಿವಾದ ಸೃಷ್ಟಿಯಾದ ಬೆನ್ನಲ್ಲೆ ನಮ್ಮ ನಾಡ ಹಬ್ಬ ದಸರಾ, ನಮ್ಮ ನಾಡ ದೇವತೆ ಚಾಮುಂಡೇಶ್ವರಿ ಎಂದಿದ್ದಾರೆ ಡಿಸಿಎಂ. ಚಾಮುಂಡೇಶ್ವರಿ ತಾಯಿ ನಮ್ಮ ನಾಡಿನ ಅಧಿದೇವತೆ. ಈ ತಾಯಿಯನ್ನು ಆರಾಧಿಸುವವರು, ನಂಬುವವರು, ಗೌರವಿಸುವವರು ಎಲ್ಲ ಜಾತಿ, ಧರ್ಮಗಳಲ್ಲೂ ಇದ್ದಾರೆ. ಆಕೆಯ ದರ್ಶನ ಎಲ್ಲರ ಹಕ್ಕು. ತಾಯಿ ಎಲ್ಲ ಭಕ್ತರ, ನಾಡಿನ ಎಲ್ಲ ಮಕ್ಕಳ ಆಸ್ತಿ, ಯಾರೊಬ್ಬರಿಗೂ ಸೀಮಿತ ಅಲ್ಲ. ತಾಯಿಯನ್ನು ಪೂಜಿಸಿದರೆ ಯಾರೂ ಬೇಡ ಅನ್ನಲು ಆಗುವುದಿಲ್ಲ. ಇದೇ ನನ್ನ ಮಾತಿನ ಸತ್ವ. ವಿವಾದ ಮಾಡೋದು ಬಿಜೆಪಿ ತತ್ವ' ಎಂದು ಡಿ.ಕೆ.ಶಿವಕುಮಾರ್ ತಮ್ಮ ಹೇಳಿಕೆ ಸಮರ್ಥಿಸಿಕೊಂಡಿದ್ದಾರೆ.
'ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮ, ಸಮಾಜದವರಿಗೂ ಪ್ರವೇಶವಿದೆ. ಎಲ್ಲರೂ ಬೆಟ್ಟಕ್ಕೆ ಹೋಗುತ್ತಾರೆ. ದೇವಿಯ ಪ್ರಾರ್ಥನೆ ಮಾಡುತ್ತಾರೆ. ಎಲ್ಲರ ನೋವನ್ನು ದೂರ ಮಾಡುವಳು ನಮ್ಮ ದುರ್ಗಾ ದೇವಿ. ನಾಡ ಹಬ್ಬ ದಸರಾವನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಜನ ಬರುತ್ತಾರೆ. ಇದಕ್ಕೆ ನಮ್ಮ ರಾಜವಂಶಸ್ಥರೇ ಅನುಮತಿ ನೀಡಿ ಸಾಕ್ಷಿಯಾಗಿದ್ದಾರೆ. ನಾಡ ಹಬ್ಬ ದಸರಾ ಎಲ್ಲ ಧರ್ಮದವರಿಗೂ ಸೇರಿದ್ದು. ಧರ್ಮದಲ್ಲಿ ರಾಜಕಾರಣ ಮಾಡುವುದು ಬೇಡ, ಅದನ್ನು ಆ ತಾಯಿಯೂ ಮೆಚ್ಚುವುದಿಲ್ಲ' ಎಂದು ಯದುವೀರ್ ಅವರಿಗೆ ಡಿಸಿಎಂ ತಿರುಗೇಟು ನೀಡಿದ್ದಾರೆ.












Click it and Unblock the Notifications